ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರು? ಪ್ರಶ್ನಿಸಿದ ಹೈಕೋರ್ಟ್

ಶೇರ್ ಮಾಡಿ

ಮಂಗಳೂರಿನಲ್ಲಿ ಯೂ ಟ್ಯೂಬ್ ಚಾನೆಲ್‌ಗೆ ಸ೦ದರ್ಶನ ನೀಡಿ ಹಿಂತಿರುಗುತ್ತಿದ್ದ ವೇಳೆ ಉಜಿರೆ ಗ್ರಾಮದ ಪಣೆಯಾಲು ನಿವಾಸಿ ಭಾಸ್ಕರ್ ನಾಯ್ಕ (50ವ) ಎಂಬವರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿ ಜಾತಿ ನಿಂದನೆ ಮಾಡಿದ ಆರೋಪ ಎದುರಿಸುತ್ತಿರುವ ಪ್ರಜಾಪ್ರಭುತ್ವ ವೇದಿಕೆ ಮುಖ್ಯಸ್ಥ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಹೈಕೋರ್ಟ್ ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿದೆ.

ಮಹೇಶ್ ಶೆಟ್ಟಿ ವಿರುದ್ಧ ಜಾಮೀನು ರಹಿತ ಕೇಸು ದಾಖಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಮಹೇಶ್ ಶೆಟ್ಟಿ ಅಲ್ಲಲ್ಲಿ ಬಹಿರಂಗ ವೇದಿಕೆ ಮೂಲಕ ಭಾಷಣ ಮಾಡುತ್ತಿದ್ದಾರೆ. ಆದರೂ ಕ್ರಮ ಕೈಗೊಂಡಿಲ್ಲ. ಪೊಲೀಸ್ ಇಲಾಖೆ ಮಹೇಶ್ ಶೆಟ್ಟಿ ಜತೆ ಸೇರಿಕೊಂಡಿದೆಯೇ ಎಂದು ತನಿಖಾಧಿಕಾರಿಯವರನ್ನು ಪ್ರಶ್ನೆ ಮಾಡಿರುವ ಹೈಕೋರ್ಟ್ ನ್ಯಾಯಮೂರ್ತಿಗಳು ಪ್ರಕರಣದ ಕುರಿತು 15 ದಿನಗಳೊಳಗೆ ವರದಿ ನೀಡುವಂತೆ ಆದೇಶಿಸಿದ್ದಾರೆ.

ಸೆ.2ರಂದು ಮಂಗಳೂರಿನಲ್ಲಿ ಹಿರಿಯ ಕ್ರೈಂ ಪತ್ರಕರ್ತ ಮೋಹನ್ ಬೋಳಂಗಡಿಯವರ ಯೂಟ್ಯೂಬ್ ಚಾನೆಲ್‌ನ ನೇರಮಾತು ಕಾರ್ಯಕ್ರಮದಲ್ಲಿ ಭಾಸ್ಕರ ನಾಯ್ಕ ಸಂದರ್ಶನ ನೀಡಿದ್ದರು. ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳದ ಮಣ್ಣಸಂಕದಲ್ಲಿ ಅತ್ಯಾಚಾರಕ್ಕೀಡಾಗಿ ಕೊಲೆಯಾಗಿರುವ ಕು.ಸೌಜನ್ಯಗೆ ನ್ಯಾಯ ಸಿಗಬೇಕು ಎಂದು ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರ ವಿರುದ್ಧ ಈ ಸಂದರ್ಶನ ನಡೆಸಲಾಗಿತ್ತು. ಭಾಸ್ಕರ ನಾಯ್ಕರವರು ಸಂದರ್ಶನ ಮುಗಿಸಿ ವಾಪಸು ತನ್ನ ಮನೆಗೆ ಬರುತ್ತಿರುವಾಗ ಸಂಜೆ 5ರ ಸುಮಾರಿಗೆ ಉಜಿರೆ ಗ್ರಾಮದ ಪಾಣೆಯಾಲು ಎಂಬಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಆರು ಮಂದಿ ಕಾರಿನಲ್ಲಿ ಬಂದು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಕಲ್ಲಿನಿಂದ ದೇಹದ ಭಾಗಗಳಿಗೆ ಹಲ್ಲೆ ನಡೆಸಿದ್ದಾರೆ. ಭಾಸ್ಕರ ನಾಯ್ಕ್ ಜೋರಾಗಿ ಬೊಬ್ಬೆ ಹೊಡೆದಾಗ ಹತ್ತಿರದ ಮನೆಯಲ್ಲಿದ್ದ ಅವರ ಪತ್ನಿ ಮಮತಾ ಬಿಡಿಸಲು ಪ್ರಯತ್ನಿಸಿದಾಗ ಪ್ರಮೋದ್ ಶೆಟ್ಟಿ ಎಂಬಾತ ಪತ್ನಿಗೂ ಕಲ್ಲಿನಿಂದ ಹೊಡೆದಿದ್ದಾರೆ. ಇಬ್ಬರ ಬೊಬ್ಬೆ ಕೇಳಿ ಅದೇ ಮಾರ್ಗವಾಗಿ ಹೋಗುತ್ತಿದ್ದ ಪರಿಚಯದವರಾದ ಜಯಪ್ರಕಾಶ್ ಶೆಟ್ಟಿ, ಶಂಕರ ಶೆಟ್ಟಿ ತಿಮರೋಡಿ, ಸುರೇಶ್ ನಾಯ್ಕ ಮತ್ತು ಇತರರನ್ನು ನೋಡಿ ಆರೋಪಿಗಳು ಹಲ್ಲೆಗೆ ಬಳಸಿದ ಕಲ್ಲನ್ನು ಸ್ಥಳದಲ್ಲಿ ಬಿಸಾಡಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಭಾಸ್ಕರ್ ನಾಯ್ಕರವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಸೆ.3ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮಹೇಶ್ ಶೆಟ್ಟಿ ತಿಮರೋಡಿಯವರೊಂದಿಗೆ ಮೋಹನ್ ಶೆಟ್ಟಿ, ಮುಖೇಶ್ ಶೆಟ್ಟಿ, ಪ್ರಜ್ವಲ್ ಕೆ.ವಿ.ಗೌಡ, ನೀತು ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿಯವರನ್ನು ಆರೋಪಿಗಳು ಎಂದು ಹೆಸರಿಸಲಾಗಿದ್ದು ಇವರ ವಿರುದ್ಧ ಐಪಿಸಿ 143, 147, 148, 341, 342, 354, 324, 504, 506 ಮತ್ತು 149ರಡಿ ಕೇಸ್ ದಾಖಲಿಸಲಾಗಿತ್ತು. ಬೆಳ್ತಂಗಡಿ ಠಾಣಾ ಪೊಲೀಸರು ಮಂಗಳೂರು ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸಿದ್ದರು. ಮಹೇಶ್ ಶೆಟ್ಟಿ ತಿಮರೋಡಿ ಮತ್ತಿತರರ ವಿರುದ್ಧ ಜಾಮೀನು ರಹಿತ ಅಟ್ರಾಸಿಟಿ ಕೇಸು ದಾಖಲಾಗಿದ್ದರೂ ಪೊಲೀಸರು ಇನ್ನೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಭಾಸ್ಕರ ನಾಯ್ಕರವರು ವಕೀಲ ಚಂದ್ರನಾಥ ಆರಿಗ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಸೆ.12ರಂದು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಕರಣದ ವರದಿ ನೀಡುವಂತೆ ತನಿಖಾಧಿಕಾರಿಗೆ ಆದೇಶಿಸಿದೆ.

Leave a Reply

error: Content is protected !!