


ನೆಲ್ಯಾಡಿ: ಪ್ರಕೃತಿಯನ್ನು ಸಂರಕ್ಷಿಸುವ ಆಶಯದಿಂದ, ನೆಲ್ಯಾಡಿ ಬಾಲಯೇಸು ದೇವಾಲಯದಲ್ಲಿ ಭಾನುವಾರ ದಂದು ವನಮಹೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಚರ್ಚ್ನ ಧರ್ಮಗುರು ವಂ.ಫಾ.ಗ್ರೇಶನ್ ಅಲ್ವಾರೀಸ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವನಮಹೋತ್ಸವದ ಸಂದೇಶ ನೀಡಿದರು. ಅವರ ನೇತೃತ್ವದಲ್ಲಿ ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಿದ್ಯಾರ್ಥಿನಿ ಕುಮಾರಿ ಮೆಲಿಷಾ ಮಸ್ಕಾರೆನ್ಹಸ್ ವನಮಹೋತ್ಸವದ ಮಹತ್ವದ ಬಗ್ಗೆ ತಮ್ಮ ಅನಿಸಿಕೆಗಳನ್ನು ಪ್ರಕಟಿಸಿದರು. ವೇದಿಕೆಯಲ್ಲಿ ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ತೋಮಸ್ ಡಿಸೋಜಾ, ಕಾರ್ಯದರ್ಶಿ ನಿಶ್ಮಿತಾ ಡಿ’ಸೋಜಾ, ಸುಪೀರಿಯರ್ ಸಿಸ್ಟರ್ ಜೆಸ್ಸಿ ಜೋಸೆಫ್, ಆಯೋಗದ ಸಂಚಾಲಕಿ ಜೇಸಿಂತಾ ಡಿಸೋಜಾ, ಪರಿಸರ ಆಯೋಗದ ಸಂಚಾಲಕ ಫ್ರಾನ್ಸಿಸ್ ಡಿಸೋಜಾ, ಐಸಿವೈಎಂ ಅಧ್ಯಕ್ಷ ಜೋನ್ಸಿ ಡಿಸೋಜಾ, ಕಥೋಲಿಕ್ ಸಭಾ ಅಧ್ಯಕ್ಷ ಸುಜನ್ ಡಿಸೋಜಾ ಹಾಗೂ ಸ್ತ್ರೀ ಸಂಘಟನೆ ಅಧ್ಯಕ್ಷೆ ಕ್ರಿಸ್ತಿನ್ ಡಿಸೋಜಾ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮದ ನಂತರ ಚರ್ಚ್ ಆವರಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಗಿಡ ನೆಡೆಸಲಾಯಿತು. ಸುಜನ್ ಡಿಸೋಜಾ ಸ್ವಾಗತಿಸಿದರು, ಹರ್ಷಿತಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು, ಶಾಂತಿ ಡಿಸೋಜಾ ವಂದಿಸಿದರು.









