![](https://i0.wp.com/nesaranewsworld.com/wp-content/uploads/2023/12/WhatsApp-Image-2023-12-09-at-11.33.16-AM.jpeg?resize=1024%2C576&ssl=1)
ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜು, ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟವು ನಡೆಯಿತು.
ಈ ಕ್ರೀಡಾಕೂಟದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ನೆರವೇರಿಸಿದ ಸರಕಾರಿ ಪ್ರೌಢಶಾಲೆಯ ಮುಖ್ಯಗುರುಗಳು ಮತ್ತು ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಹರಿಕಿರಣ ಕೊಯಿಲ ಇವರು ಮಾತನಾಡುತ್ತಾ “ಕ್ರೀಡೆಯು ಖಂಡಿತವಾಗಿಯೂ ಪಠ್ಯಕ್ಕೆ ಪೂರಕವಾದ ಚಟುವಟಿಕೆ. ಇದರಿಂದ ಒಬ್ಬ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡ ಈ ಕ್ರೀಡಾಕೂಟವು ಯಶಸ್ವಿಯಾಗಿ ನಡೆಯಲಿ” ಎಂದು ಶುಭ ಹಾರೈಸಿದರು.
![](https://i0.wp.com/nesaranewsworld.com/wp-content/uploads/2023/12/WhatsApp-Image-2023-12-09-at-11.33.17-AM.jpeg?resize=1024%2C576&ssl=1)
ಕ್ರೀಡಾಕೂಟದ ಧ್ವಜಾರೋಹಣವನ್ನು ನೆರವೇರಿಸಿದ ಆಲಂಕಾರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ವಿಶ್ವ ನಾಯ್ಕ ಇವರು ಮಾತನಾಡುತ್ತಾ “ಕ್ರೀಡೆಯು ವಿದ್ಯಾರ್ಥಿಗಳಲ್ಲಿನ ಭಯವನ್ನು ಹೋಗಲಾಡಿಸುತ್ತದೆ. ವಿವಿಧ ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಮುನ್ನುಗ್ಗಿ ಗುರಿಯನ್ನು ಸಾಧಿಸುವ ಗುಣವನ್ನು ಬೆಳೆಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಎಲ್ಲದರಲ್ಲಿಯೂ ಭಾಗವಹಿಸಿ ಗೆಲ್ಲುವ ಮನೋಭಾವವನು ಬೆಳೆಸಿಕೊಳ್ಳಿ ಎಂದು ಹೇಳಿದರು”.
ಇನ್ನೋರ್ವ ಅತಿಥಿಯಾದ ಪಿ.ಡಬ್ಲೂ.ಬಿ ಸಂಸ್ಥೆಯ ಮುಖ್ಯಸ್ಥರಾದ ಲಕ್ಷ್ಮಿಕಾಂತ್ ರವರು “ಕ್ರೀಡೆಯಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ಸೋಲಿನ ಬಗ್ಗೆ ಚಿಂತೆಯನ್ನು ಮಾಡದೇ ಸತತ ಪರಿಶ್ರಮದಿಂದ ನಿರಂತರವಾಗಿ ತೊಡಗಿಸಿಕೊಂಡಾಗ ಯಶಸ್ಸು ಸಾಧ್ಯ. ಇದುವೇ ಜೀವನಕ್ಕೂ ಅನ್ವಯಿಸುತ್ತದೆ.” ಎಂದು ಹಿತನುಡಿಗಳನ್ನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಡಬ ಪೋಲೀಸು ಠಾಣೆಯ ಸಬ್ಇನ್ಸ್ಪೆಕ್ಟರ್ ಅಭಿನಂದನ್ ಎಂ.ಎಸ್ ಇವರು ಮಾತನಾಡುತ್ತಾ “ಕ್ರೀಡೆಯು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರನ್ನಾಗಿ ಮಾಡುತ್ತದೆ. ಈ ಪರಿಸರದಲ್ಲಿ ಪ್ರತಿ ಹಬ್ಬ ಹರಿದಿನಗಳಲ್ಲಿಯೂ ಕ್ರೀಡೆಯನ್ನು ಜೋಡಿಸಿಕೊಂಡಿರುವುದು, ಇಲ್ಲಿನ ಜನರು ಕ್ರೀಡೆಗೆ ಕೊಡುವ ಮಹತ್ವವನ್ನು ಸೂಚಿಸುತ್ತದೆ.ಇಲ್ಲಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ಇಂಥಹ ಬೆಳವಣಿಗೆಯು ಯಾವುದೇ ಅಡೆತಡೆ ಬಂದರೂ ನಿರಂತರವಾಗಿ ಆಗಲಿ” ಎಂದು ಶುಭಹಾರೈಸಿದರು.
ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್ ವಂದನಾರ್ಪಣೆಗೈದರು. ಪ್ರೌಢಶಾಲೆಯ ದೈಹಿಕ ಶಿಕ್ಷಣ ಅಧ್ಯಾಪಕಿ ಶ್ರೀಮತಿ ಪ್ರಫುಲ್ಲಾ ಸ್ವಾಗತಿಸಿದರು. ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಉಪನ್ಯಾಸಕರಾದ ಬಿ.ಸುಬ್ರಹ್ಮಣ್ಯ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.
ನಿಶಾಂತ್ ಮತ್ತು ತಂಡದವರು ಕ್ರೀಡಾಜ್ಯೋತಿಯನ್ನು ಹಿಡಿದು ವೇದಿಕೆಗೆ ತಂದರು. ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ಗಣೇಶ್.ಕೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ರಾಷ್ಟ್ರಮಟ್ಟದ ಕಬಡಿಪಟು, ಹತ್ತನೇ ತರಗತಿಯ ಕಾರ್ತಿಕ್ ಪ್ರಮಾಣವಚನ ಬೋಧಿಸಿದರು.
ಸಭಾ ಕಾರ್ಯಕ್ರಮದ ಕೊನೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಏರೋಬಿಕ್ಸ್ ಪ್ರದರ್ಶನ ನಡೆಯಿತು. ಪಿ.ಡಬ್ಲೂ.ಬಿ ಸಂಸ್ಥೆಯ ಸಿಬ್ಬಂದಿಗಳು ಸ್ವಯಂಸೇವಕರಾಗಿ ಸಹಕರಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ ಕೆ, ಪ್ರೌಢಶಾಲೆಯ ಮುಖ್ಯ ಗುರುಗಳಾದ ಸತೀಶ್ ಭಟ್ ಉಪಸ್ಥಿತರಿದ್ದರು.
![](https://i0.wp.com/nesaranewsworld.com/wp-content/uploads/2023/11/WhatsApp-Image-2023-09-29-at-10.07.05-1.jpg?resize=724%2C1024&ssl=1)
![](https://i0.wp.com/nesaranewsworld.com/wp-content/uploads/2023/09/WhatsApp-Image-2023-06-19-at-2.49.48-PM-1.jpeg?resize=723%2C1024&ssl=1)