





ನೆಲ್ಯಾಡಿ: ನೆಲ್ಯಾಡಿಯ ಪ್ರಸಿದ್ಧ ಧಾರ್ಮಿಕ ಶ್ರದ್ದಾ ಕೇಂದ್ರವಾದ ಸೆಂಟ್ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗಾಗಿ ಮೂರು ದಿನಗಳ ಬೇಸಿಗೆ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಬೆಳ್ತಂಗಡಿ ಧರ್ಮಪ್ರಾಂತ್ಯದ ಮೇಜರ್ ಸೆಮಿನಾರಿಯನ್ಸ್ ಈ ಶಿಬಿರಕ್ಕೆ ನೇತೃತ್ವ ನೀಡಿದರು.
ಶಿಬಿರದ ಅವಧಿಯಲ್ಲಿ ಮಕ್ಕಳಿಗೆ ವೈವಿಧ್ಯಮಯ ಚಟುವಟಿಕೆಗಳ ಮೂಲಕ ಸಾಮಾಜಿಕ ಬದ್ಧತೆ, ಆಧ್ಯಾತ್ಮಿಕ ಚಿಂತನೆ, ವ್ಯಕ್ತಿತ್ವ ವಿಕಾಸ ಮತ್ತು ಉತ್ತಮ ಹವ್ಯಾಸಗಳ ರೂಢಿ ಕುರಿತು ಸಮಗ್ರ ತರಬೇತಿ ನೀಡಲಾಯಿತು. ಪ್ರಾರ್ಥನೆ, ಗುಂಪು ಚರ್ಚೆ, ಕ್ರೀಡೆ, ಸಂಗೀತ, ನೃತ್ಯ ಮತ್ತು ಮೌಲ್ಯಾಧಾರಿತ ತರಗತಿಗಳು ಮಕ್ಕಳನ್ನು ಆಕರ್ಷಿಸಿದವು.
ಕಾರ್ಯಕ್ರಮವನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಮೈನರ್ ಸೆಮಿನಾರಿ ರೆಕ್ಟರ್ ಫಾ. ರೋಬಿನ್ ಕೇಳಪರಂಭಿಲ್ ಉದ್ಘಾಟಿಸಿದರು. ಫಾ.ಜಿನ್ಸ್ ಕೋಲಕುನ್ನೆಲ್, ಫಾ.ಜಿನ್ಸ್ ವಲಿಯಪರಂಭಿಲ್, ಆಪ್ತ ಸಮಾಲೋಚನೆಗಾರ್ತಿ ಸಿಸ್ಟರ್ ಆಲ್ಫಿ ಎಸ್.ಎಚ್., ಶಾಲಾ ಮುಖ್ಯೋಪಾಧ್ಯಾಯರಾದ ರೊಯ್ ಕೊಳೋಗರಾತ್, ಸಿ.ಎಂ.ಎಲ್. ಮುಖ್ಯಸ್ಥ ಅಲೆನ್ ನೀರಪ್ಪೆಲ್ ಹಾಗೂ ಬ್ರದರ್ ಬಿನೋಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುಣ್ಯ ಕ್ಷೇತ್ರದ ವಂ.ಫಾ.ಶಾಜಿ ಮಾತ್ಯು ಪ್ರಾಸ್ತಾವಿಕವಾಗಿ ಮಾತನಾಡಿ, “ರಜೆಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಮತ್ತು ವ್ಯಕ್ತಿತ್ವದ ವೈವಿಧ್ಯತೆಯನ್ನು ಅರಿಯುವ ಸುವರ್ಣಾವಕಾಶವಾಗಬೇಕು” ಎಂದು ಹೇಳಿದರು.




