ನೆಲ್ಯಾಡಿ ಸೈಂಟ್ ಗ್ರಿಗೋರಿಯೋಸ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನಲ್ಲಿ ವಾರ್ಷಿಕ ಹಬ್ಬ – ಅ.31 ಹಾಗೂ ನ.1ರಂದು ಭಕ್ತಿ ಭಾವದಿಂದ ಆಚರಣೆ

ಶೇರ್ ಮಾಡಿ

ನೆಲ್ಯಾಡಿ: ಧರ್ಮ, ಭಕ್ತಿ ಹಾಗೂ ಸೇವಾ ಪರಂಪರೆಯ ಸಂಕೇತವಾಗಿ ನೆಲ್ಯಾಡಿಯ ಸೈಂಟ್ ಗ್ರಿಗೋರಿಯೋಸ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನಲ್ಲಿ ಪವಿತ್ರ ಸಂತ ಗ್ರಿಗೋರಿಯಸ್ (ಪರುಮಲ ತಿರುಮೇನಿ) ಅವರ ಪುಣ್ಯಸ್ಮರಣೆ ಹಾಗೂ ಚರ್ಚ್‌ನ ವಾರ್ಷಿಕ ಹಬ್ಬವನ್ನು ಅ31 ಮತ್ತು ನ.1ರಂದು ಭಕ್ತಿ ಭಾವದಿಂದ, ಧಾರ್ಮಿಕ ಶ್ರದ್ಧೆಯಿಂದ ಆಚರಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

2010ರಲ್ಲಿ ಈ ಚರ್ಚ್‌ನಲ್ಲಿ ಪವಿತ್ರ ಸಂತ ಗ್ರಿಗೋರಿಯಸ್ ಅವರ ಹೋಲಿ ರೆಲಿಕ್ (ಪವಿತ್ರ ಅವಶೇಷಗಳು) ಪ್ರತಿಷ್ಠಾಪಿಸಲ್ಪಟ್ಟಿದ್ದು, ಭಕ್ತರ ನಂಬಿಕೆ ಪ್ರಕಾರ ಸಂತನ ಮಧ್ಯಸ್ಥಿಕೆಯ ಮೂಲಕ ಹರಕೆಗಳೂ ನೆರವೇರಿವೆ. ಈ ಕಾರಣದಿಂದಲೇ ಈ ದೇವಾಲಯ “ದಕ್ಷಿಣ ಕನ್ನಡದ ಪರುಮಲ” ಎಂದು ಪ್ರಸಿದ್ಧಿ ಪಡೆದಿದೆ. ಪ್ರತಿದಿನವೂ ಭಕ್ತರಿಗೆ ತೆರೆದಿರುವ ಈ ಚರ್ಚ್ ಪ್ರಾರ್ಥನೆ ಮತ್ತು ಶ್ರದ್ಧೆಯ ಕೇಂದ್ರವಾಗಿದೆ.

ಹಬ್ಬದ ಕಾರ್ಯಕ್ರಮಗಳ ವಿವರ:
ಅ.26ರಂದು ಬೆಳಗ್ಗೆ 7ಕ್ಕೆ ಪ್ರಭಾತ ಪ್ರಾರ್ಥನೆ, 8ಕ್ಕೆ ದಿವ್ಯ ಬಲಿಪೂಜೆಯನ್ನು ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ.ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲಿತರು ನೆರವೇರಿಸಿದರು. ಬೆಳಗ್ಗೆ 10.30ಕ್ಕೆ ಹಬ್ಬದ ಧ್ವಜಾರೋಹಣ ನಡೆಯಿತು.

ಅ.29ರಂದು ಬೆಳಗ್ಗೆ 7ಕ್ಕೆ ಪ್ರಭಾತ ಪ್ರಾರ್ಥನೆ, 7.30ಕ್ಕೆ ದಿವ್ಯ ಬಲಿಪೂಜೆಯನ್ನು ನೆಲ್ಯಾಡಿ ಸೈಂಟ್ ಗ್ರಿಗೋರಿಯೋಸ್ ಓರ್ಥಡೋಕ್ಸ್ ಚರ್ಚ್ ವಿಕಾರ್ ರೆ.ಫಾ.ಜಿ.ಎಂ.ಸ್ಥರಿಯಾ ರಂಬಾನ್ ನೆರವೇರಿಸಲಿದ್ದಾರೆ. ಸಂಜೆ 6ಕ್ಕೆ ಸಂಧ್ಯಾ ಪ್ರಾರ್ಥನೆ.

ಅ.30ರಂದು ಬೆಳಗ್ಗೆ 7ಕ್ಕೆ ಪ್ರಭಾತ ಪ್ರಾರ್ಥನೆ, 7.30ಕ್ಕೆ ದಿವ್ಯ ಬಲಿಪೂಜೆಯನ್ನು ಸಂಪ್ಯಾಡಿ ಸೈಂಟ್ ಮೇರೀಸ್ ಓರ್ಥಡೋಕ್ಸ್ ಚರ್ಚ್ ವಿಕಾರ್ ರೆ.ಫಾ.ವಿ.ಸಿ. ಜೋಸ್ ನೆರವೇರಿಸಲಿದ್ದಾರೆ. ಸಂಜೆ 6ಕ್ಕೆ ಸಂಧ್ಯಾ ಪ್ರಾರ್ಥನೆ.

ಅ.31ರಂದು ಬೆಳಗ್ಗೆ 7ಕ್ಕೆ ಪ್ರಭಾತ ಪ್ರಾರ್ಥನೆ, 7.30ಕ್ಕೆ ದಿವ್ಯ ಬಲಿಪೂಜೆಯನ್ನು ಮಣಿಪಾಲ್ ಸೈಂಟ್ ತೋಮಸ್ ಓರ್ಥಡೋಕ್ಸ್ ಚರ್ಚ್ ವಿಕಾರ್ ರೆ.ಫಾ. ಸೋಬಿನ್ ದಾನಿಯಲ್ ನೆರವೇರಿಸಲಿದ್ದಾರೆ. ಸಂಜೆ 6.30ಕ್ಕೆ ಸಂಧ್ಯಾ ಪ್ರಾರ್ಥನೆ, ರಾತ್ರಿ 7.15ಕ್ಕೆ ಹಬ್ಬದ ಸಂದೇಶವನ್ನು ಚಂಗೇರಿ–ಸುಲ್ತಾನ್ ಬತ್ತೇರಿ ಧರ್ಮಪ್ರಾಂತ್ಯದ ಸೈಂಟ್ ಮೇರೀಸ್ ಓರ್ಥಡೋಕ್ಸ್ ಚರ್ಚ್ ವಿಕಾರ್ ರೆ.ಫಾ. ಜಸ್ಟಿನ್ ಪಿ. ಕುರಿಯಾಕೋಸ್ ನೀಡಲಿದ್ದಾರೆ. ರಾತ್ರಿ 8ಕ್ಕೆ ಹಬ್ಬದ ಮೆರವಣಿಗೆ ನಡೆಯಲಿದೆ.

ನ.1ರಂದು ಬೆಳಗ್ಗೆ 8ಕ್ಕೆ ಪ್ರಭಾತ ಪ್ರಾರ್ಥನೆ, 9ಕ್ಕೆ ಪವಿತ್ರ ದಿವ್ಯ ಬಲಿಪೂಜೆ ಹಾಗೂ ಹಬ್ಬದ ಸಂದೇಶವನ್ನು ರೆ.ಫಾ. ಜಸ್ಟಿನ್ ಪಿ. ಕುರಿಯಾಕೋಸ್ ನೆರವೇರಿಸಲಿದ್ದಾರೆ. ನಂತರ 11ಕ್ಕೆ ಸಹಭೋಜನ ಮತ್ತು ಹರಕೆ ಸಮರ್ಪಣೆ, 11.30ಕ್ಕೆ ಏಲಂ, ಮಧ್ಯಾಹ್ನ 12ಕ್ಕೆ ಹಬ್ಬದ ಮೆರವಣಿಗೆ, 1ಕ್ಕೆ ಆಶೀರ್ವಾದ ಹಾಗೂ ಪ್ರಸಾದ ವಿತರಣೆ, 1.30ಕ್ಕೆ ಧ್ವಜಾವರೋಹಣ ಕಾರ್ಯಕ್ರಮಗಳು ನಡೆಯಲಿವೆ.

ಈ ವರ್ಷದ ವಾರ್ಷಿಕ ಹಬ್ಬದ ಹರಕೆದಾರರಾಗಿ ಮಟ್ಟುಂಪುರಂ ಕುಟುಂಬಸ್ಥರು ನಡೆಸಿಕೊಡಲಿದ್ದಾರೆ ಎಂದು ಚರ್ಚ್ ವಿಕಾರ್ ರೆ.ಫಾ. ಎಲ್ದೋ ಎಂ.ಪೌಲ್, ಕಾರ್ಯದರ್ಶಿ ಲೂಯಿಸ್ ವರ್ಗಿಸ್, ಕೋಶಾಧಿಕಾರಿ ಸಿ. ತೋಮಸ್ ಪ್ರಕಟಣೆ ನೀಡಿದ್ದು, ಹಬ್ಬದ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳನ್ನು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.

  •  

Leave a Reply

error: Content is protected !!