ಕಾಂಚನ ಪೆರ್ಲ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ‘ಚಿನ್ನೆರ್’ ಜಿನೇಂದ್ರಕುಮಾರ್ ಜೈನ್ ನಿಧನ

ಶೇರ್ ಮಾಡಿ

ನೆಲ್ಯಾಡಿ: ಆಲಂತಾಯ ಗ್ರಾಮದ ಪಾಲೇರಿ ನಿವಾಸಿ, ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ, ಹಾಗೂ ಪ್ರಗತಿಪರ ಕೃಷಿಕ ಜಿನೇಂದ್ರಕುಮಾರ್ ಜೈನ್(65) (ಚಿನ್ನೆರ್) ಅವರು ಇಂದು (ಜೂ. 24) ಮುಂಜಾನೆ ತಮ್ಮ ನಿವಾಸದಲ್ಲೇ ವಿಧಿವಶರಾಗಿದ್ದಾರೆ.

ಜೂ.23ರ ಸಂಜೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವರಿಗೆ ತೀವ್ರ ಸುಸ್ತು ಕಾಣಿಸಿಕೊಂಡಿತ್ತು. ತಕ್ಷಣ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ವೈದ್ಯರ ಸಲಹೆಯಂತೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರಿಗೆ ಆಗಲೇ ರಕ್ತದೊತ್ತಡ ಹೆಚ್ಚಾಗಿ ಮೆದುಳಿಗೆ ರಕ್ತಸ್ರಾವವಾಗಿದ್ದ ಪರಿಣಾಮ, ಹೆಚ್ಚಿನ ಚಿಕಿತ್ಸೆ ಸಾಧ್ಯವಿಲ್ಲದ ಕಾರಣ ಅವರನ್ನು ಮತ್ತೆ ನೆಲ್ಯಾಡಿಗೆ ವಾಪಸ್ ಕರೆತರಲಾಯಿತು. ಮುಂಜಾನೆ ಮನೆಯಲ್ಲಿಯೇ ಅವರು ಕೊನೆಯುಸಿರೆಳೆದರು.

ಜಿನೇಂದ್ರಕುಮಾರ್ ಜೈನ್ ಅವರು ಶ್ರೀ ಷಣ್ಮುಖ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರಾಗಿ ಹಲವು ವರ್ಷಗಳಿಂದ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದು, ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರದ್ಧೆಯಿಂದ ಪಾಲ್ಗೊಂಡಿದ್ದರು. ಸರಳತೆ, ಸಜ್ಜನತೆ ಹಾಗೂ ಧರ್ಮಾಭಿಮಾನದಿಂದ ಕೂಡಿದ್ದ ಅವರು ತಮ್ಮದೇ ಆದ ವಿಭಿನ್ನ ವ್ಯಕ್ತಿತ್ವದಿಂದ ‘ಚಿನ್ನೆರ್’ ಎಂಬ ಹೆಸರಿನಿಂದ ಸಾರ್ವಜನಿಕರಲ್ಲಿ ಪ್ರಸಿದ್ಧರಾಗಿದ್ದರು. ಒಂದು ಕಾಲದಲ್ಲಿ ನೆಲ್ಯಾಡಿಯಲ್ಲಿ ಅಡಿಕೆ ವ್ಯಾಪಾರದಲ್ಲಿಯೂ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ ಮಮತಾ, ಅವಳಿ ಪುತ್ರಿಯರಾದ ಶ್ರದ್ಧಾ ಮತ್ತು ಶ್ರಾವ್ಯ, ಸಹೋದರ ರಾಜಶೇಖರ ಹಾಗೂ ನಾಲ್ಕು ಸಹೋದರಿಯರನ್ನು ಅಗಲಿದ್ದಾರೆ.


  •  

Leave a Reply

error: Content is protected !!