
ರಾಮಕುಂಜ: ರಾಜ್ಯ ಹೆದ್ದಾರಿಯ ರಾಮಕುಂಜ ಗ್ರಾಮದ ಆತೂರು ಎಂಬಲ್ಲಿ ಭಾರೀ ಗಾತ್ರದ ಮಾವಿನ ಮರವೊಂದು ರಸ್ತೆಯ ಬದಿಯಲ್ಲಿ ನಿಂತಿದ್ದ ಮಾರುತಿ 800 ಕಾರಿನ ಮೇಲೆ ಬಿದ್ದಿದ್ದು, ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.
ಘಟನೆಯಾಗುವಾಗ ಕಾರಿನೊಳಗಿದ್ದ ಮೂವರು ಪ್ರಯಾಣಿಕರು ಅಪಾಯದ ಅರಿವಾಗುತ್ತಿದ್ದಂತೆ ತಕ್ಷಣವೇ ಕಾರಿನಿಂದ ಇಳಿದು ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಸ್ಥಳೀಯರು ಮತ್ತು ಸಾರ್ವಜನಿಕರು ಕೂಡಲೇ ಸ್ಥಳಕ್ಕೆ ಧಾವಿಸಿ ಸಹಾಯ ನೀಡಿದ್ದು, ಯಾವುದೇ ಅನಾಹುತ ಪ್ರಾಣಪಾಯ ಸಂಭವಿಸಲಿಲ್ಲ. ಘಟನೆಯಿಂದಾಗಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.
ರಸ್ತೆ ಬದಿಯ ಮರಗಳನ್ನು ತೆರವುಗೊಳಿಸುವ ಅಥವಾ ನಿರ್ವಹಣಾ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯತೆಯ ಬಗ್ಗೆ ಸ್ಥಳೀಯರು ಮತ್ತು ಪ್ರಯಾಣಿಕರಿಂದ ಪ್ರಬಲ ಒತ್ತಾಯ ಕೇಳಿ ಬರುತ್ತಿದೆ.














