





ಕೊಕ್ಕಡ: ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯ ದತ್ತಿ ಇಲಾಖೆಗೆ ಸೇರಿದ ಕೊಕ್ಕಡ ಧನ್ವಂತರಿ ಕ್ಷೇತ್ರ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಗುರುವಾರದಂದು ಶ್ರೀ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೇವಾಲಯದ ಜೀರ್ಣೋದ್ಧಾರದ ಅಂಗವಾಗಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ರುದ್ರಯಾಗ ವೈಭವದಿಂದ ನಡೆಯಿತು.

ಎಡಮನೆ ಪದ್ಮನಾಭ ತಂತ್ರಿ ಅವರ ಯಾಜಕತ್ವದಲ್ಲಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ರಮಾನಂದ ಭಟ್ ಅವರ ಉಪಸ್ಥಿತಿಯಲ್ಲಿ ಗಣಹೋಮ, ಕಲಶಾಭಿಷೇಕ ಸೇರಿದಂತೆ ಹಲವು ಪೂಜಾ ವಿಧಿಗಳು ನೆರವೇರಿದವು. ದೇವಳದ ಜೀರ್ಣೋದ್ಧಾರದ ಅಂಗವಾಗಿ ವೇದಮೂರ್ತಿ ಬಾಲಕೃಷ್ಣ ಪುರಾಣಿಕ್ ಹಾಗೂ ತಂಡದವರ ನೇತೃತ್ವದಲ್ಲಿ ಬೆಳಗ್ಗೆ 7:30ರಿಂದ ಆರಂಭವಾದ ರುದ್ರಯಾಗವು ಮಧ್ಯಾಹ್ನ 11:30ಕ್ಕೆ ಪೂರ್ಣಾಹುತಿಯೊಂದಿಗೆ ಸಮಾಪ್ತಿಗೊಂಡಿತು.

ಇದಾದ ಬಳಿಕ ದೇವಸ್ಥಾನದ ಪವಿತ್ರಪಾಣಿ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಂ.ರಾಧಾಕೃಷ್ಣ ಎಡಪಡಿತ್ತಾಯ ಅವರ ಅಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಕುರಿತ ಸಭೆ ನಡೆಯಿತು. ಸಭೆಯಲ್ಲಿ ಒಮ್ಮತದ ತೀರ್ಮಾನದಂತೆ, ಜೀರ್ಣೋದ್ಧಾರ ಕಾರ್ಯಗಳನ್ನು ವೇಗಗೊಳಿಸುವ ಉದ್ದೇಶದಿಂದ 40 ಜನ ಭಕ್ತರನ್ನು ಒಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು, ಜೊತೆಗೆ ಸಲಹಾ ಸಮಿತಿಯನ್ನೂ ರೂಪಿಸಲಾಯಿತು. ಕಾರ್ಯಕಾರಿ ಸಮಿತಿಗೆ ಜಯರಾಮ ನೆಲ್ಲಿತ್ತಾಯ ಶಿಶಿಲ, ಅರವಿಂದ ಕುಡ್ವ, ಡಾ. ಮೋಹನ್ ದಾಸ್ ಗೌಡ, ನಾರಾಯಣ ಹೆಬ್ಬಾರ್ ಪುತ್ಯೆ, ರಾಮಚಂದ್ರ ಭಟ್ ಮುಂಡೂರು, ಮಂಜುನಾಥ ಗೌಡ ಕೈಕುರೆ, ರವಿ ಪ್ರಸಾದ್ ಶೆಟ್ಟಿ ಬಲ್ಯ, ಪುರಂದ ರಾವ್ ಊರ್ತಾಜೆ, ಗಣೇಶ್ ಅರಸಿನಮಕ್ಕಿ, ವೃಷಾಂಕ್ ಖಾಡಿಲ್ಕರ್, ಜಿನ್ನಪ್ಪ ಗೌಡ ನಿಡ್ಲೆ, ಜಯಪ್ರಸಾದ್ ಅರಿಕೆಗುಡ್ಡೆ, ಜಾರಪ್ಪ ಗೌಡ ಸಂಕೇಶ, ಬಾಲಕೃಷ್ಣ ಗೌಡ ನೆಲ್ಯಾಡಿ, ಡಾ.ಗಣೇಶ್ ಪ್ರಸಾದ್ ಅಂಬಿಕಾ ಕ್ಲಿನಿಕ್, ಸೇಸಪ್ಪ ಗೌಡ ತೆಂಕುಬೈಲು, ಕೊರಗಪ್ಪ ಶೆಟ್ಟಿ ಪಟ್ಟೂರು ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಬಾಲಕೃಷ್ಣ ಕೆದಿಲಾಯ, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು.





