ವಿದ್ಯಾರ್ಥಿ ಸೇರಿ ಮೂವರು ಗಾಂಜಾ ಪೆಡ್ಲರ್‌ಗಳ ಬಂಧನ

ಉಡುಪಿ: ವಿದ್ಯಾರ್ಥಿ ಸೇರಿದಂತೆ ಮೂರು ಜನ ಗಾಂಜಾ ಪೆಡ್ಲರ್‌ಗಳನ್ನು ಬಂಧಿಸಿ ಸುಮಾರು 75,000 ರೂ.ಮೌಲ್ಯದ 1.5 ಕೆ.ಜಿ. ಗಾಂಜಾ ವಶಪಡಿಸಿಕೊಂಡ ಘಟನೆ ಮಣಿಪಾಲದಲ್ಲಿ ಬುಧವಾರ ನಡೆದಿದೆ.

ಹೆರ್ಗ ಗ್ರಾಮದ ಅಪಾರ್ಟ್‌ಮೆಂಟ್ ಮೇಲೆ ದಾಳಿ ಮಾಡಿ ಅಲ್ಲಿ ವಾಸವಾಗಿದ್ದ ವಿದ್ಯಾರ್ಥಿ ಶಶಾಂಕ(25) ಹಾಗೂ ಆತನ ಜತೆಗಿದ್ದ ಕಾರ್ಕಳದ ಪೆಡ್ಲರ್, ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವ ಆದಿಲ್ (36)ನನ್ನು ಬಂಧಿಸಿ ಸುಮಾರು 300 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಅನಂತರ ಆದಿಲ್ ನೀಡಿದ ಮಾಹಿತಿಯ ಆಧಾರದ ಮೇಲೆ ಹಿರಿಯಡ್ಕ -ಕಾರ್ಕಳ ರಸ್ತೆೆಯಲ್ಲಿ ಕಾರ್ಕಳ ಮೂಲದ ನೌಶದ್(27)ನನ್ನು ವಶಕ್ಕೆ ಪಡೆದು ಆತನಿಂದ ಸುಮಾರು 1 ಕೆಜಿ 100 ಗ್ರಾಂ. ಗಾಂಜಾ ವಶ ಪಡಿಸಿಕೊಳ್ಳಲಾಗಿದೆ.

ಉಪ್ಪಳದಿಂದ ಗಾಂಜಾ ರವಾನೆ
ವಿಚಾರಣೆಯಿಂದ ಆದಿಲ್ ಮತ್ತು ನೌಶದ್ ಎಂಬ ಗಾಂಜಾ ಪೆಡ್ಲರ್‌ಗಳು ಆತನ ಸ್ನೇಹಿತ ಕಾರ್ಕಳ ಮೂಲದ ಪ್ರಸ್ತುತ ವಿದೇಶದಲ್ಲಿರುವ ಇಮ್ರಾನ್ ಖಾನ್ ಶಕೀಲ್‌ನು ನೌಶದ್ ಮತ್ತು ಆದಿಲ್‌ನನ್ನು ಸಂಪರ್ಕಿಸಿ ಕಾಸರಗೋಡಿನ ಉಪ್ಪಳದಿಂದ ಗಾಂಜಾ ಮಾರಾಟ ಮಾಡುತ್ತಿರುವುದು ತನಿಖೆಯಿಂದ ಕಂಡು ಬಂದಿದೆ.

ಪ್ರಕರಣದ ಮುಖ್ಯ ಆರೋಪಿ ಇಮ್ರಾನ್ ಖಾನ್‌ನ ಪತ್ತೆಗೆ ಜಿಲ್ಲಾಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಅವರು ಮಣಿಪಾಲ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ತಂಡ ರಚಿಸಿ ಆತನ ವಿರುದ್ಧ ಲುಕ್ ಔಟ್ ನೊಟೀಸ್ ಹೊರಡಿಸಲು ಸೂಚಿಸಿದ್ದಾರೆ. ಮಾದಕ ವಸ್ತುಗಳ ಜಾಲದ ಬಗ್ಗೆೆ ತನಿಖೆ ಮುಂದುವರಿಸಲಾಗಿದೆ.

Leave a Reply

error: Content is protected !!