ದೇವರ ಮೇಲೆ ಭಕ್ತಿ, ಶ್ರದ್ಧೆ ಬೇಕು. ಮೂಡನಂಬಿಕೆ ಇರಬಾರದು- ಸತ್ಯಪ್ರಿಯ ಕಲ್ಲೂರಾಯ



ನೆಲ್ಯಾಡಿ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ-ಕೌಕ್ರಾಡಿ ಇಲ್ಲಿ 48ನೇ ವರ್ಷದ ಮಕರಜ್ಯೋತಿ ಉತ್ಸವ ಹಾಗೂ ಭಜನಾ ಮಹೋತ್ಸವದ ಸಮಾರೋಪ ಸಮಾರಂಭ ಜ.14ರಂದು ಪ್ರಾತ:ಕಾಲ ಆರಂಭಗೊಂಡು ಜ.15ರಂದು ಪ್ರಾತ:ಕಾಲದ ಶ್ರದ್ಧಾಭಕ್ತಿಯಿಂದ ನಡೆಯಿತು.

ಜ.14ರಂದು ಬೆಳಿಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ನೂಜಿನ್ನಾಯ ಅವರ ಪೌರೋಹಿತ್ಯದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ಉಷಾಪೂಜೆ, ಬಳಿಕ ಮಕರ ಸಂಕ್ರಾಂತಿ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು, ಶ್ರೀ ಮಹಾಗಣಪತಿ ಹೋಮ, ಸೀಯಾಳಾಭಿಷೇಕ, ತುಪ್ಪಾಭಿಷೇಕ, ಅಶ್ವತ್ಥಕಟ್ಟೆಯಲ್ಲಿ ಅಶ್ವತ್ಥಪೂಜೆ ಆರಂಭವಾಗಲಿದೆ. ಮಹಾರಂಗಪೂಜೆ ಹಾಗೂ ಮಹಾಪೂಜೆಯ ನಂತರ ಪ್ರಸಾದ ವಿತರಣೆ, ಭಕ್ತರಿಗೆ ಮಹಾ ಅನ್ನಸಂತರ್ಪಣೆ ಏರ್ಪಡಿಸಲಾಯಿತು.ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಮಂಗಳೂರು–ನೆಲ್ಯಾಡಿ ಉಕ್ಷಿಪ್ತ ನೃತ್ಯ ಕಲಾ ಶಾಲೆಯ ವಿದುಷಿ ಸುರೇಖ ಹರೀಶ್ ಅವರ ಶಿಷ್ಯವೃಂದದವರಿಂದ ‘ನೃತ್ಯ ಸಿಂಚನ – ಭರತ ವೈಭವ’ ಕಾರ್ಯಕ್ರಮ ನಡೆಯಿತು. ಸಂಜೆ 6ಕ್ಕೆ ನೀಲಾಂಜನ ದೀಪದರ್ಶನ ಮೆರವಣಿಗೆ, ದೀಪಾರಾದನೆ ಹಾಗೂ ಪುಷ್ಪಾಭಿಷೇಕ. ರಾತ್ರಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಮುಲ್ಕಿ ಇವರಿಂದ “ಬನತ ಬೆಮೈರ್” ತುಳು ಯಕ್ಷಗಾನ ಬಯಲಾಟ ನಂತರ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು.ಜ.15ರಂದು ಬೆಳಿಗ್ಗೆ ಭಜನಾ ಮಂಗಳೋತ್ಸವ ನಡೆಯಿತು.

ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಸೌತಡ್ಕ ಕ್ಷೇತ್ರದ ಪ್ರಧಾನ ಅರ್ಚಕ ಸತ್ಯಪ್ರಿಯ ಕಲ್ಲೂರಾಯ ಧಾರ್ಮಿಕ ಉಪನ್ಯಾಸ ನೀಡಿ, ದೇವರ ಆರಾಧನೆಯಲ್ಲಿ ಭಕ್ತಿ, ಶ್ರದ್ಧೆ ಮತ್ತು ಪ್ರೀತಿ ಅಗತ್ಯವೆಂದು ಹೇಳಿದರು. ದೇವರ ಭಯವೇ ಜ್ಞಾನದ ಆರಂಭ. ಆದರೆ ಇತ್ತೀಚಿನ ದಿನಗಳಲ್ಲಿ ಭಕ್ತಿ ಕೇವಲ ಶೋಕಿಗೆ ಸೀಮಿತವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ದೇವಸ್ಥಾನಕ್ಕೆ ಬರುವಲ್ಲಿ ಶಿಸ್ತಿನ ಪಾಲನೆ ಅಗತ್ಯ, ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ದೇವರ ಮೇಲೆ ಭಕ್ತಿ–ಶ್ರದ್ಧೆ ಇರಲಿ, ಆದರೆ ಮೂಡನಂಬಿಕೆ ಇರಬಾರದು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರವಿಚಂದ್ರ ಹೊಸವಕ್ಲು ಸ್ವಾಗತಿಸಿದರು.
ನೆಲ್ಯಾಡಿ ಹೆಚ್.ಪಿ.ಅಶ್ವಿನಿ ಫ್ಯುಯೆಲ್ ಸ್ಟೇಷನ್ ಮಾಲಕ ಪ್ರಕಾಶ್ ಬಿ, ದೇವಸ್ಥಾನದ ಆಡಳಿತ ಸಮಿತಿ ಉಪಾಧ್ಯಕ್ಷ ರಘುನಾಥ, ಜೊತೆ ಕಾರ್ಯದರ್ಶಿ ರಮೇಶ್ ಬಾಣಜಾಲು, ಭಜನಾ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಕೆ.ನಿಡ್ಡೊಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಫೆ.1ರಂದು ನೆಲ್ಯಾಡಿಯಲ್ಲಿ ನಡೆಯುವ ಹಿಂದೂಸಂಗಮದ ಕರಪತ್ರ ಬಿಡುಗಡೆಗೊಳಿಸಲಾಯಿತು. ಸೌತಡ್ಕ ಕ್ಷೇತ್ರದ ಪ್ರಧಾನ ಅರ್ಚಕ ಸತ್ಯಪ್ರಿಯ ಕಲ್ಲೂರಾಯ ಅವರನ್ನು ಸನ್ಮಾನಿಸಲಾಯಿತು. ದೇವಸ್ಥಾನದ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ಟಿ.ಕೆ.ಶಿವದಾಸನ್, ಡಾ.ಸದಾನಂದ ಕುಂದರ್ ಅವರಿಗೆ ಶಾಲು ಹಾಕಿ ಗೌರವಿಸಲಾಯಿತು.
ಆಡಳಿತ ಸಮಿತಿ ಸದಸ್ಯರಾದ ಚಂದ್ರಶೇಖರ ಬಾಣಜಾಲು, ರವಿಪ್ರಸಾದ್ ಶೆಟ್ಟಿ, ಮೋಹನ ಕಟ್ಟೆಮಜಲು, ವಿನೋದ್ಕುಮಾರ್ ಬಾಕಿಜಾಲು, ಉಮೇಶಪೂಜಾರಿ ಪೊಸೊಳಿಗೆ, ರಕ್ಷಿತ್ ಎಮ್., ದಯಾನಂದ ಕೆ.ಆದರ್ಶ, ನಾರಾಯಣ ಶೆಟ್ಟಿ ಪಟ್ಟೆಜಾಲು, ಶೇಖರ ಭಂಡಾರಿ, ಪ್ರಹ್ಲಾದ್ ಶೆಟ್ಟಿ ಕೊಲ್ಯೊಟ್ಟು, ಅಣ್ಣಿ ಎಲ್ತಿಮಾರ್, ಭಜನಾ ಸಮಿತಿ ಕಾರ್ಯದರ್ಶಿ ಜನಾರ್ದನ ಹೆಗ್ಡೆ ಪಟ್ಟೆಜಾಲು, ಉಪಾಧ್ಯಕ್ಷ ರಮೇಶ್ ಶೆಟ್ಟಿ ಪರಂತಮೂಲೆ, ವಿಶಾಲಾಕ್ಷಿ ನಾರಾಯಣ ಆಚಾರ್ಯ ಮತ್ತಿತರರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಅಶೋಕ ಆಚಾರ್ಯ ಜಾಲ್ಮನೆ ಪ್ರಾರ್ಥಿಸಿದರು. ಕಾರ್ಯದರ್ಶಿ ರಾಕೇಶ್ ಕುಮಾರ್ ವಂದಿಸಿದರು. ಕೋಶಾಧಿಕಾರಿ ಸುಧೀರ್ ಕುಮಾರ್ ನಿರೂಪಿಸಿದರು.






