ಕಡಬ: ಎ.3ರಂದು ಬಂದೂಕು ಹೊಂದಿರುವ ರೈತರ ಸಮಾಲೋಚನಾ ಸಭೆ; ಬಂದೂಕು ಠೇವಣಿ ವಿರುದ್ಧ ಕಾನೂನು ಹೋರಾಟ

ಶೇರ್ ಮಾಡಿ

ಕಡಬ: ಚುನಾವಣಾ ಸಮಯದಲ್ಲಿ ರೈತರ ಪರವಾನಗಿ ಇರುವ ಬಂದೂಕುಗಳನ್ನು ಠಾಣೆಗಳಲ್ಲಿ ಠೇವಣಿ ಇಡುವುದರಿಂದ ವಿನಾಯಿತಿ ನೀಡಬೇಕೆಂದು ಸಂಬoಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ, ಇನ್ನು ಕಾನೂನು ಹೋರಾಟವೊಂದೇ ದಾರಿ ಈ ಹಿನ್ನೆಲೆಯಲ್ಲಿ ಬಂದೂಕು ಹೊಂದಿರುವ ರೈತರ ಸಮಾಲೋಚನಾ ಸಭೆಯನ್ನು ಎ.3 ರಂದು ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಕರೆಯಲಾಗಿದೆ ಎಂದು ರೈತ ಮುಖಂಡ ವಿಕ್ಟರ್ ಮಾರ್ಟಿಸ್ ಹೇಳಿದರು.

ಅವರು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಂದೂಕು ಠೇವಣಿ ಇಡುವ ವಿಚಾರದಲ್ಲಿ ರೈತರಿಗೆ ಇನ್ನಿಲ್ಲದ ಕಿರಿಕಿರಿ ನೀಡಲಾಗುತ್ತದೆ, ಕೃಷಿ ಹಾಗೂ ನಮ್ಮ ರಕ್ಷಣೆಗೆೆ ಇರುವ ಕೋವಿಯನ್ನು ಠೇವಣಿ ಇಡುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೆ ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳಾಗಲಿ, ಸರಕಾರವಾಗಲಿ ನಮ್ಮ ಬೇಡಿಕೆಗೆ ಮನ್ನಣೆ ನೀಡುತ್ತಿಲ್ಲ. ಹಾಗಾಗಿ ಜಿಲ್ಲೆಯ ಎಲ್ಲಾ ಕೋವಿ ಬಳಕೆದಾರರನ್ನು ಒಗ್ಗೂಡಿಸಿ, ಸಮಿತಿ ರಚಿಸಿಕೊಂಡು ಉಚ್ಛ ನ್ಯಾಯಾಲಯದಲ್ಲಿ ಕಾನೂನು ಸಮರಕ್ಕೆ ಸಿದ್ದತೆ ನಡೆಸಲು ಸಭೆ ಕರೆಯಲಾಗಿದೆ ಎಂದು ಹೇಳಿದರು. ಕೇಂದ್ರ ಚುನಾವಣಾ ಆಯೋಗವೇನೋ ಕೋವಿಗಳನ್ನು ಠೇವಣಿ ಇಡಲು ಸೂಚನೆ ನೀಡಿದೆ. ಆದರೆ ರಾಜ್ಯ ಸರಕಾರ ಯಾಕೆ ಸಮ್ಮನಿದೆ, ಕನಿಷ್ಟ ಈ ಕಾನೂನಿನ ವಿರುದ್ಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿ ರಾಜ್ಯದ ರೈತ ಹಿತ ಕಾಯಬಹುದಿತ್ತು. ಆದರೆ ಅದರ ಬದಲು ರೈತರನ್ನು ದ್ವೇಷಿಗಳಂತೆ ನೋಡುತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರಕಾರ ರೈತರ ಪರವಾಗಿ ಭಾಷಣ ಮಾಡಿದರೆ ಸಾಲದು, ಈ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕು, ಈ ವಿಚಾರದಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ, ಕೋವಿ ಠೇವಣಿಯಿಂದ ವಿನಾಯಿತಿ ನೀಡಬೇಕೆಂದು ಜಿಲ್ಲಾಡಳಿತಕ್ಕೆ ನೀಡಿದ 307 ಅರ್ಜಿಗ ಪೈಕಿ 7ಅರ್ಜಿಗಳನ್ನು ಮಾತ್ರ ಮಾನ್ಯ ಮಾಡಲಾಗಿದೆ. ಅಧಿಕಾರಿಗಳು ಹಾಗೂ ನಮ್ಮ ಸಮಯ ವ್ಯರ್ಥವಾಗಿರುವುದು ಬಿಟ್ಟರೆ ಯಾವುದೇ ಪ್ರಯೋಜನವಾಗಿಲ್ಲ. ಚುನಾವಣೆ ವೇಳೆ ಅಷ್ಟೊಂದು ಪೋಲೀಸ್ ಪಡೆ ಇರುವಾಗ ನಮ್ಮ ಕೋವಿಯನ್ನು ಯಾಕೆ ಠೇವಣಿ ಇಡುವುದರಿಂದ ಪೋಲೀಸ್ ಇಲಾಖೆಯಲ್ಲಿ ವೈಫಲ್ಯ ಇದೆ ಎಂದು ಅನುಮಾನ ಮೂಡುತ್ತದೆ. ಹಿಂದೆ ಕೋವಿ ಪರವಾನಗಿ ಅಥವಾ ಅದರ ನವೀಕರಣಕ್ಕೆ ಯಾವುದೇ ಶುಲ್ಕವಿರಲಿಲ್ಲ. ಆದರೆ ಈಗ 2500 ರೂ ಪಾವತಿ ಮಾಡಬೇಕು ತಪ್ಪಿದರೆ ಮತ್ತಷ್ಟು ದಂಢ ವಿಧಿಸಲಾಗುತ್ತದೆ, ನಿಮ್ಮ ಖಜಾನೆ ತುಂಬಲು ರೈತರ ಬಂದೂಕಿನ ದುಡ್ಡು ಬೇಕಾ ಎನ್ನುವ ಪ್ರಶ್ನೆ ಬರುತ್ತದೆ. ಕೋವಿ ಠೇವಣಾತಿಯ ವಿನಾಯಿತಿ ವಿಚಾರದಲ್ಲಿ ಸ್ಕ್ರೀನ್oಗ್ ಕಮಿಟಿ ಯಲ್ಲಿ ಪ್ರಗತಿಪರ ಕ್ರಷಿಕರನ್ನು, ಚಿಂತಕರನ್ನು, ಬುದ್ದಿಜೀವಿಗಳನ್ನು ಸೇರಿಸಬೇಕು ಎನ್ನುವುದು ನಮ್ಮ ಅಗ್ರಹವಾಗಿದೆ ಎಂದು ಹೇಳಿದ ವಿಕ್ಟರ್ ಮಾರ್ಟಿಸ್ ಕಡಬದ ಅಂಬೇಡ್ಕರ್ ಭವನವನ್ನು ರೈತರ ಸಭೆ ನಡೆಸಲು ಉಚಿತವಾಗಿ ನೀಡಬೇಕು ಎಂದು ಅಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ ಮಾತನಾಡಿ ಕೊಡುಗು ಹಾಗೂ ಕೇರಳದಲ್ಲಿ ಚುನಾವಣೆ ಸಂದರ್ಭದಲ್ಲಿ ಕೋವಿ ಠೇವಣಿ ಇಡುವ ಕಾನೂನು ಇಲ್ಲ, ನಮ್ಮಲ್ಲಿ ಅನಗತ್ಯ ತೊಂದರೆ ನೀಡಲಾಗುತ್ತಿದೆ. ಈ ವಿಚಾರದಲ್ಲಿ ರೈತರೆಲ್ಲಾ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕುಂತೂರುಪದವು ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಜೇಮ್ಸ್ ತೋಮಸ್ ವಿ.ಎಂ., ಸಾಮಾಜಿಕ ಹೋರಾಟಗಾರ ವರ್ಗೀಸ್ ತೋಮಸ್, ನಾಟಿ ವೈದ್ಯ ವಾಸುದೇವ ಇಡ್ಯಾಡಿ, ರೈತ ಮುಖಂಡರಾದ. ಉಮ್ಮರಬ್ಬ ಮುಳಾರ್, ಸಂತೋಷ್ ಉಳಿಪ್ಪು ಮತ್ತಿತರರು ಉಪಸ್ಥಿತರಿದ್ದರು.

Leave a Reply

error: Content is protected !!