
ನೆಲ್ಯಾಡಿ: ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಜೂ.21ರಂದು ಯೋಗ ದಿನವನ್ನು ಆಚರಿಸಲಾಯಿತು. ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕರಾದ ಮೊಹಮ್ಮದ್ ಹ್ಯಾರಿಸ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಯೋಗ ಪ್ರಾತ್ಯಕ್ಷಿಕೆ ನೀಡಿದರು.
ಕಾರ್ಯಕ್ರಮಕ್ಕೆ ಪ್ರಮುಖ ಅತಿಥಿಯಾಗಿ ಆಗಮಿಸಿದ್ದ ಬೆಂಗಳೂರಿನ ಎಕ್ಸ್ಫ್ಯಾಕ್ಟರ್ ಸಂಸ್ಥೆಯ ಎಚ್.ಆರ್ ಮ್ಯಾನೇಜರ್ ಮುರಳಿ ಮೋಹನ್ ಎಂ ಅವರು, “ಯೋಗವನ್ನು ನಾವು ಒಂದೇ ದಿನ ಆಚರಿಸುವ ಆಚರಣೆಯಾಗಿ ಇರಿಸಿಕೊಳ್ಳದೇ, ಪ್ರತಿದಿನದ ಜೀವನದ ಭಾಗವಾಗಿಸಿಕೊಳ್ಳಬೇಕು,” ಎಂದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಫಾ.ಅನಿಶ್ ಪಾರಶೇರೀಲ್ ಅವರು “ಯೋಗವೆಂಬುದು ಕೇವಲ ವ್ಯಾಯಾಮವಲ್ಲ; ಅದು ಮನಸ್ಸು, ಶರೀರ ಮತ್ತು ಆತ್ಮದ ಸಂಯೋಜನೆಯ ಮಾರ್ಗವಾಗಿದೆ,” ಎಂದರು.
ಸಂಸ್ಥೆಯ ಸಂಚಾಲಕರಾದ ಫಾ.ನೋಮಿಸ್ ಕುರಿಯಾಕೋಸ್, ಪ್ರಾಂಶುಪಾಲರಾದ ಎಲಿಯಾಸ್ ಎಂ.ಕೆ, ಕನ್ನಡ ಮಾಧ್ಯಮದ ಮುಖ್ಯಶಿಕ್ಷಕ ಎಂ.ಐ. ತೋಮಸ್, ಆಂಗ್ಲ ಮಾಧ್ಯಮದ ಮುಖ್ಯಶಿಕ್ಷಕ ಹರಿಪ್ರಸಾದ್, ನೆಲ್ಯಾಡಿ ಜೇಸಿಐ ಅಧ್ಯಕ್ಷ ಪ್ರಕಾಶ್ ಕೆ ವೈ, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಯೋಗ ಪ್ರಾತ್ಯಕ್ಷಿಕೆಯಲ್ಲಿ ವಿಶೇಷವಾಗಿ ಕೌಶಲ್ಯ ಪ್ರದರ್ಶಿಸಿದ ಮೂವರು ವಿದ್ಯಾರ್ಥಿಗಳಿಗೆ ಜೇಸಿಐ ಅಧ್ಯಕ್ಷರು ಸ್ಮರಣಿಕೆ ನೀಡಿದರು. ಸಿಮಿ ಸಿ ಜಾರ್ಜ್ ಕಾರ್ಯಕ್ರಮ ನಿರೂಪಿಸಿದರು, ಕುಮಾರಿ ರಾಬಿಯಾ ಸ್ವಾಗತಿಸಿದರು. ಮೊಹಮ್ಮದ್ ಹ್ಯಾರಿಸ್ ವಂದಿಸಿದರು.










