ಕಡಬ: ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ: ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಾಗಾರ

ಶೇರ್ ಮಾಡಿ

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.), ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಕಡಬ ಇವರ ಸಂಯುಕ್ತ ಆಶ್ರಯದಲ್ಲಿ ಜೂ.27ರಂದು “ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ” ಅಂಗವಾಗಿ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

ಕಡಬ ಸರಕಾರಿ ಪುಪೂ ಕಾಲೇಜಿನಲ್ಲಿ ನಡೆದ ಈ ಕಾರ್ಯಾಗಾರವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ವಲಯಾಧ್ಯಕ್ಷ ಕರುಣಾಕರ ಗೋಗಟೆ ಉದ್ಘಾಟಿಸಿ, ವಿದ್ಯಾರ್ಥಿಗಳಲ್ಲಿ ತಾಯಂದಿರ ತ್ಯಾಗ ಹಾಗೂ ಶಿಕ್ಷಕರ ಮಾನ್ಯತೆಗೆ ಗೌರವದ ಮನೋಭಾವ ಬೆಳೆಸಬೇಕೆಂದರು. “ಶಿಕ್ಷಣ ಅರ್ಥಪೂರ್ಣವಾಗಬೇಕಾದರೆ ನಮ್ಮ ಅಂತರಂಗ ಶುದ್ಧವಾಗಿರಬೇಕು” ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಪುಣ್ಚಪ್ಪಾಡಿ ಸಮರ್ಥ ಜನಸೇವಾ ಟ್ರಸ್ಟ್‌ನ ಅಧ್ಯಕ್ಷ ಗಿರಿಶಂಕರ ಸುಲಾಯ, “ಮಾದಕ ವಸ್ತುಗಳ ಸೆಳೆತದಿಂದ ಮಾನವ ಮೌಲ್ಯ ಕಳೆದುಹೋಗುತ್ತದೆ. ವಿದ್ಯಾರ್ಥಿಗಳು ಆರೋಗ್ಯ ಹಾಗೂ ಭವಿಷ್ಯದ ಮೇಲೆ ಒತ್ತು ನೀಡಿ, ದುಷ್ಟ ವ್ಯಸನಗಳಿಂದ ದೂರವಿರಬೇಕು” ಎಂಬ ಸಂದೇಶ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಅಧ್ಯಕ್ಷ ಮಹೇಶ್ ಕೆ. ಸವಣೂರು ಮಾತನಾಡಿ, “ಮಾದಕ ವ್ಯಸನದ ಬಲಿ ಕೇವಲ ವ್ಯಕ್ತಿಯಷ್ಟೇ ಅಲ್ಲ, ಒಂದು ಕುಟುಂಬವೇ ಹಾಳಾಗುತ್ತದೆ. ಈ ತೀವ್ರತೆಯನ್ನು ಎಲ್ಲರೂ ಅರಿತು, ತಮ್ಮ ಜೀವನದ ಗುರಿಯತ್ತ ಸತ್ಯ ನಿಷ್ಠೆಯಿಂದ ನಡೆದುಕೊಳ್ಳಬೇಕು” ಎಂದು ಸಲಹೆ ನೀಡಿದರು.

ಅತಿಥಿಗಳಾಗಿ ಕಾಲೇಜು ಪ್ರಾಂಶುಪಾಲ ಡಿ.ದೇವರಾಜು, ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ, ಸ್ವಸಹಾಯ ಸಂಘ ಒಕ್ಕೂಟದ ಅಧ್ಯಕ್ಷ ರಮೇಶ್ ರೈ ಅರ್ಪಾಜೆ, ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯೆ ಸರೋಜಿನಿ ಆಚಾರ್ಯ ಶುಭಾಶಯ ಕೋರಿದರು.

ಸೇವಾ ಪ್ರತಿನಿಧಿಗಳಾದ ಸವಿತಾ, ಸರಿತಾ, ನಳಿನಿ ಅವರು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು. ವಲಯ ಮೇಲ್ವಿಚಾರಕ ವಿಜೇಶ್ ಜೈನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಲಾವಣ್ಯ ವಂದಿಸಿದರು.

  •  

Leave a Reply

error: Content is protected !!