ಅನೈತಿಕ ಸಂಬಂಧ, ಹಣಕಾಸು ವಿಚಾರ – ಕೊನೆಗೆ ಸ್ನೇಹಿತನ ಕೊಲೆ! – ಮೂವರು ಬಂಧನ

ಶೇರ್ ಮಾಡಿ

ಮಡಿಕೇರಿ: ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಹಾನಗಲ್‌ ಗ್ರಾಮದ ನಿವಾಸಿ ಸಂಪತ್ ನಾಯರ್‌ (38) ನಾಪತ್ತೆಯಾಗಿದ್ದ ಪ್ರಕರಣ ಭೀಕರ ಕೊಲೆ ಪ್ರಕರಣವಾಯಿತೆಂದು ಬೆಳಕಿಗೆ ಬಂದಿದೆ. ಸ್ನೇಹಿತರಿಂದಲೇ ಹೊಡೆತಕ್ಕೆ ಒಳಗಾದ ಸಂಪತ್‌ನನ್ನ ಕೊಂದು, ಮೃತದೇಹವನ್ನು ಕಾಡಿನಲ್ಲಿ ಬಿಸಾಡಿದ ಘಟನೆಯು ಇದೀಗ ಕಳವಳ ಮೂಡಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಪೊಲೀಸರು ಮೂವರನ್ನು ಬಂಧಿಸಿದ್ದು, ಆರೋಪಿಗಳು ಸಂಪತ್‌ನ ಹತ್ತಿರದ ಸ್ನೇಹಿತರು ಎಂಬುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಂಧಿತರಾದವರು ಸೋಮವಾರಪೇಟೆ ತಾಲ್ಲೂಕಿನ ಹಾನಗಲ್‌ ಗ್ರಾಮದ ಬಿ.ಎಂ ಕಿರಣ್ (44), ಆತನ ಪತ್ನಿ ಸಂಗೀತಾ (35) ಹಾಗೂ ಚೌಡ್ಲು ಗ್ರಾಮದ ಪಿ.ಎಂ ಗಣಪತಿ (43)

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ವೈಯಕ್ತಿಕ ದ್ವೇಷ ಹಾಗೂ ಹಣಕಾಸು ವ್ಯವಹಾರವೇ ಈ ಕೊಲೆಗೆ ಕಾರಣವಾಗಿವೆ. ಸಂಗೀತಾ ಮತ್ತು ಸಂಪತ್ ನಡುವೆ ಪೂರ್ವದಲ್ಲಿ ಅನೈತಿಕ ಸಂಬಂಧವಿದ್ದು, ಸಂಪತ್‌ ಆಕೆಯ ಖಾಸಗಿ ವಿಡಿಯೋವೊಂದನ್ನು ಹಿಡಿದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಜೊತೆಗೆ ಆಕೆ ಸಂಪತ್‌ನಿಂದ ಪಡೆದಿದ್ದ 20 ಲಕ್ಷ ರೂ. ಕೂಡ ವಾಪಸ್‌ ನೀಡದಿದ್ದ ಕಾರಣದಿಂದ, ಕಿರಣ್‌, ಸಂಗೀತಾ ಹಾಗೂ ಗಣಪತಿ ಸಂಪತ್‌ನ ಕೊಲೆ ಸಂಚು ರೂಪಿಸಿದ್ದರು.

ಮೇ 9ರಂದು ಸಂಗೀತಾ ಸಂಪತ್‌ನನ್ನು ‘ಸಾಲದ ಹಣ ಕೊಡ್ತೀನಿ’ ಎಂಬ ನಾಟಕವಾಡಿ ತನ್ನ ಮನೆಗೆ ಕರೆಯಲಾಗಿತ್ತು. ಮನೆಗೆ ಬಂದ ಸಂಪತ್‌ ಮೇಲೆ ಮೂವರು ಒಟ್ಟುಗೂಡಿ ದೊಣ್ಣೆ ಹಾಗೂ ಕತ್ತಿಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಸಂಪತ್‌ನ ಕಾರಿನಲ್ಲಿ ಹಾಕಿಕೊಂಡು ಸಕಲೇಶಪುರದ ಒಳಗೂರು ಕಾಡಿನಲ್ಲಿ ಬಿಸಾಡಿದ್ದಾರೆ. ಕಾರನ್ನು ಕಲ್ಲಳ್ಳಿ ಬಳಿ ಬಿಟ್ಟು, ಬೇರೊಂದು ವಾಹನದಲ್ಲಿ ಬೆಂಗಳೂರಿಗೆ ಪರಾರಿಯಾಗಿದ್ದರು.

ಪೊಲೀಸರ ಗುಪ್ತ ಕಾರ್ಯಾಚರಣೆ
ಮೇ 16ರಂದು ಕಿರಣ್‌ ನನ್ನು ಬೆಂಗಳೂರು ನಗರದಲ್ಲಿ ಬಂಧಿಸಲಾಯಿತಾದರೆ, ಮೇ 17ರಂದು ಗಣಪತಿಯನ್ನು ಬೆಳ್ತಂಗಡಿಯಲ್ಲಿ, ಮೇ 18ರಂದು ಸಂಗೀತಾಳನ್ನು ಸೋಮವಾರಪೇಟೆಯಲ್ಲಿ ಪೊಲೀಸರು ಬಂಧಿಸಿದರು. ತನಿಖೆಯಲ್ಲಿ ಕೊಲೆ ಮಾಡಿದುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಪೊಲೀಸರು ಕೃತ್ಯಕ್ಕೆ ಬಳಸಿದ ದೊಣ್ಣೆ, ಕತ್ತಿ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.

  •  

Leave a Reply

error: Content is protected !!