

ಕೊಕ್ಕಡ: ಕಾಯರ್ತಡ್ಕ ರಬ್ಬರ್ ಉತ್ಪಾದಕರ ಸೊಸೈಟಿಯ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಅ.28ರಂದು ಸಂಘದ ಅಧ್ಯಕ್ಷ ಎನ್.ಕೆ. ಚಾಕೋ ಅವರ ಅಧ್ಯಕ್ಷತೆಯಲ್ಲಿ ಸಂಘದ ಕಚೇರಿಯಲ್ಲಿ ಜರಗಿತು.
ಸಭೆಯಲ್ಲಿ ರಬ್ಬರ್ ಮಂಡಳಿ ಮಂಗಳೂರು ವಲಯದ ಅಭಿವೃದ್ಧಿ ಅಧಿಕಾರಿ ದೀಪ್ತಿ ದಾಸ್ ಪಿ ಹಾಗೂ ಯುವ ವೃತ್ತಿಪರ ನವೀನ್ ಕುಮಾರ್ ಉಪಸ್ಥಿತರಿದ್ದು, ರಬ್ಬರ್ ಮಂಡಳಿಯಿಂದ ರೈತರಿಗೆ ದೊರೆಯುವ ವಿವಿಧ ಸೌಲಭ್ಯಗಳು, ಸಹಾಯಧನಗಳು ಹಾಗೂ ತಾಂತ್ರಿಕ ನೆರವಿನ ಕುರಿತು ವಿವರವಾದ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಳೆಂಜ ಪಂಚಾಯತ್ ಸದಸ್ಯ ನಿತ್ಯಾನಂದ ರೈ, ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ನಿರ್ದೇಶಕರಾದ ಭೈರಪ್ಪ, ಸಂಘದ ವಿಶೇಷ ಆಹ್ವಾನಿತ ಸದಸ್ಯರಾದ ಅಬ್ರಹಾಂ ಬಿ.ಎಸ್., ಹರೀಶ್ ರಾವ್ ಕಾಯಡ, ಹಾಗೂ ಸಂಘದ ನಿರ್ದೇಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ರಬ್ಬರ್ ಉತ್ಪಾದಕರ ಸೊಸೈಟಿಯು ರಬ್ಬರ್ ಬೆಳೆಗಾರರಿಂದ ಹಾಲು (ಲ್ಯಾಟೆಕ್ಸ್) ಖರೀದಿ ಮಾಡಿ ರಬ್ಬರ್ ಶೀಟ್ ತಯಾರಿಸಿ ಸಂಗ್ರಹ ಮಾಡುವ ನಿರ್ಣಯ ಕೈಗೊಂಡಿತು. ಜೊತೆಗೆ, ಸಂಘದ ಅಡಿಯಲ್ಲಿ ಇರುವ ಬಯೋಗ್ಯಾಸ್ ಪ್ಲಾಂಟ್ಗಳನ್ನು ನವೀಕರಿಸುವ ಯೋಜನೆಗೂ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಂಘದ ಸದಸ್ಯತ್ವ ವಿಸ್ತರಣೆಯ ಭಾಗವಾಗಿ ಎ.ಸಿ.ಸಬಾಷ್ಟಿಯನ್ ಹಾಗೂ ಪೆರ್ನು ಗೌಡ ಎನ್. ಅವರನ್ನು ನೂತನ ಸದಸ್ಯರಾಗಿ ಸೇರಿಸಲಾಯಿತು. ಮಹಾಸಭೆಯಲ್ಲಿ ಸ್ಥಳೀಯ ರಬ್ಬರ್ ಬೆಳೆಗಾರರು, ಸಂಘದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆ ಹಾಗೂ ಧನ್ಯವಾದ ವಂದನೆ ಸಂಘದ ಉಪಾಧ್ಯಕ್ಷ ಲಕ್ಷ್ಮಣ ಗೌಡ ಪಾಂಗಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.






