

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ) ಕಡಬ ತಾಲೂಕು ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಕೊಣಾಲು ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಮೂರು ತಿಂಗಳ ಉಚಿತ ಟ್ಯೂಷನ್ ಕ್ಲಾಸ್ಗೆ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಜ್ಞಾನವಿಕಾಸ ಕಾರ್ಯಕ್ರಮದ ಉದ್ದೇಶಗಳು ಹಾಗೂ ಉಚಿತ ಟ್ಯೂಷನ್ ಕ್ಲಾಸ್ ಮೂಲಕ ವಿದ್ಯಾರ್ಥಿಗಳು ಪಡೆಯಬಲ್ಲ ಶೈಕ್ಷಣಿಕ ಪ್ರಯೋಜನಗಳ ಕುರಿತು ಮಾರ್ಗದರ್ಶನ ನೀಡಿದರು.
ಶಾಲೆಯ ಮುಖ್ಯಶಿಕ್ಷಕ ಶಶಿಧರ್ ಅವರು ಯೋಜನೆಯ ಆಶಯವನ್ನು ಬಳಸಿಕೊಂಡು ವಿದ್ಯಾಭ್ಯಾಸದಲ್ಲಿ ಮುನ್ನಡೆ ಸಾಧಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು ಮತ್ತು ಧರ್ಮಸ್ಥಳ ಯೋಜನೆಗೆ ಕೃತಜ್ಞತೆ ತಿಳಿಸಿದರು.
ಕಾರ್ಯಕ್ರಮಕ್ಕೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಮಲಾಕ್ಷ ಪಂಡಿತ್ ಅವರು ಅಧ್ಯಕ್ಷತೆ ವಹಿಸಿದರು. ಒಕ್ಕೂಟದ ಅಧ್ಯಕ್ಷ ಲಿತಿನ್ ಕುಮಾರ್, ತರಬೇತಿ ನೀಡುವ ಶಿಕ್ಷಕಿ ಸಂಧ್ಯಾ, ಶಾಲಾಶಿಕ್ಷಕ ವೃಂದ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಚೇತನ ಜಿ ಹಾಗೂ ಕೊಣಾಲು ಸೇವಾ ಪ್ರತಿನಿಧಿ ಪ್ರತಿಮಾ ಉಪಸ್ಥಿತರಿದ್ದರು.
ಕೊಣಾಲು ಸೇವಾ ಪ್ರತಿನಿಧಿ ಪ್ರತಿಮಾ ಸ್ವಾಗತಿಸಿದರು, ಚೇತನ ಜಿ ಕಾರ್ಯಕ್ರಮ ನಿರೂಪಿಸಿದರು. ವಲಯ ಮೇಲ್ವಿಚಾರಕಿ ಜಯಶ್ರೀ ವಂದಿಸಿದರು. ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.






