

ಬೆಳ್ಳಾರೆ: ಕಳೆದ ಮೂರು ದಶಕಗಳಿಂದ ನೃತ್ಯ ಕಲಾವಿದ, ನಿರ್ದೇಶಕ ಹಾಗೂ ವಸ್ತ್ರ ವಿನ್ಯಾಸಕರಾಗಿ ನಾಡಿನ ರಂಗಭೂಮಿಗೆ ಅಮೂಲ್ಯ ಸೇವೆ ಸಲ್ಲಿಸುತ್ತಾ ಬಂದಿರುವ ಬೆಳ್ಳಾರೆಯ ಕಲಾಮಂದಿರ್ ಸಂಸ್ಥಾಪಕ ನಿರ್ದೇಶಕರಾದ ಪ್ರಮೋದ್ ಕುಮಾರ್ ರೈ ಬೆಳ್ಳಾರೆ ಅವರಿಗೆ 50ನೇ ಆವೃತ್ತಿಯ ‘ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಾಗಿದೆ.
ಮೇ.22ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸುವರ್ಣ ಸಂಭ್ರಮ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ, ಅವರ ಸಾಧನೆಗೆ ಮಾನ್ಯತೆ ನೀಡಿ ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಹೆಚ್. ಎಲ್.ಎನ್.ರಾವ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ, ಹಾಗೂ ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ಮತ್ತು ನ್ಯಾಯಮೂರ್ತಿ ಡಾ.ಅಶೋಕ್ ಬಿ. ಹಿಂಚಿಗೇರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪ್ರಮೋದ್ ಕುಮಾರ್ ರೈ ಅವರು ರಾಜ್ಯ ಮತ್ತು ಜಿಲ್ಲಾ ಮಟ್ಟದ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದು, ಕಲಾ ಕ್ಷೇತ್ರದಲ್ಲಿ ಸೃಜನಾತ್ಮಕತೆ ಮತ್ತು ನವೀನತೆಗೆ ಪ್ರಾಮುಖ್ಯತೆ ನೀಡುತ್ತಾ, ನಾಟ್ಯ, ನಾಟಕ, ವಿನ್ಯಾಸ ಹಾಗೂ ಕಲೆಗಳ ಸಂಗಮದ ಮೂಲಕ ನುಡಿ-ನೃತ್ಯಗಳ ವಿಶ್ವವನ್ನೇ ರೂಪಿಸುತ್ತಾ ಬಂದಿದ್ದಾರೆ. ‘ಆರ್ಯಭಟ ಪ್ರಶಸ್ತಿ’ ಈ ಸಾಧನೆಗಳಿಗೆ ದೊರಕಿದ ಸದ್ಭಾವನೆಯ ಮೆರುಗೆಯಾಗಿದೆ.













