ನಾಲ್ವರನ್ನು ಹತ್ಯೆ ಮಾಡಿ ಆರೋಪಿ ಚೂರಿಯನ್ನ ಅಡುಗೆ ಮನೆಯಲ್ಲಿ ಇಟ್ಟಿದ್ದ: ಉಡುಪಿ ಕೇಸ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಸ್‌ಪಿ

ಶೇರ್ ಮಾಡಿ

ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಗಳನ್ನು ಉಡುಪಿ ಎಸ್‌ಪಿ ಅರುಣ್ ಅವರು ಹಂಚಿಕೊಂಡಿದ್ದಾರೆ.

ನೇಜಾರು ತೃಪ್ತಿ ನಗರದಲ್ಲಿ ಹಸೀನಾ, ಆಫ್ನಾನ್, ಅಯ್ನಾಝ್, ಆಸಿಮ್ ಹತ್ಯೆಯಾಗಿತ್ತು. ಪ್ರಕರಣ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಪಿ ನಾಲ್ವರ ಕೊಲೆಗೈದು ಚೂರಿಯನ್ನು ಅಡುಗೆ ಮನೆಯಲ್ಲಿ ಇಟ್ಟಿದ್ದ. ಪತ್ನಿಗೆ ಸಂಶಯ ಬಾರದ ಹಾಗೆ ಮನೆಯಲ್ಲಿ ಪ್ರವೀಣ್ ಚೌಗಲೆ ವರ್ತಿಸಿದ್ದ ಎಂದು ತಿಳಿಸಿದ್ದಾರೆ.

ತನಿಖೆಗೆ ಬೇಕಾದ ಎಲ್ಲಾ ದಾಖಲಾತಿ ಪ್ರಕ್ರಿಯೆ ಮಾಡಿದ್ದೇವೆ. ಇಬ್ಬರಿಗೂ ಎಂಟು ತಿಂಗಳಿಂದ ಪರಿಚಯ ಇತ್ತು. ಇಬ್ಬರ ಮಧ್ಯೆ ಗೆಳೆತನ ಇತ್ತು. ಪ್ರವೀಣ್, ಆಯ್ನಾಸ್‌ಗೆ ಹಲವಾರು ಸಹಾಯ ಮಾಡದ್ದಾನೆ. ತಿಂಗಳಿಂದ ಸರಿಯಾಗಿ ಮಾತನಾಡುತ್ತಿರಲಿಲ್ಲ. ಪೊಸೆಸಿವ್‌ನೆಸ್‌ನಿಂದ ಕೊಲೆ ಮಾಡಬೇಕೆಂದು ಪೂರ್ವ ಸಿದ್ಧತೆ ಮಾಡಿಕೊಂಡಿದ್ದ ಪ್ರವೀಣ್. ಆರಂಭದಲ್ಲಿ ಅಯ್ನಾಸ್‌ಗೆ ಮೊದಲ ಅಟ್ಯಾಕ್ ಮಾಡುತ್ತಾನೆ. ಹಸೀನಾ, ಅಫ್ನಾನ್, ಆಸಿಂಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಂತರ ಬೇರೆ ಬೇರೆ ವಾಹನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪರಾರಿಯಾಗಿದ್ದಾನೆ. ಕೈ ಗಾಯಕ್ಕೆ ಚಿಕಿತ್ಸೆ ಪಡೆದು, ಚಾಕು ಮನೆಯಲ್ಲೇ ಇಟ್ಟು ಹೆಂಡತಿ ತವರು ಮನೆಗೆ ಹೋಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ನಾವು ಎಲ್ಲಾ ಆಯಾಮದಲ್ಲಿ ತನಿಖೆ ಮಾಡುತ್ತಿದ್ದೇವೆ. ಪ್ರವೀಣ್‌ಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. 2007 ರಲ್ಲಿ ಪೂನಾ ಪೊಲೀಸ್ ಆಗಿದ್ದ, ಉತ್ತಮ ಸಂಬಳಕ್ಕಾಗಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಸೇರಿದ್ದಾನೆ. ಅಮಲು ಪದಾರ್ಥ ಸೇವನೆ ಮಾಡಿದ್ದನೋ ಎಂಬ ಬಗ್ಗೆ ಮೆಡಿಕಲ್ ರಿಪೋರ್ಟ್ ಬರಲಿದೆ. ಒಂದೇ ಚಾಕುವಿನಲ್ಲಿ ನಾಲ್ವರ ಕೊಲೆಗೈದಿದ್ದಾನೆ. ಕುಡುಚಿಯಲ್ಲಿ ಆರೋಪಿಗೆ ಆಶ್ರಯ ನೀಡಿದ ವ್ಯಕ್ತಿಯ ವಿಚಾರಣೆ ಮಾಡಿದ್ದೇವೆ. ಹೆಚ್ಚುವರಿ ಮಾಹಿತಿ ಬೇಕಾಗಿದ್ದರೆ ಅವರಿಂದ ಮಾಹಿತಿ ಪಡೆಯುತ್ತೇವೆ. ಕೈಗೆ ಗಾಯವಾಗಿದೆ ಎಂಬ ಬಗ್ಗೆ ಪತ್ನಿಗೆ ಸುಳ್ಳು ಹೇಳಿ ದಾರಿ ತಪ್ಪಿಸಿದ್ದಾನೆ. ಗಂಭೀರ ಪ್ರಕರಣ ಆಗಿರುವ ಕಾರಣ ಎಲ್ಲಾ ಮಾಹಿತಿ ಮಾಧ್ಯಮಕ್ಕೆ ಕೊಡಲು ಸಾಧ್ಯವಿಲ್ಲ. ಆರೋಪಿಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಪೊಲೀಸರ ಬಂದೋಬಸ್ತ್ ನಿಯೋಜನೆ ಆಗಿದೆ ಎಂದು ಎಸ್‌ಪಿ ಹೇಳಿದ್ದಾರೆ.

ಉಡುಪಿ ನಗರದಲ್ಲಿ ಹೆಚ್ಚುವರಿ ಸಿಸಿಟಿವಿ ಅಳವಡಿಕೆ ಮಾಡಲಾಗುವುದು. ಜಿಲ್ಲೆಯ ಎಲ್ಲಾ ಗಡಿಪ್ರದೇಶದಲ್ಲಿ ಸಿಸಿಟಿವಿ ಕಣ್ಗಾವಲು ಇರಿಸ್ತೇವೆ. ಆರೋಪಿ ಪ್ರವೀಣ್ ಮತ್ತು ಅಯ್ನಾಝ್ ಕುಟುಂಬ ತನಿಖೆಗೆ ಸಹಕಾರ ನೀಡಿದೆ. ನೂರ್ ಮೊಹಮ್ಮದ್ ಕುಟುಂಬ ಬಹಳ ನೋವಲ್ಲಿದ್ದಾರೆ. ವಿಶೇಷ ಪಿ.ಪಿ ನೇಮಕಕ್ಕೆ ನಾವು ಸಹಕಾರ ನೀಡುತ್ತೇವೆ. ಫಾಸ್ಟ್ ಟ್ರ‍್ಯಾಕ್ ಕೋರ್ಟ್ ಬಗ್ಗೆ ಕುಟುಂಬ ಮನವಿ ನೀಡಿದೆ. ತನಿಖೆಗೆ ಒಟ್ಟು 11 ತಂಡ ರಚನೆ ಮಾಡಿದ್ದೆವು. ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಎಲ್ಲಾ ಕಡೆಯಿಂದ ಮಾಹಿತಿ ಬಂದ ಕಾರಣ ಎಲ್ಲವನ್ನು ತನಿಖೆ ಮಾಡಿದ್ದೇವೆ. ಹಸೀನಾಗೆ ಆರ್ಥಿಕ ಮೋಸವಾದ ಬಗ್ಗೆ ಮಾಹಿತಿ ಸಿಕ್ಕಿದೆ. ಕುಟುಂಬದಿಂದ ದೂರು ಪಡೆದುಕೊಂಡು ತನಿಖೆ ಮಾಡುತ್ತೇವೆ ಎಂದು ವಿವರಿಸಿದ್ದಾರೆ.

ನಾಲ್ವರ ಕೊಲೆ ಪ್ರಕರಣ ತನಿಖೆ ದೊಡ್ಡ ಸವಾಲಾಗಿತ್ತು. ರಾಷ್ಟ್ರಮಟ್ಟದಲ್ಲಿ ಚರ್ಚೆಯಾದ ಪ್ರಕರಣ ಇದಾಗಿತ್ತು. ನಾವು ತಂಡವಾಗಿ ಕೆಲಸ ಮಾಡಿ ಆರೋಪಿಯನ್ನು ಬಂಧಿಸಿದ್ದೇವೆ. ಚಾರ್ಜ್‌ಶೀಟ್‌ ಸಲ್ಲಿಕೆಗೆ ಇನ್ನೂ 70-80 ದಿನ ಇದೆ. ಎಲ್ಲಾ ಸಾಕ್ಷಿಗಳ ಸಂಗ್ರಹ ಮಾಡುತ್ತಿದ್ದೇವೆ. ಸುಮಾರು 50 ಪೊಲೀಸರು ಇದರ ಹಿಂದೆ ಕೆಲಸ ಮಾಡಿದ್ದಾರೆ. ಒಂದು ಆಪ್ ಮೂಲಕ ಆಯ್ನಾಝ್ ಮನೆಯನ್ನು ಪ್ರವೀಣ್ ಕಂಡು ಹುಡುಕಿದ್ದಾನೆ. ಆಪ್ ಲೊಕೇಶನ್ ಮೂಲಕ ಆರೋಪಿ ಮನೆಗೆ ಬಂದಿದ್ದಾನೆ. ಆರೋಪಿ ಕೃತ್ಯಕ್ಕೆ ಮೊದಲು ಮನೆಗೆ ಬಂದಿರಲಿಲ್ಲ. ಹೆಚ್ಚುವರಿ ತಾಂತ್ರಿಕ ಮಾಹಿತಿಗಳನ್ನು ನಾವು ಕೊಡುವುದಿಲ್ಲ. ಚಾರ್ಜ್‌ಶೀಟ್‌ನಲ್ಲಿ ನ್ಯಾಯಾಲಯಕ್ಕೆ ಎಲ್ಲಾ ಮಾಹಿತಿಗಳನ್ನು ಒಪ್ಪಿಸುತ್ತೇವೆ ಎಂದು ಹೇಳಿದ್ದಾರೆ.

ಆರೋಪಿ ಪತ್ತೆ ಮಾಡಿದ ಪೊಲೀಸರಿಗೆ ಸೂಕ್ತ ಬಹುಮಾನ ನೀಡಲಾಗುವುದು. ಇಲಾಖೆಗೆ 1.50 ಲಕ್ಷ ರೂ. ಬಹುಮಾನ ಕೊಡುವ ಬಗ್ಗೆ ಶಿಫಾರಸ್ಸು ಮಾಡಿದ್ದೇನೆ ಎಂದು ಎಸ್‌ಪಿ ಅರುಣ್ ತಿಳಿಸಿದ್ದಾರೆ.

Leave a Reply

error: Content is protected !!