



ನೆಲ್ಯಾಡಿ: ನೆಲ್ಯಾಡಿ ಜ್ಞಾನೋದಯ ಬೆಥನಿ ಪಿಯು ಕಾಲೇಜಿನ ಸಿಲ್ವರ್ ಜುಬಿಲಿ ಮೆಮೋರಿಯಲ್ ಹಾಲ್ನಲ್ಲಿ ಮಂಗಳವಾರ ದಂದು ಯುಕೆಜಿ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ನಡೆಯಿತು

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್ ಧರ್ಮಗುರು ರೆ.ಫಾ. ಶಾಜಿ ಮ್ಯಾಥ್ಯೂ ಅವರು ಎಲ್ಕೆಜಿ–ಯುಕೆಜಿ ಹಂತವು ಮಕ್ಕಳ ವಿದ್ಯಾಭ್ಯಾಸದ ಬುನಾದಿ. ಈ ಹಂತದಲ್ಲಿ ಪೋಷಕರೂ ಶಿಕ್ಷಕರೂ ಮಕ್ಕಳಿಗೆ ತಾಳ್ಮೆ, ಪ್ರೋತ್ಸಾಹ ಮತ್ತು ಪ್ರೀತಿ ನೀಡಬೇಕು. ಪಾಠವನ್ನು ಆಟದೊಂದಿಗೆ, ಕಥೆಗಳ ಮೂಲಕ ಕಲಿಸಿದರೆ ಮಕ್ಕಳು ಸುಲಭವಾಗಿ ಗ್ರಹಿಸುತ್ತಾರೆ. ಮಕ್ಕಳು ಕೇಳುವ ಪ್ರತಿಯೊಂದು ಪ್ರಶ್ನೆಗೆ ಸಹನಶೀಲ ಹಾಗೂ ಸಮಾಧಾನಕರ ಉತ್ತರ ನೀಡಿದರೆ, ಅವರ ಭವಿಷ್ಯದ ಗತಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸಂಚಾಲಕ ಹಾಗೂ ಕಾಲೇಜಿನ ಪ್ರಿನ್ಸಿಪಾಲ್ ರೆ.ಫಾ.ಡಾ.ವರ್ಗೀಸ್ ಕೈಪನಡ್ಕ ಮಾತನಾಡಿ ಶಿ“ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅತ್ಯವಶ್ಯ. ಮಕ್ಕಳಲ್ಲಿ ಶಿಸ್ತು, ಪರಿಶ್ರಮ, ಸಮಯಪಾಲನೆ ಮತ್ತು ಸೇವಾಭಾವ ಬೆಳೆಸಿದಾಗ ಮಾತ್ರ ಅವರು ಉತ್ತಮ ಮಾನವರಾಗಬಹುದು. ಪೋಷಕರು ಮತ್ತು ಶಿಕ್ಷಕರು ಒಂದೇ ಸಮಾನವಾಗಿ ಹೊಣೆಗಾರಿಕೆ ತೆಗೆದುಕೊಂಡಾಗ ಮಾತ್ರ ಮಕ್ಕಳ ಭವಿಷ್ಯ ಯಶಸ್ಸು ಸಾಧ್ಯವೆಂದು ತಿಳಿಸಿ, ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು.
ವೇದಿಕೆಯಲ್ಲಿ ಕೋಶಾಧಿಕಾರಿ ಫಾ.ಸ್ಯಾಮುವೆಲ್, ರೆ.ಫಾ.ಜೇಮ್ಸ್ ಥಾಮಸ್, ವೈಸ್ ಪ್ರಿನ್ಸಿಪಾಲ್ ಜೋಸ್ ಎಂ.ಜೆ, ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಜಾರ್ಜ್ ಕೆ. ಥಾಮಸ್, ಶಿಕ್ಷಕರ- ರಕ್ಷಕ ಸಂಘದ ಅಧ್ಯಕ್ಷ ಸನ್ನಿ ಕೆ.ಎಸ್. ಸದಸ್ಯೆ ಪ್ರೆಸ್ಸಿ, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಜೋಸ್ ಪ್ರಕಾಶ್, ಪಿಯುಸಿ ವಿಭಾಗದ ಮುಖ್ಯಸ್ಥ ಸುಶೀಲ್ ಕುಮಾರ್, ಕೆಜಿ ವಿಭಾಗದ ಮುಖ್ಯಶಿಕ್ಷಕಿ ಗೆಸ್ಸಿ ಉಪಸ್ಥಿತರಿದ್ದರು.
ಯುಕೆಜಿಯ ವಿದ್ಯಾರ್ಥಿಗಳಿಗೆ ಅತಿಥಿಗಳು ಪದವಿ ಪ್ರಧಾನ ಮಾಡಿ ಪ್ರಶಸ್ತಿ ಪತ್ರ ನೀಡಿದರು. ಬಳಿಕ ವಿದ್ಯಾರ್ಥಿಗಳಿಂದ ಹಾಗೂ ಪೋಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.





