


ನೆಲ್ಯಾಡಿ: ಇಲ್ಲಿನ ಬೆಥನಿ–ಕೆರ್ನಡ್ಕ ಮಾರ್ಗದಲ್ಲಿ ಅ.9ರಂದು ರಾತ್ರಿ ಕಾಡುಹಂದಿಗಳ ಹಿಂಡು ಕಾಣಿಸಿಕೊಂಡ ಘಟನೆ ಸ್ಥಳೀಯರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ.

ಬೆಥನಿ ವಿದ್ಯಾಸಂಸ್ಥೆಯ ಹಿಂಬದಿ ಭಾಗದಿಂದ ಕೆರ್ನಡ್ಕ ಮೂಲಕ ಮಾದೇರಿ ಸಂಪರ್ಕ ರಸ್ತೆಯಲ್ಲಿರುವ ಇನ್ಫೆಂಟ್ ಜೀಸಸ್ ಚರ್ಚ್ ಸಮೀಪ ರಸ್ತೆಮೇಲೆ ಸುಮಾರು 15ಕ್ಕೂ ಹೆಚ್ಚು ಕಾಡುಹಂದಿಗಳು ಓಡಾಡಿರುವುದನ್ನು ಬೈಕ್ ಸವಾರರು ತಮ್ಮ ಕಣ್ಣಾರೆ ಕಂಡಿದ್ದಾರೆ. ನಂತರ ಅವು ರಸ್ತೆ ದಾಟಿ ಹತ್ತಿರದ ಕೃಷಿ ತೋಟಗಳತ್ತ ನುಗ್ಗಿದೆಯೆಂದು ತಿಳಿದುಬಂದಿದೆ.
ಪ್ರತಿ ರಾತ್ರಿ ಕಾಡುಹಂದಿಗಳು ಕೃಷಿ ತೋಟಗಳಿಗೆ ನುಗ್ಗಿ ಬೆಳೆ ನಾಶಮಾಡುತ್ತಿರುವ ಕುರಿತು ಸ್ಥಳೀಯ ರೈತರಿಂದಲೂ ದೂರುಗಳು ಕೇಳಿಬರುತ್ತಿದ್ದು, ಈಗ ರಸ್ತೆಮೇಲೆ ನೇರವಾಗಿ ಹಂದಿಗಳ ಗುಂಪು ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ.






