


ಶಿಶಿಲ: ಮಳೆ, ಗಾಳಿಗೆ ಮನೆಮೇಲೆ ಬಿದ್ದು ಅಪಾಯ ಸೃಷ್ಟಿಸಿದ್ದ ಮರವನ್ನು ಶೌರ್ಯ ತಂಡದ ಸ್ವಯಂಸೇವಕರು ತೆರವುಗೊಳಿಸಿದ ಘಟನೆ ಶಿಶಿಲ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಶಿಶಿಲ ಗ್ರಾಮದ ಕಿನ್ಯಡ್ಕ ನಿವಾಸಿ ಜಗದೀಶ ಎಂಬವರ ಮನೆಯ ಹಿಂಭಾಗಕ್ಕೆ ಮುಂಜಾನೆ ಮರ ಬಿದ್ದು ಯಾವುದೇ ಕ್ಷಣದಲ್ಲಾದರೂ ಮನೆಗೆ ಭಾರಿ ಹಾನಿಯಾಗಬಹುದಾದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಶೌರ್ಯ ಸ್ವಯಂಸೇವಕರಾದ ಅವಿನಾಶ್ ಭಿಡೆ, ಕಿರಣ್ ಸಂಕೇಶ ಮತ್ತು ರಮೇಶ ಬೈರಕಟ್ಟ ಕೂಡಲೇ ಸ್ಥಳಕ್ಕೆ ಧಾವಿಸಿದರು. ಶಿಶಿಲ ಗ್ರಾ.ಪಂ.ಗೆ ತಕ್ಷಣ ಮಾಹಿತಿ ನೀಡಿದ ಈ ತಂಡ, ಪಂಚಾಯತ್ ಅಧ್ಯಕ್ಷರ ಜೊತೆಗಾರಿಕೆಯಲ್ಲಿ ಮತ್ತು ಅಭಿವೃದ್ದಿ ಅಧಿಕಾರಿ ನೇತೃತ್ವದಲ್ಲಿ ಮರವನ್ನು ಸುರಕ್ಷಿತವಾಗಿ ಕಡಿದು ತೆಗೆದರು.









