ಮೌಲ್ಯಾಧಾರಿತ ಶಿಬಿರದಲ್ಲಿ ವಿದ್ಯಾರ್ಥಿಗಳಿಂದ ಪೋಷಕರಿಗೆ ಪಾದಪೂಜೆ


ಕಡಬ: ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಯಾವುದೇ ಕಾರಣಕ್ಕೂ ತಂದೆ-ತಾಯಿಗಳು ಭಾರವಾಗಬಾರದು. ಆದರೆ ವಾಸ್ತವದಲ್ಲಿ ಇಂದಿನ ಸಮಾಜದಲ್ಲಿ ಮಕ್ಕಳಿಗೆ ತಂದೆ-ತಾಯಿಗಳೇ ಭಾರವಾಗಿರುವ ವಿಕೃತಿ ಕಂಡುಬರುತ್ತಿದೆ. ಈ ರೀತಿಯ ಪರಿಸ್ಥಿತಿಗೆ ಪರಿಹಾರವಾಗಿ, ನೈತಿಕತೆ, ಶಿಸ್ತು ಹಾಗೂ ಮೌಲ್ಯಾಧಾರಿತ ಬದುಕಿನ ಕಡೆಗೆ ಮಕ್ಕಳನ್ನು ಮುಂದಾಳುವಂತೆ ಮಾಡಲು ಆಲಂಕಾರು ನಡೆದ ಮೂರು ದಿನಗಳ ಉಚಿತ ಶಿಬಿರ ಯಶಸ್ವಿಯಾಗಿದೆ.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಅವರು ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ, “ತಂದೆ-ತಾಯಿಯರು ತಮ್ಮ ಶರೀರಕ್ಕಿಂತ ಹೆಚ್ಚು ತಮ್ಮ ಮಕ್ಕಳನ್ನು ಪ್ರೀತಿಸುತ್ತಾರೆ. ಆದರೆ ಮೊಬೈಲ್ ಫೋನ್ ಮಕ್ಕಳ ಕೈಗೆ ಬಂದು, ಶಿಕ್ಷಕರು ನೋಟ್ಸ್ಗಳನ್ನು ಅದರಲ್ಲಿ ನೀಡತೊಡಗಿದಾಗಿನಿಂದ ಮಕ್ಕಳಲ್ಲಿ ಸುಳ್ಳು ಮಾತನಾಡುವ ಪ್ರವೃತ್ತಿ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ಮೌಲ್ಯ ಶಿಬಿರಗಳ ಅಗತ್ಯ ಮತ್ತಷ್ಟು ಹೆಚ್ಚಾಗಿದೆ. ಎಳವೆಯಲ್ಲಿಯೇ ಮಕ್ಕಳಿಗೆ ಸಂಸ್ಕಾರ ಬೋಧಿಸುವ ಜವಾಬ್ದಾರಿ ಪೋಷಕರದು,” ಎಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕಡಬ ಮತ್ತು ಶ್ರೀ ಭಾರತಿ ವಿದ್ಯಾಸಂಸ್ಥೆಗಳು, ಆಲಂಕಾರು ಇವುಗಳ ಜಂಟಿ ಆಶ್ರಯದಲ್ಲಿ ಶಿಬಿರ ಆಯೋಜಿಸಲಾಗಿದ್ದು, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಧ್ಯಾನ, ಶಿಸ್ತಿನ ತರಬೇತಿ, ವ್ಯಕ್ತಿತ್ವ ವಿಕಾಸ, ಮಾದಕ ವಸ್ತುಗಳ ಹಾನಿ, ಪೋಷಕರ ಮಹತ್ವ, ಸಾಮಾಜಿಕ ಹೊಣೆಗಾರಿಕೆ ಮುಂತಾದ ವಿಷಯಗಳ ಬಗ್ಗೆ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ತರಬೇತಿ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಟ್ರಸ್ಟ್ನ ಕಡಬ ಘಟಕದ ಅಧ್ಯಕ್ಷ ಮಹೇಶ್ ಕೆ. ಸವಣೂರು ಮಾತನಾಡುತ್ತಾ, “ಈ ಶಿಬಿರ ಕಡಬ ತಾಲೂಕಿನಲ್ಲಿ ಮೊದಲ ಬಾರಿಗೆ ನಡೆದ ಮಾದರಿ ಶಿಬಿರವಾಗಿದೆ. ಮಕ್ಕಳಿಂದ ತಮ್ಮ ಪೋಷಕರಿಗೆ ಪಾದಪೂಜೆ ಮಾಡಿಸುವ ಮೂಲಕ, ಹೆತ್ತವರ ಪಾತ್ರದ ಮಹತ್ವ ಮನಸ್ಸು ತಲುಪುವ ಕಾರ್ಯ ಆಗಿದೆ. ಇಂತಹ ಶಿಬಿರಗಳಿಗೆ ಪೋಷಕರಾಗಿ ನಾವು ತಮ್ಮ ಮಕ್ಕಳನ್ನು ಕಳುಹಿಸುವುದರಿಂದ ಉತ್ತಮ ಪೌರರು ರೂಪುಗೊಳ್ಳುತ್ತಾರೆ,” ಎಂದು ಅಭಿಪ್ರಾಯಪಟ್ಟರು ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ವೇದಿಕೆಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಅಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯ ಸಂಚಾಲಕ ಗಂಗಾಧರ ಗೌಡ ಕುಂಡಡ್ಕ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಜಿ, ಬೆಳಿನೆಲೆ ವಲಯಾಧ್ಯಕ್ಷ ತಮ್ಮಯ್ಯ ಗೌಡ, ಯುವಜನ ಒಕ್ಕೂಟ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ, ಅಲಂಕಾರು ವಲಯಾಧ್ಯಕ್ಷ ಇಂದುಶೇಖರ ಶೆಟ್ಟಿ, ಗೋಳಿತೊಟ್ಟು ವಲಯಾಧ್ಯಕ್ಷ ನೋಣಯ್ಯ ಪೂಜಾರಿ, ಮಾಸ್ಟರ್ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರಶಾಂತ್, ಕ್ಯಾಪ್ಟನ್ ಶೌರ್ಯ ಘಟಕದ ಭವಾನಿ ಶಂಕರ್ ಇವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಪಾದಪೂಜೆ:
ಮೂರು ದಿನಗಳ ಕಾಲ ಅನುಭವಿ ಸಂಪನ್ಮೂಲಗಳಿಂದ ವಿವಿದ ರೀತಿಯ ತರಬೇತಿಗಳನ್ನು ನೀಡುವುದರೊಂದಿಗೆ ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳು ತಮ್ಮ ತಂದೆ-ತಾಯಿಗಳಿಗೆ ಪಾದ ಪೂಜೆಯನ್ನು ನೆರವೇರಿಸುವ ಅಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಭಾಗವಹಿಸಿದ ಎಲ್ಲಾ ಶಿಬಿರಾರ್ಥಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಶಿಬಿರಾರ್ಥಿಗಳಾದ ಕುಮಾರಿ ದೀಕ್ಷಾ ಹಾಗೂ ಪೃಥ್ವಿ ಸಾಗರ್ ಶಿಬಿರದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಸನ್ಮಾನ:
ಶಿಬಿರದ ಯಶಸ್ಸಿಗೆ ವಿಶೇಷ ಕೊಡುಗೆ ನೀಡಿದ ಅಲಂಕಾರು ವಲಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ಇಂದುಶೇಖರ ಶೆಟ್ಟಿ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯ ಕೇಶವ ಅವರನ್ನು ಸನ್ಮಾನಿಸಲಾಯಿತು.
ಕಡಬ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಸ್ವಾಗತಿಸಿದರು. ಅಲಂಕಾರು ಮೇಲ್ವಿಚಾರಕಿ ಸುಜಾತ ವಂದಿಸಿದರು. ರವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು













