


ಶಿಶಿಲ: ಶಿಶಿಲೇಶ್ವರ ದೇವಳದ ಆಡಳಿತ ಮಂಡಳಿಯ ಸದಸ್ಯರ ಆಯ್ಕೆ ಪ್ರಕ್ರಿಯೆ ಸಭೆ ಗುರುವಾರದಂದು ದೇವಳ ಆವರಣದಲ್ಲಿ ಆಡಳಿತಾಧಿಕಾರಿ ದಿನೇಶ್ ಎಂ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಆದರೆ, ಸಭೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳಬೇಕಾದ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ಉಪಸ್ಥಿತರಿರದೆ ಸಭೆಯಿಂದ ದೂರ ಉಳಿದಿರುವುದು ಇಲ್ಲಿನ ಭಕ್ತಾದಿಗಳು ಮತ್ತು ಗ್ರಾಮಸ್ಥರಲ್ಲಿ ನಾನಾ ಪ್ರಶ್ನೆಗಳನ್ನು ಎಬ್ಬಿಸಿದೆ.
ಸಭೆಯಲ್ಲಿ ದೇವಳದ ಪ್ರಧಾನ ಅರ್ಚಕ ಶ್ರೀರಾಮ ಕಾರಂತ್ ಅವರು ಮಾತ್ರ ಹಾಜರಾಗಿದ್ದು, ಉಳಿದ ಅಭ್ಯರ್ಥಿಗಳಾದ ಚೆನ್ನಪ್ಪ ಬಿನ್ ಅಣ್ಣು ನಲ್ಕೆ, ವಿಮಲ, ಪ್ರೇಮ, ರಮೇಶ್ ಬಿನ್ ಬಾಲಣ್ಣ ಗೌಡ, ಸುಂದರ ಗೌಡ ಬಿನ್ ಸೋಮಣ್ಣ ಗೌಡ ಹಾಗೂ ಕೆ. ಸುನಿಲ್ ಗೋಖಲೆ ಬಿನ್ ವೆಂಕಟೇಶ್ ಗೋಖಲೆ ಅವರು ಗೈರಾಗಿದ್ದರು.
ಈ ಅನಿರೀಕ್ಷಿತ ಬೆಳವಣಿಗೆಯಿಂದ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ಮುಂದೂಡಲ್ಪಟ್ಟಿದ್ದು, ಇದರ ಸಂಪೂರ್ಣ ವರದಿಯನ್ನು ಜಿಲ್ಲಾ ಧಾರ್ಮಿಕ ಪರಿಷತ್ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆಗಳ ಧರ್ಮದಾಯ ದತ್ತಿ ಇಲಾಖೆಗೆ ಸಲ್ಲಿಸಲಾಗುವುದು ಎಂದು ಆಡಳಿತಾಧಿಕಾರಿ ದಿನೇಶ್ ಎಂ. ತಿಳಿಸಿದರು.









