


ಕೊಕ್ಕಡ: ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹುಂಡಿ ಹಣ ಎಣಿಕೆ ಸಂದರ್ಭದಲ್ಲಿ ದೇವಳಕ್ಕೆ ವಂಚಿಸಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಅವರು ನೀಡಿದ ದೂರಿನಂತೆ ಕೆನರಾ ಬ್ಯಾಂಕ್ನ ಕೊಕ್ಕಡ ಶಾಖಾ ಸಿಬ್ಬಂದಿ ಗಣೇಶ್ ನಾಯ್ಕ್ ಎಂಬವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಜೂ.20ರಂದು ಬೆಳಿಗ್ಗೆ ದೇವಸ್ಥಾನದ ಸಮಿತಿ ಸದಸ್ಯರ ಸಮಕ್ಷಮ ದೇವಳದ ಕಾರ್ಯನಿರ್ವಹಣಾಧಿಕಾರಿ, ಕೆನರಾ ಬ್ಯಾಖ್ ಕೊಕ್ಕಡ ಶಾಖೆಯ ಸಿಬ್ಬಂದಿಗಳಾದ ಮ್ಯಾಥ್ಯು, ಗಣೇಶ ನಾಯ್ಕ ಹಾಗೂ ಜಿಲ್ಲಾಧಿಕಾರಿಯವರ ಆದೇಶದನ್ವಯ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಜಿಲ್ಲಾಧಿಕಾರಿಯವರ ಕಚೇರಿಯಿಂದ ನಿಯೋಜಿತರಾದ ಸಿಬ್ಬಂದಿ ಹಾಗೂ ದೇವಸ್ಥಾನದ ವತಿಯಿಂದ ಕರೆಸಲ್ಪಟ್ಟ ಸುಮಾರು 42 ಜನ ಸ್ವಯಂ ಸೇವಕರು ಹಾಗೂ ಶ್ರೀ ದೇವಾಲಯದ 20ಕ್ಕೂ ಹೆಚ್ಚಿನ ಸಿಬ್ಬಂದಿಗಳೊಂದಿಗೆ ಹುಂಡಿ ಎಣಿಕೆ ನಡೆದಿರುತ್ತದೆ.
ಈ ಸಂದರ್ಭದಲ್ಲಿ ಅಲ್ಲಿ ಸೇರಿದ ಎಲ್ಲರೂ ರೂ.500, 200, 100, 50,20 ಮತ್ತು 10ರ ನೋಟುಗಳನ್ನು ವರ್ಗಾವಾರು ವಿಂಗಡಣೆ ಮಾಡಿ ಜೋಡಿಸಿ ಇಡುವ ಕೆಲಸ ಮಾಡಿದ್ದು, ಆ ಸಮಯ ಗಣೇಶ ನಾಯ್ಕ್ ಹುಂಡಿ ಕಾಣಿಕೆ ಹಣದ ಎಣಿಕೆಯ ಸಂದರ್ಭದಲ್ಲಿ ಕೆಲವೊಂದು ನೋಟುಗಳನ್ನು ಬಂಡಲ್ಗೆ ಹೆಚ್ಚು ಸೇರಿಸುತ್ತಿರುವ ಬಗ್ಗೆ ಸಂಶಯ ಬಂದ ಹಿನ್ನೆಲೆಯಲ್ಲಿ ಲೆಕ್ಕ ಮಾಡಿ ಪ್ಯಾಕ್ ಮಾಡಿಟ್ಟ ಹಣದ ಒಂದು ಬಂಡಲ್ ತೆಗೆದು ಎಣಿಸಿದಾಗ ಅದರಲ್ಲಿ ಹೆಚ್ಚುವರಿ ನೋಟುಗಳು ಇದ್ದು ಬಳಿಕ ಲೆಕ್ಕ ಮಾಡಿ ಇಟ್ಟ ಎಲ್ಲಾ ಹಣದ ಬಂಡಲ್ಗಳನ್ನು ತೆಗೆದು ಎಣಿಸಿದಾಗ ಒಟ್ಟು 40 ಸಾವಿರ ರೂ.ಹೆಚ್ಚುವರಿ ಹಣ ಇರುವುದು ಪತ್ತೆಯಾಗಿದೆ. ಅಪಾದಿತ ಗಣೇಶ್ ನಾಯ್ಕ್ ಈ ರೀತಿಯಾಗಿ ದೇವಳಕ್ಕೆ ವಂಚಿಸುವ ಮೂಲಕ ಅಪರಾಧ ನಂಬಿಕೆ ದ್ರೋಹ ಎಸಗಲು ಪ್ರಯತ್ನಿಸಿರುವುದು ಕಂಡು ಬರುತ್ತದೆ ಎಂದು ಸುಬ್ರಹ್ಮಣ್ಯ ಶಬರಾಯ ಅವರು ದೂರು ನೀಡಿದ್ದರು. ಈ ದೂರಿನಂತೆ ಧರ್ಮಸ್ಥಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.









