ತುಳುನಾಡಿನ ಗುಳಿಗ ದೈವಕ್ಕೆ ಅಪಮಾನ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಕ್ಷಮೆ ಯಾಚಿಸಬೇಕು: ಎಸ್. ಪ್ರಭಾಕರ ಶಾಂತಿಕೋಡಿ

ಶೇರ್ ಮಾಡಿ

ಬೆಳ್ತಂಗಡಿ: ಗೃಹ ಸಚಿವ ಆರಗ ಜ್ಞಾನೇಂದ್ರ ತುಳುನಾಡಿನ ಆರಾಧನೆಯ ಗುಳಿಗ ದೈವಕ್ಕೆ ಜಾಪಾಳ್ ಗುಳಿಗೆ ಎಂದು ಹೇಳಿ ಅವಮಾನ ಮಾಡಿದ್ದಾರೆ. ಇವರು ಗುಳಿಗ ದೈವದ ಸನ್ನಿಧಿಯಲ್ಲಿ ಬಂದು ಕ್ಷಮೆ ಯಾಚಿಸಬೇಕು ಎಂದು ಬೆಳ್ತಂಗಡಿ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್. ಪ್ರಭಾಕರ ಶಾಂತಿಕೋಡಿ ಹೇಳಿದರು.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳುನಾಡಿನ ದೈವದ ಹೆಸರು ಹೇಳುವ ನೈತಿಕತೆ ಸಿ.ಟಿ. ರವಿಯವರಿಗೆ ಇಲ್ಲ. ಅವರು ತುಳುನಾಡಿನ ಎಲ್ಲ ದೈವಗಳು ಬಿಜೆಪಿ ಪರ ಎಂದು ಹೇಳಿದ್ದಾರೆ. ಇಂತಹ ಹೇಳಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ. ಇವರು ಕ್ಷಮೆ ಕೇಳಬೇಕಾಗಿದೆ ಇಲ್ಲದೆ ಇದ್ದರೆ ಅವರು ಬರುವ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದರು.

ಕನ್ನಡ ಸಂಸ್ಕೃತಿಯ ಸಚಿವ ಸುನಿಲ್ ಕುಮಾರ್ ದೈವ ನರ್ತನ ಕಲಾವಿದರಿಗೆ ಪಿಂಚಣಿ ನೀಡುವ ಭರವಸೆ ನೀಡಿದ್ದರು ಆದರೆ ಇವರಿಗೆ ಪಿಂಚಣಿ ಭಾಗ್ಯ ಇನ್ನೂ ಬರಲಿಲ್ಲ. ಇದು ಕೂಡ ದೈವ ನರ್ತನ ಕಲಾವಿದರಿಗೆ ಮಾಡಿದ ಅವಮಾನವಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಕೊರಗಜ್ಜನ ಕಟ್ಟೆ ಮಾಡಿ ಹರಕೆಯ ವಿಷಯದಲ್ಲಿ ದುಡ್ಡು ಮಾಡುವ ದಂಧೆ ನಡೆಯುತ್ತಿದೆ, ಯಕ್ಷಗಾನ, ನಾಟಕಗಳಲ್ಲಿ ಕೊರಗಜ್ಜನಿಗೆ ಅವಮಾನ ಮಾಡಲಾಗುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು. ಈ ಎಲ್ಲಾ ಅವಮಾನವನ್ನು ಖಂಡಿಸಿ ದೈವಾರಾಧಕರ ಜಿಲ್ಲಾ ಸಮಾವೇಶ ಮಾಡಲಾಗುವುದು ಎಂದರು.

ಗೋಷ್ಠಿಯಲ್ಲಿ ನಲಿಕೆಯವರ ಸಮಾಜ ಸೇವಾ ಸಂಘದ ತಾಲೂಕು ಸಮಿತಿ ಉಪಾಧ್ಯಕ್ಷ ರಾಮು ಶಿಶಿಲ, ಮಾಜಿ ಕಾರ್ಯದರ್ಶಿ ಅನಂತ ಮುಂಡಾಜೆ, ದೈವಾರಾಧನ ಸಮಿತಿ ಅಧ್ಯಕ್ಷ ಜನಾರ್ದನ ಬಳ್ಳಮಂಜ, ಯುವ ವೇದಿಕೆಯ ಮಾಜಿ ಕಾರ್ಯದರ್ಶಿ ರಮೇಶ್ ಕೇಳ್ತಾಜೆ ಉಪಸ್ಥಿತರಿದ್ದರು.

Leave a Reply

error: Content is protected !!