






ನೆಲ್ಯಾಡಿ: ಗೋಳಿತಟ್ಟು ಗ್ರಾಮದ ಬೊಟ್ಟಿಮಜಲು ನಿವಾಸಿ ಹಾಗೂ ಶ್ರೀ ಶಿರಾಡಿ ಗುಡ್ಡೆಯ ಶಿರಾಡಿ ದೈವದ ಚಾಕರಿ ಮಾಡುತ್ತಿದ್ದ ದುಗ್ಗಪ್ಪ ಮೊಗೇರ ಅವರು ಇತ್ತೀಚೆಗೆ ಹೃದಯಾಘಾತದಿಂದ ನಿಧನ ಹೊಂದಿದ್ದು, ದೈವದ ಸೇವೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮೃತ ದುಗ್ಗಪ್ಪ ಮೊಗೇರ ಅವರು ಪತ್ನಿ ಸುಮಿತ್ರ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ತೀರಾ ಬಡತನದಲ್ಲಿರುವ ಕುಟುಂಬದ ಪರಿಸ್ಥಿತಿಯನ್ನು ಮನಗಂಡ ಪೆರಣಬೈಲು ಭಾಗದ ಗ್ರಾಮಸ್ಥರು ಮಾನವೀಯತೆ ಮೆರೆದು ಒಟ್ಟಾಗಿ ಸೇರಿ ಮೃತರ ಮನೆಯ ಖರ್ಚು ವೆಚ್ಚಗಳಿಗೆ ನೆರವಾಗುವ ಉದ್ದೇಶದಿಂದ ಸುಮಾರು ರೂ.12,000 ಧನಸಹಾಯ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ವಿಶ್ವನಾಥ ಗೌಡ ಪೆರಣಗುತ್ತು, ಎ.ಎಸ್. ಶೇಖರ ಗೌಡ ಅನಿಲಭಾಗ್, ಕುಶಾಲಪ್ಪ ಗೌಡ ಅನಿಲ, ರಾಜೇಶ ಕಲ್ಲಡ್ಕ, ತಿಮ್ಮಪ್ಪ ಕೋಡಿಯಾಡ್ಕ, ಶಿವಣ್ಣ ಬನತಕೋಡಿ, ಜಾನಪ್ಪ ಬೊಟ್ಟಿಮಜಲು, ರಮೇಶ ಕಲ್ಲಡ್ಕ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದು ಕುಟುಂಬಕ್ಕೆ ಸಾಂತ್ವನ ಹೇಳಿದರು.


