



ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಪರ್ಕಳ ಸೇತುವೆಯ ಬಳಿ ಮಂಗಳವಾರ ಬೆಳಗ್ಗೆ ಕಾರು ಹಾಗೂ ಟ್ಯಾಕ್ಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಘಟನೆಯಲ್ಲಿ ಗಾಯಗೊಂಡವರನ್ನು ಬೆಂಗಳೂರು ಬೊಮ್ಮನಹಳ್ಳಿ ಬಿಲೇಕಹಳ್ಳಿ ನಿವಾಸಿ ವೆಂಕಟೇಶ್(30) ಎಂದು ಗುರುತಿಸಲಾಗಿದೆ. ಅವರು ಬೆಂಗಳೂರಿನಿಂದ ಕಾರಿನಲ್ಲಿ ಸ್ನೇಹಿತರೊಂದಿಗೆ ಧರ್ಮಸ್ಥಳಕ್ಕೆ ಮೂವರು ಗಂಡಸರು ಹಾಗೂ ಒಂದು ಮಗು ಸೇರಿ ಕಾರಿನಲ್ಲಿ ಒಟ್ಟು ನಾಲ್ವರು ಪ್ರಯಾಣಿಸುತ್ತಿದ್ದರು. ಇವರ ಪೈಕಿ ವೆಂಕಟೇಶ್ ಎಂಬವರು ಮಾತ್ರ ತೀವ್ರ ಗಾಯಗೊಂಡಿದ್ದಾರೆ.
ಪರಕ್ಕಳ ಸೇತುವೆಯ ಬಳಿ ರಾಷ್ಟ್ರೀಯ ಹೆದ್ದಾರಿ ಚತುಷ್ಪದ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಗುತ್ತಿಗೆ ಕಂಪೆನಿಗೆ ಸೇರಿದ ಟ್ಯಾಕ್ಟರ್ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ನಿಯಂತ್ರಣ ತಪ್ಪಿದ ಕಾರು ನೇರವಾಗಿ ಟ್ಯಾಕ್ಟರ್ ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ವೆಂಕಟೇಶ್ ಅವರನ್ನು ತಕ್ಷಣ ಮಂಗಳೂರಿನ ಎಜೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.







