

ನೆಲ್ಯಾಡಿ: ಕಡಬ ತಾಲೂಕಿನ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪವಿತ್ರ ಆವರಣದಲ್ಲಿ ಕಡಬದ ಹೊಸಮಠದಲ್ಲಿರುವ ಶ್ರೀಪೂರ್ಣ ಆಯುರ್ವೇದ ಪಂಚಕರ್ಮ ಚಿಕಿತ್ಸಾಲಯದ ನೇತೃತ್ವದಲ್ಲಿ ಹಾಗೂ ಮಹಾರಾಷ್ಟ್ರದ ಅಕ್ಕಲಕೋಟೆಯ ವಿಶ್ವ ಫೌಂಡೇಶನ್ ಸಂಸ್ಥೆಯ ಸಹಯೋಗದಲ್ಲಿ ಆದಿತ್ಯವಾರ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮ ಭಕ್ತಿ ಭಾವದೊಂದಿಗೆ ನೆರವೇರಿತು.

ದಕ್ಷಿಣ ಭಾರತದ ಸಂಯೋಜಕರಾದ ಸಂದೀಪ್ ಮೆಹಂದಳೆ ಅವರು ಅಗ್ನಿಹೋತ್ರದ ಮಹತ್ವವನ್ನು ವಿಜ್ಞಾನ ಹಾಗೂ ಆಧ್ಯಾತ್ಮದ ದೃಷ್ಟಿಕೋನದಿಂದ ವಿವರಿಸಿ, ಪ್ರತಿ ಮನೆಯಲ್ಲಿ ಈ ಹೋಮವನ್ನು ದಿನನಿತ್ಯ ಆಚರಿಸಬೇಕೆಂದು ಆಹ್ವಾನ ನೀಡಿದರು. ಅಗ್ನಿಹೋತ್ರದ ವಿಧಾನ, ಬೇಕಾದ ಸಾಮಗ್ರಿಗಳು ಹಾಗೂ ಜಪಿಸಬೇಕಾದ ಮಂತ್ರಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಶ್ರೀಪೂರ್ಣ ಆಯುರ್ವೇದದ ಮುಖ್ಯಸ್ಥ ಡಾ. ಸುರೇಶ್ ಕುಮಾರ್ ಕೂಡೂರು ಅವರು ಅಗ್ನಿಹೋತ್ರದ ವೈದಕೀಯ ಪ್ರಯೋಜನಗಳನ್ನು ವೈಜ್ಞಾನಿಕ ಉದಾಹರಣೆಗಳೊಂದಿಗೆ ಪ್ರಸ್ತುತಪಡಿಸಿದರು. ಅವರು, “ಇದು ಮಾನವನ ದೇಹ ಮತ್ತು ಮನಸ್ಸಿನ ಶುದ್ಧೀಕರಣಕ್ಕೆ ಸಹಾಯಕವಾಗಿದ್ದು, ಆವರಣದಲ್ಲಿರುವ ಗಾಳಿ ಶುದ್ಧತೆ ಹಾಗೂ ಗಿಡಮರಗಳ ಬೆಳವಣಿಗೆಗೂ ಪೋಷಕವಾಗಿದೆ,” ಎಂದರು.
ಜಿಲ್ಲಾ ಬೌದ್ಧಿಕ ಪ್ರಮುಖ ಸುಬ್ರಾಯ ಪುಣಚ ಅವರು ದೀರ್ಘಕಾಲದಿಂದ ಮಾಡುತ್ತಿರುವ ಅಗ್ನಿಹೋತ್ರದ ಅನುಭವಗಳನ್ನು ಹಂಚಿಕೊಂಡು, ಈ ಪವಿತ್ರ ಕರ್ಮಕ್ಕೆ ದೇಶಿ ಗೋವುಗಳ ಮಹತ್ವವನ್ನು ಒತ್ತಿಹೇಳಿದರು. ಅವರು, “ದೇಶಿ ಹಸುವಿನ ಬೆರಣಿ ಮತ್ತು ತುಪ್ಪ ಅಗ್ನಿಹೋತ್ರದ ಮೂಲ ಶಕ್ತಿ,” ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಸುಬ್ರಹ್ಮಣ್ಯ ಶಬರಾಯ ಅವರು ವ್ಯಾಹೃತಿ ಹೋಮ ನಡೆಸಿದರು. ಶ್ರೀಪೂರ್ಣ ಆಯುರ್ವೇದದ ಡಾ. ಸುಧನ್ವ ಕೂಡೂರು ಸ್ವಾಗತಿಸಿದರು. ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಶ್ರೀಮತಿ ದೇವಕಿ ಕೂಡೂರು ಅವರು ದೇಶಿ ಗೋವಿನ ಸ್ತುತಿ ಗೀತವನ್ನು ಹಾಡಿದರು. ನಿವೃತ್ತ ಮುಖ್ಯಶಿಕ್ಷಕ ರವೀಂದ್ರ.ಟಿ ಕಾರ್ಯಕ್ರಮ ನಿರೂಪಿಸಿದರು, ಕಾರ್ಯಕ್ರಮದ ರೂವಾರಿ ಉದ್ಯಮಿ, ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶ್.ಕೆ.ಎಸ್ ವಂದಿಸಿದರು.
ಹೋಟೆಲ್ ಉದ್ಯಮಿ ಸಂತೋಷ್ ಬಿರ್ವ, ನಿವೃತ್ತ ಸೇನಾಧಿಕಾರಿ ರಘುನಾಥ ಹೆಬ್ಬಾರ್, ಸಿರಿ ಎಲ್.ಎನ್, ಉದ್ಯಮಿ ರಾಜೇಶ್ ಕೋಳ್ಯೂರು, ಭಜನಾ ಮಂಡಳಿ ಅಧ್ಯಕ್ಷೆ ಸಂಧ್ಯಾ ರೈ, ನಿವೃತ್ತ ಮುಖ್ಯಶಿಕ್ಷಕ ವೆಂಕಟರಮಣ ಆರ್ ಮತ್ತು ಇತರ ಗಣ್ಯರು ಭಾಗವಹಿಸಿದರು.
ಯುವ ಕೃಷಿಕ ಅಕ್ಷಯ್ ಕುಲಕರ್ಣಿ, ಪ್ರೊ. ಸೌಮಿತ್ರ ಶಬರಾಯ, ಇಂಜಿನಿಯರ್ ನವ್ಯ ಮಾಣಿಪ್ಪಾಡಿ, ಶರತ್ ಹೆಗ್ಡೆ, ಶ್ವೇತಾ ಕಕ್ಕೆನಡ್ಕ ಸೇರಿದಂತೆ ಹಲವಾರು ಯುವಕರು ಸ್ವಯಂಸೇವಕರಾಗಿ ಸಹಕಾರ ನೀಡಿದರು. ಭಾಗವಹಿಸಿದ ಎಲ್ಲರಿಗೂ ಪ್ರತ್ಯೇಕ ತಾಮ್ರದ ಹೋಮಕುಂಡ, ದೇಶಿ ಹಸುವಿನ ಬೆರಣಿ ಮತ್ತು ತುಪ್ಪದ ವ್ಯವಸ್ಥೆ ಮಾಡಲಾಗಿದ್ದು ವಿಶೇಷ.
ಸಾಯಂಕಾಲ ಸೂರ್ಯಾಸ್ತ ಸಮಯಕ್ಕೆ ಸರಿಯಾಗಿ ಸಾಮೂಹಿಕ ಅಗ್ನಿಹೋತ್ರ ನೆರವೇರಿತು. ಕೊನೆಯವಾಗಿ ಪ್ರಾಣಾಯಾಮ ಹಾಗೂ ಧ್ಯಾನ ತರಬೇತಿಯ ಮೂಲಕ ಕಾರ್ಯಕ್ರಮ ಪರಿಪೂರ್ಣತೆ ಪಡೆಯಿತು.













