ಪತ್ನಿ-ಮಗಳ ಮೇಲೆ ಪತಿಯಿಂದ ಮಾರಾಣಾಂತಿಕ ಹಲ್ಲೆ: ಇಬ್ಬರು ಆಸ್ಪತ್ರೆಗೆ ದಾಖಲು

ಶೇರ್ ಮಾಡಿ

ಶಿಶಿಲ: ಇಲ್ಲಿಯ ಕೋಟೆ ಬಾಗಿಲು ನಿವಾಸಿ ಸುರೇಶ್ ಎಂಬವರು ಪತ್ನಿ, ಮಗಳಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದು, ತೀವ್ರ ಗಾಯಗೊಂಡ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ ಘಟನೆ ಡಿ.18 ರಂದು ತಡರಾತ್ರಿ ಶಿಶಿಲ ಗ್ರಾಮದ ಕೋಟೆಬಾಗಿಲು ಎಂಬಲ್ಲಿ ನಡೆದಿದೆ.

ಕೋಟೆಬಾಗಿಲು ನಿವಾಸಿ ಸುರೇಶ್ ತನ್ನ ಪತ್ನಿಯ ಮುಖದ ಭಾಗಕ್ಕೆ ಕಚ್ಚಿ ಮಾಂಸ ಹೊರತೆಗೆದು ಕಣ್ಣಿಗೆ ಕೂಡ ಕೋಲಿನಿಂದ ಹೊಡೆದು ಎಡ ಭಾಗದ ಕಣ್ಣನ್ನು ಸಂಪೂರ್ಣ ಹಾನಿಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಗಳಿಗೆ ತಲೆಯಭಾಗಕ್ಕೆ ಹೊಡೆದಿದ್ದು, ಪ್ರಾಣ ಭಯದಿಂದ ಇಬ್ಬರು ತಪ್ಪಿಸಿಕೊಂಡಿದ್ದು ಮಗಳು ನೆರೆಯ ಮನೆಗೆ ಬಂದು ವಿಷಯ ತಿಳಿಸಿದಾಗ ವಿಪತ್ತು ನಿರ್ವಹಣಾ ತಂಡ, ನೆರೆಹೊರೆಯವರು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು.

ಈ ಸಂದರ್ಭ ಪತಿ ಸುರೇಶ್‌ನ ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಪತ್ನಿ ಅಲ್ಲಿರಲಿಲ್ಲ. ಅವರಿಗಾಗಿ ರಾತ್ರಿ ಹುಡುಕಾಡಿದಾಗ ಅವರು ಎಲ್ಲಿಯೂ ಪತ್ತೆಯಾಗಲಿಲ್ಲ, ಮರುದಿನ ಬೆಳಿಗ್ಗೆ ಮತ್ತೆ ಹುಡುಕಾಡಿದಾಗ ಸ್ಥಳೀಯ ಮನೆಯವರ ಕೊಟ್ಟಿಗೆಯಲ್ಲಿ ಅವರು ತೀವ್ರ ಅಸ್ವಸ್ಥರಾಗಿ ಬಿದ್ದುಕೊಂಡಿರುವುದು ಕಂಡುಬಂದಿದ್ದು, ತಕ್ಷಣ ಸ್ಪಂದಿಸಿದ ಸ್ಥಳೀಯರು ಆಂಬ್ಯುಲೆನ್ಸ್ ಸಹಾಯದಿಂದ ಉಜಿರೆ ಖಾಸಗಿ ಆಸ್ಪತ್ರೆಗೆ ತಾಯಿ ಮತ್ತು ಮಗಳನ್ನು ದಾಖಲಿಸಿದ್ದಾರೆ.

ಧರ್ಮಸ್ಥಳ ಪೊಲೀಸರಿಗೆ ಈ ಪ್ರಕರಣದ ಕುರಿತು ಮಾಹಿತಿ ನೀಡಲಾಗಿದ್ದು, ಅವರು ಆಸ್ಪತ್ರೆಗೆ ತೆರಳಿ ಘಟನೆಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಶಿಶಿಲ ವಿಪತ್ತು ನಿರ್ವಹಣಾ ತಂಡದ ಗಿರಿಜಾ ಎಸ್. ಕೆದಿಲ್ಲಾಯ, ರಮೇಶ್ ಬೈರಕಟ್ಟ, ಗಾಯತ್ರಿ ಸೇವಾ ಪ್ರತಿನಿಧಿ, ರೂಪೇಶ್ ಬೈಪಾಡಿ, ರಾಧಕೃಷ್ಣ, ಕಿರಣ್, ವಿಮಲ, ಹಾಗೂ ಸ್ಥಳೀಯರು ಹುಡುಕಾಟಕ್ಕೆ ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಸುರೇಶ್ ಪಾನಮತ್ತನಾಗಿ ಈ ರೀತಿ ವರ್ತಿಸಿದನೇ ಅಥವಾ ಬೇರೆ ಯಾವುದಾದರರೂ ಮಾದಕ ವಸ್ತು ಸೇವಿಸಿ ಈ ಕೃತ್ಯದಿಂದ ಎಸಗಿರಬಹುದೇ ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

error: Content is protected !!