



ನೆಲ್ಯಾಡಿ: ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ಉದಲಾರು ಎಂಬಲ್ಲಿ ಜ.31ರಂದು ಮುಂಜಾನೆ ಎರಡು ಕಾಡಾನೆಗಳು ತೋಟಕ್ಕೆ ನುಗ್ಗಿ ಕೃಷಿ ಹಾನಿಗೊಳಿಸಿರುವ ಘಟನೆ ನಡೆದಿದೆ.
ಉದಲಾರು ನಿವಾಸಿಗಳಾದ ನವೀನ್ ಕುಮಾರ್ ಹಾಗೂ ವಸಂತ ಎಂಬವರ ತೋಟಕ್ಕೆ ಬೆಳಿಗ್ಗೆ ಕಾಡಾನೆಗಳು ನುಗ್ಗಿ ಅಡಿಕೆ ಹಾಗೂ ಬಾಳೆಗಿಡಗಳನ್ನು ನಾಶಗೊಳಿಸಿವೆ. ಇದರ ಅರಿವಿಗೆ ಬರುತ್ತಿದ್ದಂತೆ ಮನೆಯವರು ಗರ್ನಲ್ ಸಿಡಿಸಿ ಆನೆಗಳು ಮತ್ತೆ ಕಾಡಿನ ಕಡೆಗೆ ಹೊಗುವಂತೆ ಮಾಡಿದ್ದಾರೆ. ಆನೆಗಳು ಅಡಿಕೆ, ಬಾಳೆಗಿಡಗಳ, ಸ್ಪಿಂಕ್ಲರ್ ಪೈಪ್ಗಳನ್ನು ಹಾನಿಗೊಳಿಸಿವೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಇವರ ತೋಟಕ್ಕೆ ನಾಲ್ಕೈದು ಸಲ ಕಾಡಾನೆಗಳು ದಾಳಿ ನಡೆಸಿ ಕೃಷಿ ಹಾನಿಗೊಳಿಸಿವೆ ಎಂದು ವರದಿಯಾಗಿದೆ.





