ನಿವೃತ್ತ ಕೆಎಸ್ಸಾರ್ಟಿಸಿ ಸಿಬ್ಬಂದಿ ಅಬೂಬಕರ್ ವಳಾಲು ಅವರಿಗೆ ಬೀಳ್ಕೊಡುಗೆ

ಶೇರ್ ಮಾಡಿ

ಕಳೆದ 31 ವರ್ಷಗಳಿಂದ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ(ಕೆಎಸ್ಸಾರ್ಟಿಸಿ)ಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಉಪ್ಪಿನಂಗಡಿ ಸಮೀಪದ ವಳಾಲು ನಿವಾಸಿ ಎಚ್.ಅಬೂಬಕರ್ ಅವರನ್ನು ಕೆಎಸ್ಸಾರ್ಟಿಸಿ ಮಂಗಳೂರು ಕಚೇರಿಯಲ್ಲಿ ಇತ್ತೀಚೆಗೆ ಬೀಳ್ಕೊಡಲಾಯಿತು.
ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಚ್.ಅಬೂಬಕರ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಈ ಸಂದರ್ಭ ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗ ಅವರ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು. ಡಿಟಿಒ ರಾಜ್ ಕಮಾಲ್ ಉಪಸ್ಥಿತರಿದ್ದರು.

ಕೆಎಸ್ಸಾರ್ಟಿಸಿ ಮಂಗಳೂರು ಒಂದನೇ ಘಟಕಕ್ಕೆ ಚಾಲಕ ವೃತ್ತಿಗೆ ಸೇರಿಕೊಂಡ ಎಚ್.ಅಬೂಬಕರ್ ಅವರು, 1992ರಿಂದ 1995ರ ವರೆಗೆ ರಾಜ್ಯದೊಳಗೆ ಓಡಾಡುವ ಬಸ್ ಚಾಲಕರಾಗಿಯೂ, ನಂತರದಲ್ಲಿ ಮಂಗಳೂರು ಎರಡನೇ ಘಟಕಕ್ಕೆ ವರ್ಗಾವಣೆಗೊಂಡು 2016ರ ವರೆಗೆ ಅಂತಾರಾಜ್ಯವಾಗಿ ಓಡಾಡುವ ಮುಂಬೈ, ಹೈದರಾಬಾದ್, ಚೆನ್ನೈ, ತಿರುಪತಿ ಮಾರ್ಗದ ಬಸ್ಸಿನಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ವೃತ್ತಿಯಲ್ಲಿನ ಅವರ ಶಿಸ್ತು ಮತ್ತು ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ ಚಾಲಕ ಬೋಧನ KMPL ಮಾಸ್ಟರ್ ಆಗಿ ಅವರು ಆಯ್ಕೆಗೊಂಡಿದ್ದರು. ಏಳು ವರ್ಷಗಳ ಕಾಲ ಉತ್ತಮ ಬೋಧಕರಾಗಿ ಸೇವೆ ಸಲ್ಲಿಸಿರುವ ಎಚ್.ಅಬೂಬಕರ್ ಕೆಎಸ್ಸಾರ್ಟಿಸಿ ಸಂಸ್ಥೆಯ ಪ್ರಶಂಸೆಗೂ ಪಾತ್ರರಾಗಿದ್ದರು.

Leave a Reply

error: Content is protected !!