ನೆಲ್ಯಾಡಿ ಕಾಲೇಜಿಗೆ ಹೋಗಿದ್ದ ಅರಸಿನಮಕ್ಕಿಯ ತೀರ್ಥೇಶ್ ನಾಪತ್ತೆ; ಪೊಲೀಸರಿಗೆ ದೂರು

ಶೇರ್ ಮಾಡಿ

ನೆಲ್ಯಾಡಿಯ ಕಾಲೇಜಿನಲ್ಲಿ ಓದುತ್ತಿರುವ ಅರಸಿನಮಕ್ಕಿಯ ವಿದ್ಯಾರ್ಥಿ ತೀರ್ಥೇಶ್ ಎಂ.(18) ನಾಪತ್ತೆಯಾಗಿರುವ ಬಗ್ಗೆ ಆತನ ತಂದೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮಂದಗತಿ ಚಟುವಟಿಕೆಯವನಾಗಿರುವ ತೀರ್ಥೇಶ್ ಪ್ರತಿದಿನ ಮನೆಯಿಂದ ಕೆ.ಎಸ್.ಆರ್.ಟಿ.ಸಿ. ಬಸ್‌ನಲ್ಲಿ ಕಾಲೇಜಿಗೆ ಹೋಗಿ ಬರುತ್ತಿದ್ದು, ಸೆ.21ರಂದು ಕೂಡ ಬಸ್‌ನಲ್ಲಿ ಮನೆಯಿಂದ ತೆರಳಿದ್ದಾನೆ. ಕಾಲೇಜಿನಲ್ಲಿ ವಾಲಿಬಾಲ್ ಪಂದ್ಯಾಟವಿದೆ ಎಂದು ತಿಳಿಸಿ, ಬಟ್ಟೆ ಬರೆಗಳನ್ನು ತೆಗೆದುಕೊಂಡು ಹೋಗಿದ್ದು, ರಾತ್ರಿಯಾದರೂ ಮನೆಗೆ ವಾಪಸ್ ಬಂದಿಲ್ಲ. ಕಾಲೇಜಿನಲ್ಲಿ ವಿಚಾರಿಸಿದಾಗ, ಸಂಜೆ 3 ಗಂಟೆಗೆ ನೆಲ್ಯಾಡಿ ಪೇಟೆಯಲ್ಲಿ ಬಸ್ಸಿಗೆ ಕಾಯುತ್ತಿರುವುದನ್ನು ಇನ್ನೋರ್ವ ವಿದ್ಯಾರ್ಥಿ ನೋಡಿರುವ ಮಾಹಿತಿ ಲಭಿಸಿದೆ. ಎಲ್ಲ ಕಡೆ ಹುಡುಕಾಡಿದರೂ ಮಗನ ಸುಳಿವು ಲಭಿಸಿಲ್ಲ. ಆತನನ್ನು ಪತ್ತೆ ಮಾಡಿಕೊಡಬೇಕೆಂದು ಅರಸಿನಮಕ್ಕಿಯ ಪಡ್ಡಾಯಿಬೆಟ್ಟು ನಿವಾಸಿಯಾಗಿರುವ ತಂದೆ ಎಂ.ವಿಜಯಚಂದ್ರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

error: Content is protected !!