

ನೆಲ್ಯಾಡಿ: ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜು ನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವು ಸೆ.25ರಿಂದ ಅ.1ರವರೆಗೆ ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ಶಿಬಿರದ ಉದ್ಘಾಟನಾ ಸಮಾರಂಭವು ಸೆ.25ರ ಅಪರಾಹ್ನ 2.30ಕ್ಕೆ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಫಾ.ಅನೀಶ್ ಪಾರಶೇರಿಲ್ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಥನಿ ವಿದ್ಯಾಸಂಸ್ಥೆಗಳ ನಿರ್ದೇಶಕ ಫಾ. ಆಂಟನಿ ಪಡಿಪುರಯ್ಕಲ್ ವಹಿಸಲಿದ್ದಾರೆ. ಶುಭಶಂಸನೆಯನ್ನು ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಸಂಚಾಲಕ ಫಾ.ನೋಮಿಸ್ ಕುರಿಯಾಕೋಸ್, ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗಿಸ್, ಸಂತ ಜಾರ್ಜ್ ಪ.ಪೂ. ಕಾಲೇಜು ಪ್ರಾಚಾರ್ಯ ಎಲಿಯಾಸ್ ಎಂ.ಕೆ., ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಾರ್ಜ್ ಟಿ.ಎಸ್ ಹಾಗೂ ಸ್ಥಳೀಯ ಗಣ್ಯರು ಭಾಗವಹಿಸಲಿದ್ದಾರೆ.
ಶಿಬಿರದ ಭಾಗವಾಗಿ ಧ್ವಜಾರೋಹಣ, ಶ್ರಮದಾನ, ಮನೆ ಭೇಟಿ, ನಶಾಮುಕ್ತ ಭಾರತ ಅಭಿಯಾನ, ವಿವಿಧ ತರಬೇತಿ ಕಾರ್ಯಕ್ರಮಗಳು ಹಾಗೂ ಪ್ರತಿದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
“ಮನೆಯೊಳಗೆ ಮನದ ಮಾತು” ಎಂಬ ಶಿಬಿರಾರ್ಥಿಗಳ ಚರ್ಚೆ, ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಕುರಿತು ತಜ್ಞ ಉಪನ್ಯಾಸ, “ಮಾನವೀಯ ಮೌಲ್ಯಗಳ ಮೇಲೆ ಎ.ಐ. ಪ್ರಭಾವ” ಕುರಿತು ವಿಚಾರಗೋಷ್ಠಿ, ಉಚಿತ ದಂತ ಚಿಕಿತ್ಸಾ ಶಿಬಿರ, “ಜೀವಜಲ ಸಂಪತ್ತು ಉಳಿಸೋಣ” ಎಂಬ ಪರಿಸರ ಜಾಗೃತಿ ಕಾರ್ಯಕ್ರಮ ಮುಂತಾದ ಅನೇಕ ಅರ್ಥಪೂರ್ಣ ವಿಷಯಗಳ ಬಗ್ಗೆ ಕಾರ್ಯಾಗಾರಗಳು ನಡೆಯಲಿವೆ.
ಸಮಾಜಮುಖಿ ಚಟುವಟಿಕೆಗಳ ಜೊತೆಗೆ ಶಿಬಿರಾರ್ಥಿಗಳು ಗ್ರಾಮೀಣ ಜೀವನ, ಶಿಸ್ತು, ತಂಡಭಾವನೆ ಹಾಗೂ ಸಮಾಜ ಸೇವೆಯ ಅರಿವು ಪಡೆಯಲಿದ್ದಾರೆ. ಪ್ರತಿದಿನ ಸಂಜೆ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಒದಗಿಸಲಿದೆ.
ಶಿಬಿರವನ್ನು ಯಶಸ್ವಿಯಾಗಿ ನಡೆಸಲು ಶಿಬಿರ ನಿರ್ದೇಶಕರು ಪ್ರಾಚಾರ್ಯ ಎಲಿಯಾಸ್ ಎಂ.ಕೆ., ಶಿಬಿರಾಧಿಕಾರಿಗಳಾದ ವಿಶ್ವನಾಥ ಶೆಟ್ಟಿ ಕೆ., ಮಧು ಎ.ಜೆ., ಜೆಸಿಂತಾ ಕೆ.ಜೆ., ಚೇತನ್ ಕುಮಾರ್ ಕೆ., ಶಾರದಾ ಬಿ.ಸಿ., ಮಹಮ್ಮದ್ ಹ್ಯಾರಿಸ್, ಗೀತಾ ಪಿ.ಬಿ., ಕಿರಣ್ ಕುಮಾರ್, ಪ್ರಜ್ವಲ್ ಕೆ.ಪಿ. ಹಾಗೂ ಘಟಕ ನಾಯಕರು ತನುಷ್ ಮತ್ತು ಅನುಷಾ ನೇತೃತ್ವ ವಹಿಸಿದ್ದಾರೆ.
ಸಮಾರೋಪ ಸಮಾರಂಭ ಅ1ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದ್ದು, ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಸಂಚಾಲಕ ಫಾ.ನೋಮಿಸ್ ಕುರಿಯಾಕೋಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಥನಿ ವಿದ್ಯಾಸಂಸ್ಥೆಗಳ ಸಂಚಾಲಕ ಫಾ. ವರ್ಗೀಸ್ ಕೈಪನಡ್ಕ, ರೆಂಜಿಲಾಡಿ ಅರಸರು ಯಶೋಧರ ತಮ್ಮಯ್ಯ ಬಲ್ಲಾಳ್, ಸಮಾಜಮುಖಿ ಸಂಸ್ಥೆಗಳ ಪ್ರತಿನಿಧಿಗಳು, ಪೋಷಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಸಮಾರೋಪ ಭಾಷಣವನ್ನು ಬೆಥನಿ ಸಂಯುಕ್ತ ಪ.ಪೂ. ಕಾಲೇಜಿನ ಪ್ರಾಚಾರ್ಯ ಜಾರ್ಜ್ ಟಿ.ಎಸ್. ನಿರ್ವಹಿಸಲಿದ್ದಾರೆ.






