

ಕೊಕ್ಕಡ: ದೀಪಾವಳಿಯ ಪವಿತ್ರ ಹಬ್ಬದ ಪ್ರಯುಕ್ತ, ಸನಾತನ ಸಂಸ್ಕೃತಿಯ ಗೌರವವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಕಾಯರ್ತಡ್ಕದ ನಂದಗೋಕುಲ ಗೋಶಾಲೆ ಆವರಣದಲ್ಲಿ ಬುಧವಾರ ಮುಂಜಾನೆ ಅದ್ದೂರಿಯಾಗಿ ಸಾಮೂಹಿಕ ಗೋಪೂಜೆ ನೆರವೇರಿಸಲಾಯಿತು.

ಈ ಭಕ್ತಿ ಪೂರ್ಣ ಕಾರ್ಯಕ್ರಮವನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಕೇಂದ್ರ ಕಚೇರಿ, ತುಮಕೂರು ಹಾಗೂ ಅದರ ಮಂಗಳೂರು ಜಿಲ್ಲೆಯ ಬೆಳ್ತಂಗಡಿ, ಕಳಿಯ ಮತ್ತು ಗುರುವಾಯನಕೆರೆ ಯೋಗ ಶಾಖೆಗಳ ಯೋಗಬಂಧುಗಳು ಸಂಯುಕ್ತವಾಗಿ ಆಯೋಜಿಸಿದ್ದರು. ಹಸು, ಭಕ್ತಿ ಮತ್ತು ಯೋಗ — ಈ ಮೂರು ಸಂಸ್ಕೃತಿಯ ಜೀವಾಳಗಳ ಸಂಗಮವಾಗಿ ನಂದಗೋಕುಲ ಗೋಶಾಲೆಯ ಆವರಣ ಪವಿತ್ರ ವಾತಾವರಣದಲ್ಲಿ ಮೊಳಗಿತು.
ಪವಿತ್ರ ವೇದಮಂತ್ರಗಳ ನಡುವೆ ಗೋಪೂಜೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿತು. ಭಕ್ತಿಯಿಂದ ಅಲಂಕರಿಸಲಾದ ಗೋಮಾತೆಗಳಿಗೆ ಹೂಮಾಲೆ ತೊಡಿಸಿ, ಅರಿಶಿನ-ಕುಂಕುಮ ಹಚ್ಚಿ, ದೀಪ ಬೆಳಗಿಸಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಯೋಗಬಂಧು ಅಶ್ವಥ್ ಅವರು ಗೋಪೂಜೆಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವ ಕುರಿತು ಬೌದ್ಧಿಕ ನೀಡಿದರು. ಅವರು ಮಾತನಾಡಿ ಗೋಪೂಜೆ ಕೇವಲ ವಿಧಿವಿಧಾನವಲ್ಲ ಅದು ಪ್ರಕೃತಿ, ಪ್ರಾಣಿ ಮತ್ತು ಮಾನವ ನಡುವಿನ ಕೃತಜ್ಞತೆಯ ಸೇತುವೆ. ಹಸು ನಮ್ಮ ಜೀವನದ ಆರ್ಥಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಬಲದ ಪ್ರತೀಕ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಪ್ರೇಮಲತಾ ಗಣೇಶ್, ಸಹಶಿಕ್ಷಕ ಸುಕೇಶ್, ವಿಜಯಣ್ಣ ಹಾಗೂ ಮೂವರು ಯೋಗ ಶಾಖೆಗಳ ಒಟ್ಟು 85 ಯೋಗಬಂಧುಗಳು ಭಕ್ತಿಭಾವದಿಂದ ಪಾಲ್ಗೊಂಡರು.






