



ಕೊಕ್ಕಡ: ಕೊಕ್ಕಡ ಸಮೀಪದ ದಡ್ಡಲುಪಳಿಕೆ ಅರಣ್ಯ ಪ್ರದೇಶದಲ್ಲಿ ಬೆಂಗಳೂರು ಮೂಲದ ಯುವಕ-ಯುವತಿ ಜೋಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ.
ಬೆಂಗಳೂರು ಮೂಲದ ಯುವಕ ಹಾಗೂ ಯುವತಿ ಜೂ.22ರಂದು ಬೆಳಿಗ್ಗೆ ಧರ್ಮಸ್ಥಳದಿಂದ ಕೊಕ್ಕಡಕ್ಕೆ ಬಂದು ಅಲ್ಲಿಂದ ಕೊಕ್ಕಡ-ಪೆರಿಯಶಾಂತಿ ರಸ್ತೆ ಮೂಲಕ ನಡೆದುಕೊಂಡು ದಡ್ಡಲುಪಳಿಕೆ ಎಂಬಲ್ಲಿ ಅರಣ್ಯದೊಳಗೆ ತೆರಳಿ ವಿಷ ಸೇವಿಸಿದರೆಂದು ಶಂಕಿಸಲಾಗಿದೆ. ವಿಷ ಸೇವಿಸಿದ ಬಳಿಕ ಅವರು ಅಸ್ವಸ್ಥ ಸ್ಥಿತಿಯಲ್ಲಿ ಹೆದ್ದಾರಿ ಪಕ್ಕಕ್ಕೆ ಬಂದಿದ್ದು, ಇವರನ್ನು ವಿಚಾರಿಸಿದ ವೇಳೆ ಜೋಡಿ ವಿಷ ಸೇವಿಸಿರುವುದು ಗೊತ್ತಾಗಿದೆ. ತಕ್ಷಣವೇ ಸ್ಥಳೀಯರ ನೆರವಿನಿಂದ ಇಬ್ಬರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಬಳಿಕ ಅಲ್ಲಿಂದ ತುರ್ತು ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.







