ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಶಾಲಾ ಪ್ರಾರಂಭೋತ್ಸವ.

ಶೇರ್ ಮಾಡಿ

ಪಟ್ಟೂರು: ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ನೂತನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ವನ್ನು ಮೇ.31ರಂದು ನಡೆಸಲಾಯಿತು.

ವಿದ್ಯಾರ್ಥಿಗಳು ಶಾಲೆಗೆ ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿ ಶಾಲಾ ವೇದವ್ಯಾಸ ಪ್ರಾರ್ಥನಾ ಮಂದಿರದಲ್ಲಿ ಆಸೀನರಾದರು.

ಬಳಿಕ ಶಾಲಾ ಸಂಚಾಲಕರಾದ ಪ್ರಶಾಂತ್ ಶೆಟ್ಟಿ ದೇರಾಜೆ ದೀಪ ಬೆಳಗುವುದರ ಮೂಲಕ ಪ್ರಾರಂಭದ ದಿನಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಸರಸ್ವತಿ ವಂದನೆಯನ್ನು ಮಾಡಿದರು.

ಬಳಿಕ ಮಾತನಾಡಿದ ಪ್ರಶಾಂತ್ ಶೆಟ್ಟಿ ದೇರಾಜೆರವರು ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ, ಶಿಸ್ತು, ಜೀವನಕ್ರಮ ಮೈಗೂಡಿಸಿಕೊಂಡು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಇಲ್ಲಿನ ವಿದ್ಯಾರ್ಥಿಗಳು ಬೆಳೆಯುವಂತಾಗಬೇಕು ಎಂದರು.
ಮುಖ್ಯ ಶಿಕ್ಷಕರಾದ ಚಂದ್ರಶೇಖರ ಶೇಟ್ ಮಾತನಾಡಿ, 2022 -23 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಪಟ್ಟೂರು ಶ್ರೀರಾಮ ಶಾಲೆಯು ದಾಖಲೆ ಫಲಿತಾಂಶವನ್ನು ಸಾಧಿಸಿದ್ದು, ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ನೀಡುತ್ತಿರುವುದರಿಂದ ಶಾಲೆಯ ದಾಖಲಾತಿಯಲ್ಲಿ ಏರಿಕೆ ಕಂಡು ಬಂದಿದ್ದು ಶ್ಲಾಘನೀಯ ಎಂದರು. ಶಾಲೆಗೆ ದಾಖಲಾದ ಎಲ್ಲಾ ವಿದ್ಯಾರ್ಥಿಗಳಿಗೂ ಈ ಶೈಕ್ಷಣಿಕ ವರ್ಷವೂ ಉತ್ತಮ ಸಾಧನೆಗೆ ಅವಕಾಶ ದೊರೆಯುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭ ಆಡಳಿತ ಸಮಿತಿಯ ಜೊತೆ ಕಾರ್ಯದರ್ಶಿ ಗಣೇಶ್ ಕೆ ಹಿತ್ತಿಲು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪೋಷಕರು ಸರಸ್ವತಿ ವಂದನೆಯಲ್ಲಿ ಪಾಲ್ಗೊಂಡರು. ಮಧ್ಯಾಹ್ನ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಸಹಿತ ಭೋಜನವನ್ನು ನೀಡಲಾಯಿತು.

Leave a Reply

error: Content is protected !!