ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಮತದಾರರ ಜಾಗೃತಿ ಜಾಥಾ

ಶೇರ್ ಮಾಡಿ

ರಾಮಕುಂಜ: ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರು ಹಾಗು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿ ಮತದಾರರ ಜಾಗೃತಿ ಜಾಥಾವು ನಡೆಸಿದರು.
ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ ಇವರು ಈ ಜಾಥಾಕ್ಕೆ ಚಾಲನೆ ನೀಡಿದರು. ಮತದಾರರಲ್ಲಿ ಜಾಗೃತಿ ಮೂಡಿಸುವ ಘೋಷಣಾ ಫಲಕಗಳನ್ನು, ಘೋಷಣೆಗಳನ್ನು ಕೂಗುತ್ತಾ ಕಾಲೇಜಿನಿಂದ ಹೊರಟ ಜಾಥಾವು ಆತೂರಿನ ವರೆಗೆ ಸಾಗಿ ರಾಮಕುಂಜ ಪಂಚಾಯತ್ ಸಭಾಂಗಣದಲ್ಲಿ ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯತ್ ರಾಜ್ ತರಬೇತುದಾರ, ಪತ್ರಕರ್ತರು ಆಗಿರುವ ಸಂಶುದ್ಧೀನ್ ರವರು “ಈ ದೇಶದ ಪ್ರತಿ ಪ್ರಜೆಯು ತಮ್ಮ ಹಕ್ಕಾದ ಮತದಾನವನ್ನು ಚಲಾಯಿಸಬೇಕು. ವಿದ್ಯಾರ್ಥಿಗಳಾದ ನೀವು ಹದಿನೆಂಟು ವರ್ಷ ತುಂಬಿದ ಕೂಡಲೇ, ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡು, ಹೆಮ್ಮೆಯಿಂದ ತಮ್ಮ ಇಷ್ಟದ ಅಭ್ಯರ್ಥಿಗೆ ಮತ ಚಲಾವಣೆ ಮಾಡಬೇಕು. ಒಂದು ವೇಳೆ ಯಾವುದೇ ಅಭ್ಯರ್ಥಿಯು ಅಧಿಕಾರಕ್ಕೆ ಬರುವುದರಲ್ಲಿ ನಿಮಗೆ ಸಹಮತವಿಲ್ಲದಿದ್ದರೆ, ನೋಟಾ ಮತ ಚಲಾವಣೆಯನ್ನು ಮಾಡಬಹುದು. ನಿಮ್ಮ ಒಂದು ವೋಟು ರಾಷ್ಟ್ರಕಟ್ಟುವಲ್ಲಿ ಮಹತ್ತರವಾದ ಪಾತ್ರ ವಹಿಸಲಿದೆ. ಜಾಥಾದ ಮೂಲಕ ಜಾಗೃತಿ ಮೂಡಿಸಿ, ನೀವೂ ಮತದಾನದ ಮಹತ್ವವನ್ನು ಅರಿತುಕೊಂಡಿದ್ದೀರಿ. ನಿಮಗೆಲ್ಲರಿಗೆ ಶುಭವಾಗಲಿ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾ(ರಿ) ಇದರ ಸದಸ್ಯರಾದ ಲಕ್ಷ್ಮೀನಾರಾಯಣ ಆತೂರು, ಉಪನ್ಯಾಸಕರಾದ ಗುಡ್ಡಪ್ಪ ಬಲ್ಯ, ಸತೀಶ್ ಜಿ ಆರ್, ಶಿವಪ್ರಸಾದ್, ಭರತ್, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ಚೇತನ್ ಎಂ ಸ್ವಾಗತಿಸಿದರು. ಹಿರಿಯ ಉಪನ್ಯಾಸಕರಾದ ವಸಂತ ಕುಮಾರ್ ಡಿ ವಂದಿಸಿದರು.

Leave a Reply

error: Content is protected !!