

ಕಡಬ: ಸ್ವಾತಂತ್ರ ಬಂದು ಇಷ್ಟು ವರ್ಷವಾದರೂ ಅರಣ್ಯ ಭೂಮಿ, ಕೃಷಿ ಭೂಮಿ, ಕಂದಾಯ ಭೂಮಿ ಯಾವುದು ಎಂದು ಇತ್ಯರ್ಥಪಡಿಸದೆ ರೈತರಿಗೆ ಅನ್ಯಾವಾಗಿದೆ, ರೈತರ ನ್ಯಾಯಯುತ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.ಅವರು ಮಂಗಳವಾರ ಕಡಬ ತಾಲೂಕು ಕಚೇರಿ ಬಳಿ ವಿವಿಧ ಅರಣ್ಯ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ನಡೆದ ಹಕ್ಕೊತ್ತಾಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸರಕಾರದ ಕಾನೂನುಗಳಿಂದ ಕಂಗೆಟ್ಟು ರೈತರು ಬೀದಿಗೆ ಬಂದು ಪ್ರತಿಭಟಿಸುತ್ತಿರುವುದು ನಮ್ಮ ದೌರ್ಭಾಗ್ಯ. ನಾವು ಪ್ರಕೃತಿ ಜೊತೆಗೆ ಬದುಕಿದವರು ಅರಣ್ಯ ರಕ್ಷಣೆಯ ಪಾಠ ನಮಗೆ ಬೇಕಿಲ್ಲ. ಈ ಭಾಗದ ಅರಣ್ಯ ಸಮಸ್ಯೆಗಳನ್ನು ಬಗೆಹರಿಸಲು ಜನತೆಯ ಬೇಡಿಕೆಯಂತೆ ಅರಣ್ಯ, ಕಂದಾಯ ಒಟ್ಟಾಗಿ ಸರ್ವೆ ನಡೆಸಬೇಕು. ಕ್ಷೇತ್ರದ ಶಾಸಕರು, ಗ್ರಾಮ ಪಂಚಾಯಿತಿ ಆಧ್ಯಕ್ಷರ ಜೊತೆ ಗ್ರಾಮ ಸಭೆ ನಡೆಸಿ ಜಂಟಿ ಸರ್ವೆಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ ಸಂಸದರು ಆನೆ ಹಾವಳಿ ತಡೆಗೆ ಆನೆ ಪಾರ್ಕ್ ಬೇಡಿಕೆ ಇಟ್ಟಿದ್ದೇವೆ. ಅರಣ್ಯ ಸಮಸ್ಯೆ ಬಗೆಹರಿಸಲು ಕಾನೂನು ಪ್ರಕಾರ ಕ್ರಮ ವಹಿಸಿ ಜನರಿಗೆ ಅನ್ಯಾಯ ಆಗದಂತೆ ಗಮನಹರಿಸಬೇಕು. ಅರಣ್ಯ ಹಾಗೂ ಕಂದಾಯ ಸಚಿವರು ಜಿಲ್ಲೆಗೆ ಆಗಮಿಸಿ ಜಿಲ್ಲೆಯ ಶಾಸಕರ, ಜನಪ್ರತಿನಿಧಿಗಳ ಸಭೆ ನಡೆಸಿ ಚರ್ಚಿಸಿ ಕೃಷಿ ಭೂಮಿ ಉಳಿಸಲು ಯೋಜನೆ ರೂಪಿಸಬೇಕು ಎಂದು ಅಭಿಪ್ರಾಯಪಟ್ಟರು.

ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಇಲಾಖೆಗಳಿಗೆ ತಮ್ಮ ಜಾಗದ ಬಗ್ಗೆ ಗೊತ್ತಿಲ್ಲದೆ ಸಮಸ್ಯೆ ಆಗುತ್ತಿದೆ. ಜಂಟಿ ಸರ್ವೇ ವರದಿ ಬರುವವರೆಗೆ ಯಾವುದೇ ರೈತನನ್ನು ಒಕ್ಕಲೆಬ್ಬಿಸದಂತೆ ಕೆಡಿಪಿ ಸಭೆಯಲ್ಲಿ ನಾನು ಪ್ರಸ್ತಾಪಿಸಿದ್ದೇನೆ. ಸಚಿವರು ಇದಕ್ಕೆ ಪೂರಕ ಭರವಸೆ ನೀಡಿದ್ದಾರೆ. ಆರಣ್ಯ ಸಚಿವ ಈಶ್ವರ ಖಂಡ್ರೆ ಅವರು ರೈತರತ್ತ ನೋಡಲಿ. ಸರಕಾರದ ಒತ್ತಡದಿಂದ ಅಧಿಕಾರಿಗಳು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಅರಣ್ಯ ಸಮಸ್ಯೆಯನ್ನು ಅಧಿವೇಶನದಲ್ಲೂ ಪ್ರಸ್ತಾಪಿಸುತ್ತೇನೆ. ಕಡಬ, ಪುತ್ತೂರು, ಸುಳ್ಯ ಭಾಗದ ಮಹಿಳೆಯರನ್ನು ಒಟ್ಟುಗೂಡಿಸಿ ರಸ್ತೆಯಲ್ಲಿ ನಿಂತು ಹೋರಾಟಕ್ಕೂ ಸಿದ್ದನಿದ್ದೇನೆೆ ನನ್ನ ಮೇಲೆ ಎಷ್ಟು ಕೇಸ್ ಬೇಕಾದರು ಹಾಕಲಿ ಎಂದು ಸವಾಲು ಹಾಕಿದರು.
ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ, ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಗುಂಡ್ಯದಲ್ಲಿ ಮತ್ತೊಮ್ಮೆ ಹೆದ್ದಾರಿ ತಡೆ ನಡೆಸುತ್ತೇವೆ. ಬಳಿಕ ಬೆಂಗಳೂರು ಚಲೋ ನಡೆಸುತ್ತೇವೆ ಎಂದರು.
ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಇಂಜಿನಿಯರ್ ಪ್ರಸನ್ನ ದರ್ಬೆ, ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು, ಐತ್ತೂರು ಗ್ರಾಮ ಪಂಚಾಯಿತಿ ಸದಸ್ಯ ಈರೇಶ್ ಗೌಡ, ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಹಮ್ಮದಾಲಿ, ನ್ಯಾಯವಾದಿ ಲೋಕೇಶ್ ಎಂ.ಜೆ., ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಮತ್ತಿತರರು ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡಿದರು.
ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಪ್ರಮುಖರಾದ ಧನಂಜಯ ಕೊಡಂಗೆ ಹಾಗೂ ಅಶೋಕ್ ವೇದಿಕೆಯ ಬಗ್ಗೆ ವಿವರಿಸಿದರು. ಪ್ರಗತಿಪರ ಕೃಷಿಕ ಕೃಷ್ಣ ಭಟ್ ಸಭೆಯನ್ನು ಉದ್ಘಾಟಿಸಿದರು. ರಮಾನಂದ ಎಣ್ಣೆಮಜಲು ಸ್ವಾಗತಿಸಿದರು. ವಿನಯ ಬಳಕ್ಕ, ದಾಮೋದರ ಗುಂಡ್ಯ, ಅಕ್ಷತಾ ಕೋಡಿಂಬಾಳ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಕಡಬ ತಹಸೀಲ್ದಾರ್ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕಂದಾಯ ಅಧಿಕಾರಿಗಳು ಲಕ್ಷ ಲಕ್ಷ ಲಂಚ ಪಡೆದು ರೈತರ ಭೂಮಿಗೆ ಹಕ್ಕುಪತ್ರ ನೀಡುತ್ತಾರೆ. ದ.ಕ ಜಿಲ್ಲೆಯ ಬಹುತೇಕ ಕಂದಾಯ ಅಧಿಕಾರಿಗಳು ದುಡ್ಡು ಮಾಡಿ ಬೇನಾಮಿ ಹೆಸರಲ್ಲಿ ರೆಸಾರ್ಟ್ ನಿರ್ಮಾಣ ಮಾಡಿಕೊಂಡಿದ್ದಾರೆ. ಈಗ ಅರಣ್ಯ ಹಾಗೂ ಕಂದಾಯ ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸಲು ಷಡ್ಯಂತರ ಮಾಡುತ್ತಿದ್ದಾರೆ. ಅಧಿಕಾರಿಗಳು ರೈತರ ತಾಳ್ಮೆಯನ್ನು ಪರೀಕ್ಷಿಸುವುದು ಬೇಡ, ನಮ್ಮ ಭೂಮಿಯನ್ನು ಉಳಿಸಕೊಳ್ಳಲು ನಾವು ಯಾವುದೇ ತ್ಯಾಗಕ್ಕೂ ಸಿದ್ದರಾಗಿದ್ದೇವೆ.
– ಕಿಶೋರ್ ಶಿರಾಡಿ, ಸಂಚಾಲಕರು, ಮಲೆನಾಡು ಜನಹಿತ ರಕ್ಷಣಾ ವೇದಿಕೆ
ಬೇಡಿಕೆಗಳು :
ಪ್ಲಾಂಟಿಂಗ್ ಆಗದ ರೈತರ ಕೃಷಿ ಭೂಮಿಯನ್ನು ತಕ್ಷಣ ಪ್ಲಾಂಟಿಂಗ್ ಮಾಡಿಕೊಡಬೇಕು. ಜಂಟಿ ಸರ್ವೆ ಮಾಡುವಾಗ ಗ್ರಾಮದ ಎಲ್ಲಾ ಸರ್ವೆನಂಬರನ್ನು ಏಕಕಾಲದಲ್ಲಿ ಸರ್ವೆ ನಡೆಸಬೇಕು.
ಕಂದಾಯ ಇಲಾಖೆ ಕೊಟ್ಟಿರುವ ಹಕ್ಕುಪತ್ರವನ್ನು ಅರಣ್ಯ ಇಲಾಖೆಯವರು ರದ್ದು ಪಡಿಸಬಾರದು ಮತ್ತು ಆರ್.ಟಿ.ಸಿ.ಯಲ್ಲಿ ಅರಣ್ಯ ಎಂದು ನಮೂದಿಸಿ ಇರುವುದನ್ನು ತೆಗೆಯಬೇಕು.
ಪಶ್ಚಿಮ ಘಟ್ಟಕ್ಕೂ ಜನವಸತಿ ಪ್ರದೇಶಕ್ಕೂ ಗಡಿ ಗುರುತು ಮಾಡಿ ಕಾಡು ಪ್ರಾಣಿಗಳಿಂದ ಕೃಷಿ ನಾಶವನ್ನು ತಡೆಗಟ್ಟಲು ಆನೆಕಂದಕ ಮತ್ತು ಸೋಲಾರ್ ಬೇಲಿ ನಿರ್ಮಾಣ ಮಾಡಬೇಕು.
ಕಾಡು ಪ್ರಾಣಿಗಳಿಂದ ರೈತರ ರಕ್ಷಣೆಗೆ ಮತ್ತು ಕೃಷಿ ನಾಶವನ್ನು ತಡೆಯಲು ಹಿಂದೆ ನೀಡುತ್ತಿದ್ದಂತೆ ಕೋವಿ ಪರವಾನಿಗೆ ನೀಡಬೇಕು.
ಪರಿಸರ ಸಂರಕ್ಷಣೆ ನೆಪದಲ್ಲಿ ಬರುವ ಕಾನೂನನ್ನು ಯೋಜನೆ ಮಾಡುವಾಗ ಸ್ಥಳೀಯ ಸಂಬಂಧಪಟ್ಟ ಶಾಸಕರು, ಪಂಚಾಯತ್ ಮಟ್ಟದ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು.






