ರೆಂಜಿಲಾಡಿ: ಸಂತೋಮ್ ವಿದ್ಯಾನಿಕೇತನದಲ್ಲಿ ಮಧ್ಯಾಹ್ನದ ಬಿಸಿ ಊಟ ಆರಂಭ

ಶೇರ್ ಮಾಡಿ

ರೆಂಜಿಲಾಡಿ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ಸಂತೋಮ್ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆ, ರೆಂಜಿಲಾಡಿಯಲ್ಲಿ ಮಧ್ಯಾಹ್ನದ ಬಿಸಿ ಊಟ ಕಾರ್ಯಕ್ರಮವನ್ನು ಸೋಮವಾರದಿಂದ ಅಧಿಕೃತವಾಗಿ ಆರಂಭಿಸಲಾಯಿತು.

ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ರೆ.ಫಾ.ಪೌಲ್ ಜೇಕಬ್ ಅವರು ಪ್ರಾರ್ಥನೆ ನೆರವೇರಿಸಿ ಬಿಸಿ ಊಟ ಯೋಜನೆಗೆ ಆಶೀರ್ವಾದ ನೀಡಿದರು. ಬಳಿಕ ಶಿಕ್ಷಕ–ರಕ್ಷಕ ಸಂಘದ ಅಧ್ಯಕ್ಷ ಲಕ್ಷ್ಮಣ ಗೌಡ ಸಾಂತ್ಯಡಕ್ಕ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿದಿನ ದೊರೆಯುವ ಪೌಷ್ಟಿಕ ಬಿಸಿ ಊಟವು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿದ್ದು, ಇದರಿಂದ ಪೋಷಕರ ಮೇಲಿನ ಆರ್ಥಿಕ ಹೊರೆ ಕೂಡ ಕಡಿಮೆಯಾಗಲಿದೆ ಎಂದರು.

ಶಾಲಾ ಮುಖ್ಯಶಿಕ್ಷಕ ಅರುಳ್ ಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಆಂಗ್ಲ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂತೋಮ್ ವಿದ್ಯಾನಿಕೇತನವು ಈಗ ಬಿಸಿ ಊಟ ಕಾರ್ಯಕ್ರಮವನ್ನು ಆರಂಭಿಸಿರುವುದು ಶ್ಲಾಘನೀಯ ಕ್ರಮವಾಗಿದ್ದು, ಇದರ ಮೂಲಕ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ ಎಂದು ಶುಭ ಹಾರೈಸಿದರು.

ಆಡಳಿತಾಧಿಕಾರಿ ಮ್ಯಾಥ್ಯೂ ಟಿ.ಜಿ. ಅವರು ಮಾತನಾಡಿ, ಈ ಬಿಸಿ ಊಟ ಯೋಜನೆಗೆ ದಾನಿಗಳ ಸಹಕಾರಕ್ಕೆ ಅವಕಾಶವಿದ್ದು, ಆಸಕ್ತರು ಒಂದು ಹೊತ್ತಿನ ಊಟವನ್ನು ವಿದ್ಯಾರ್ಥಿಗಳಿಗೆ ನೀಡಿ ಸಹಕರಿಸಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ–ರಕ್ಷಕ ಸಂಘದ ಸದಸ್ಯರು, ಶಾಲಾ ಸಿಬ್ಬಂದಿ ವರ್ಗ ಹಾಗೂ ಪೋಷಕ ವೃಂದದವರು ಉಪಸ್ಥಿತರಿದ್ದು ಬಿಸಿ ಊಟ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

  •  

Leave a Reply

error: Content is protected !!