


ಕೊಕ್ಕಡ: ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮದ ಕಟ್ಟೆ ಎಂಬಲ್ಲಿ ಜೂ.14 ರಂದು ರಾತ್ರಿ ಮನೆಯ ಗೊದ್ರೆಜ್ ನಲ್ಲಿಟ್ಟಿದ್ದ ಸುಮಾರು ₹2.6 ಲಕ್ಷ ಮೌಲ್ಯದ 52 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀಮತಿ ಕುಸುಮ ಮತ್ತು ಅವರ ಗಂಡ ಆನಂದ ಗೌಡ ಪ್ರತಿದಿನವೂ ಕೆಲಸಕ್ಕೆ ಹೋಗುವ ಮುನ್ನ ಮನೆಯ ಬಾಗಿಲಿಗೆ ಬೀಗ ಹಾಕಿ, ಕೀಲಿಯನ್ನು ಕೊಟ್ಟಿಗೆಯಲ್ಲಿ ಇಟ್ಟು ಹೋಗುತ್ತಿದ್ದರು. ಚಿನ್ನಾಭರಣವನ್ನು ಕೊನೆಯದಾಗಿ ಮೇ 23 ರಂದು ನೋಡಿದವರು, ಜೂ.14 ರಂದು ಶಿರಾಡಿ ದೇವಸ್ಥಾನಕ್ಕೆ ಹೋಗುವ ಮುನ್ನ ಗೊದ್ರೆಜ್ ತೆರೆಯಲು ಯತ್ನಿಸಿದಾಗ ಕಳ್ಳತನದ ವಿಷಯ ಬೆಳಕಿಗೆ ಬಂದಿದೆ. ಗೊದ್ರೆಜ್ಗೆ ಬೀಗ ಇದ್ದರೂ ಒಳಗಿನ ಚಿನ್ನಾಭರಣಗಳು ನಾಪತ್ತೆಯಾಗಿದ್ದವು.
ಕಳ್ಳರು ಸುಮಾರು 3 ಪವನ್ ತೂಕದ ಕರಿಮಣಿ ಸರ, 2 ಪವನ್ ಚೈನ್, 1 ಪವನ್ ಬಳೆ ಮತ್ತು ಅರ್ಧ ಪವನ್ ತೂಕದ ಕಿವಿಯೋಲೆ ಸೇರಿದಂತೆ ಒಟ್ಟು ರೂ 2,60,000 ರೂಪಾಯಿ ಅಂದಾಜು ಮೌಲ್ಯದ 52 ಗ್ರಾಂ ಚಿನ್ನವನ್ನು ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ನಡೆದ ಸ್ಥಳಕ್ಕೆ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ ಆರ್. ಗಾಣಿಗೇರ ನೇತೃತ್ವದ ಪೊಲೀಸ್ ತಂಡ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.







