ದ.ಕ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ವೇಳೆ ಸ್ಮಶಾನದಲ್ಲಿ ಗೋರಿಗಳಿಗೆ ನಡೆಯಿತು ವಿಶೇಷ ಪೂಜೆ! ಏನಿದು ಸ್ಟೋರಿ ಅಂತ ಅಚ್ಚರಿ ಪಡ್ತಾ ಇದ್ದೀರಾ..? ಹಾಗಿದ್ರೆ ಈ ಸ್ಟೋರಿ ನೋಡಿ..

ಶೇರ್ ಮಾಡಿ

ಸಾಮಾನ್ಯವಾಗಿ ರಾತ್ರಿ ಹಾಗಿರಲಿ, ಹಗಲಿನಲ್ಲೇ ಸ್ಮಶಾನಕ್ಕೆ ಹೋಗೋದಿಕ್ಕೆ ಜನರು ಭಯ ಬೀಳ್ತಾರೆ. ಅಂತಹದ್ರಲ್ಲಿ ರಾತ್ರಿ ವೇಳೆ ನೂರಾರು ಜನರು ಸ್ಮಶಾನಕ್ಕೆ ಹೋಗಿ ದೀಪ ಹಚ್ಚಿ ಪೂಜೆ ಮಾಡಿ ಬರ್ತಾರೆ ಅಂದ್ರೆ ಅಲ್ಲೇನೋ ವಿಶೇಷ ಇರಲೇ ಬೇಕು ಅಲ್ವಾ..? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಇಂತಹ ಪೂಜೆ ನಡೆದಿದ್ದು, ನಗರದ ಹಲವು ಸ್ಮಶಾನಗಳಲ್ಲಿ (Graves, Cemetery) ಸಾವಿರಾರು ಜನ ಪೂಜೆ ನಡೆಸಿದ್ದಾರೆ. ಏನಿದು ಸ್ಟೋರಿ ಅಂತ ಅಚ್ಚರಿ ಪಡ್ತಾ ಇದ್ದೀರಾ..? ಹಾಗಿದ್ರೆ ಈ ಸ್ಟೋರಿ ನೋಡಿ..

ಕತ್ತಲಲ್ಲಿ ಹೊತ್ತಿಕೊಂಡ ದೀಪಗಳ ನಡುವೆ ಹೂವಿನಿಂದ ಅಲಂಕಾರಗೊಂಡ ಗೋರಿಗಳ ಮುಂದೆ ಕೈ ಮುಗಿದು ಮೃತರ ಆತ್ಮಕ್ಕೆ ಶಾಂತಿ ಕೋರುತ್ತಿರೋ ಜನರು. ಇದು ನಿನ್ನೆ ಗುರುವಾರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಸ್ಮಶಾನಗಳಲ್ಲಿ ಕ್ರೈಸ್ತ ಸಮುದಾಯದವರು ನಡೆಸುವ ವಿಶೇಷ ಪೂಜೆಯ ದೃಶ್ಯ ಹೌದು ಕ್ಯಾಥೋಲಿಕ್ ಕ್ರೈಸ್ತರಲ್ಲಿ ಈ ವಿಶೇಷ ಆಚರಣೆ ಇದ್ದು ಪ್ರತಿ ವರ್ಷ ನವೆಂಬರ್ ತಿಂಗಳ ಮೊದಲೆರಡು ದಿನಗಳಲ್ಲಿ ಈ ಆಚರಣೆ ನಡೆಯುತ್ತದೆ.

ಮೊದಲ ದಿನ ಸಂತ ಭಕ್ತರ ದಿನ ಎಂದು ಆಚರಿಸೋ ದಿನವನ್ನು ವಿಶ್ವದೆಲ್ಲೆಡೆ ಕ್ರೈಸ್ತರು ಭಕ್ತಿಯಿಂದ ಆಚರಿಸುತ್ತಾರೆ. ಎರಡನೇ ದಿನದಂದು ಮೃತರ ಗೋರಿಗಳನ್ನ ಶುಚಿಗೊಳಿಸಿ ಹೂವುಗಳಿಂದ ಅಲಂಕಾರ ಮಾಡಿ ಮೃತರಿಗಾಗಿ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಸೂರ್ಯಾಸ್ತದ ಬಳಿಕ ನಡೆಯುವ ಈ ವಿಶೇಷ ಪೂಜೆಯಲ್ಲಿ ಚರ್ಚ್​ ಧರ್ಮಗುರುಗಳು ಸ್ಮಶಾನದ ಗೋರಿಗಳಿಗೆ ಪವಿತ್ರ ನೀರನ್ನು ಚುಮಿಕಿಸಿ ಮೃತರ ಸದ್ಗತಿಗೆ ಪ್ರಾರ್ಥಿಸುತ್ತಾರೆ ಎನ್ನುತ್ತಾರೆ ಧರ್ಮಗುರು ಲುಕಾಸ್ ಪಿಂಟೋ.

ಕ್ರೈಸ್ತ ಸಮುದಾಯದಲ್ಲಿ ಮೃತರು ಹಾಗೂ ಮೃತರ ಸಮಾಧಿಗಳು ಅಂದ್ರೆ ಅತ್ಯಂತ ಶ್ರದ್ಧೆಯ ಭಾವನೆ ಇದ್ದು ಸಮಾಧಿಗಳು ಅತ್ಯಂತ ಪವಿತ್ರ ಎಂದು ನಂಬಿಕೆ ಇಟ್ಟಿರುತ್ತಾರೆ. ಹೀಗಾಗಿ ಈ ರೀತಿಯ ಗೋರಿ ಪೂಜೆಯ ಮೂಲಕ ಮೃತರಿಗೆ ಗೌರವ ಸಲ್ಲಿಸುವುದರೊಂದಿಗೆ ಅವರ ಸದ್ಗತಿಗೆ ಪ್ರಾರ್ಥಿಸಲಾಗುತ್ತದೆ. ಈ ನಂಬಿಕೆ ಅನಾದಿಕಾಲದಿಂದ ಬೆಳೆದು ಬಂದಿದ್ದು, ಕೇವಲ ತಮ್ಮ ಸಂಬಂಧಿಗಳ ಗೋರಿಗಷ್ಟೇ ಅಲ್ಲದೆ ಅನಾಥ ಗೋರಿಗಳಿಗೂ ಇಲ್ಲಿ ಪೂಜೆ ನಡೆಯುತ್ತದೆ. ತಮ್ಮವರಿಗಾಗಿ ಪ್ರಾರ್ಥಿಸಲು ಬರುವ ಚರ್ಚ್​​ನ ಎಲ್ಲಾ ಭಕ್ತರು ಸ್ಮಶಾನದ ಎಲ್ಲಾ ಗೋರಿಗಳಿಗೂ ಪೂಜೆ ಸಲ್ಲಿಸುವ ಮೂಲಕ ಮೃತರೆಲ್ಲರೂ ಸಂತ ಭಕ್ತರು ಎಂದು ಗೌರವಿಸ್ತಾರೆ.

ಸ್ಮಶಾನಕ್ಕೆ ಹಗಲಿನ ವೇಳೆಯಲ್ಲೇ ಹೋಗಲು ಭಯ ಪಡುವ ಜನರ ನಡುವೆ ಕ್ರೈಸ್ತರು ರಾತ್ರಿ ವೇಳೆಯಲ್ಲಿ ನಡೆಸುವ ಈ ಪೂಜೆ ನಿಜಕ್ಕೂ ವಿಶೇಷ. ಮೃತರ ಸದ್ಗತಿಗಾಗಿ ಪ್ರಾರ್ಥನೆಯೊಂದಿಗೆ ಗೋರಿಗೆ ಪೂಜೆ ನಡೆಸುವ ಕ್ರೈಸ್ತರು ಬಳಿಕ ತಮ್ಮ ಮನೆಯಲ್ಲಿ ಮೃತರಿಗೆ ಇಷ್ಟವಾದ ತಿಂಡಿಗಳನ್ನು ಬಡಿಸುವ ಕ್ರಮ ಕೂಡಾ ಇದೆ. ಸಾಮಾನ್ಯವಾಗಿ ಎಲ್ಲಾ ಧರ್ಮಗಳಲ್ಲೂ ಮೃತರಿಗೆ ಗೌರವ ಸಲ್ಲಿಸುವ ಕ್ರಮ ಇದೆಯಾದ್ರೂ ಈ ರೀತಿ ಸ್ಮಶಾನಕ್ಕೆ ತೆರಳಿ ಮೃತರ ಸದ್ಗತಿಗೆ ಪ್ರಾರ್ಥಿಸೋ ಕ್ರೈಸ್ತರ ಈ ಸಂಪ್ರದಾಯ ವಿಶೇಷವೇ ಸರಿ.

Leave a Reply

error: Content is protected !!