ನೆಲ್ಯಾಡಿ: ಒಂದು ತಿಂಗಳಿಂದ ಅನಾಥವಾಗಿ ನಿಂತಿರುವ ಸ್ಕೂಟರ್: ಮಾಲೀಕ ನಾಪತ್ತೆ, ಸಾರ್ವಜನಿಕರಲ್ಲಿ ಕುತೂಹಲ

ಶೇರ್ ಮಾಡಿ

 

ನೆಲ್ಯಾಡಿ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಪೇಟೆಯಲ್ಲಿರುವ ದುರ್ಗಾಶ್ರೀ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಕಳೆದ ಒಂದು ತಿಂಗಳಿಗೂ ಅಧಿಕ ಅವಧಿಯಿಂದ ಅನಾಥವಾಗಿ ನಿಂತಿರುವ ಆಕ್ಟೀವಾ ಸ್ಕೂಟರ್ ಇದೀಗ ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.

ಕೆಎ-21-ಇಸಿ-5607 ನೋಂದಣಿ ಸಂಖ್ಯೆಯ ಈ ದ್ವಿಚಕ್ರ ವಾಹನ ಕಳೆದ ಒಂದು ತಿಂಗಳಿನಿಂದ ಅದೇ ಸ್ಥಳದಲ್ಲಿ ನಿಂತಿದ್ದು, ವಾಹನದ ಮಾಲೀಕರು ಅಥವಾ ಸಂಬಂಧಿಕರು ಇದುವರೆಗೆ ಅದನ್ನು ತೆರವುಗೊಳಿಸಲು ಮುಂದೆ ಬಂದಿಲ್ಲ. ದಿನನಿತ್ಯ ನೂರಾರು ಜನರು ಓಡಾಡುವ ಪ್ರದೇಶದಲ್ಲಿ ವಾಹನ ದೀರ್ಘಕಾಲದಿಂದ ಅನಾಥವಾಗಿ ನಿಂತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಲಭ್ಯ ಮಾಹಿತಿಯ ಪ್ರಕಾರ, ಕಾಪು ಮೂಲದ ವ್ಯಕ್ತಿಯೊಬ್ಬರು ಈ ಸ್ಕೂಟರ್ ಅನ್ನು ನೆಲ್ಯಾಡಿಯಲ್ಲಿ ನಿಲ್ಲಿಸಿ ತೆರಳಿದ್ದರು ಎನ್ನಲಾಗಿದ್ದು, ಬಳಿಕ ಅವರ ಮೊಬೈಲ್ ಸಂಪರ್ಕ ಕಡಿತಗೊಂಡಿದೆ. ಪ್ರಸ್ತುತ ಅವರ ದೂರವಾಣಿ ಸ್ವಿಚ್ ಆಫ್ ಆಗಿರುವುದರಿಂದ ಅವರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ದೊರೆತಿಲ್ಲ ಎಂದು ತಿಳಿದುಬಂದಿದೆ.

ವಾಹನದ ದಾಖಲೆಗಳ ಪರಿಶೀಲನೆಯಲ್ಲಿ ಈ ಸ್ಕೂಟರ್ ಮಧುಸೂದನ್ ಅವರ ಹೆಸರಿನಲ್ಲಿ ನೋಂದಣಿಯಾಗಿರುವುದು ಪತ್ತೆಯಾಗಿದೆ. ಆದರೆ ಅವರು ಎಲ್ಲಿದ್ದಾರೆ, ವಾಹನವನ್ನು ಏಕೆ ಬಿಟ್ಟು ಹೋಗಿದ್ದಾರೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಈ ಕುರಿತು ಮಾಹಿತಿ ಪಡೆದಿರುವ ಪೊಲೀಸರು ವಾಹನದ ಮಾಲೀಕರ ಸುಳಿವು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಒಂದು ತಿಂಗಳಿಗೂ ಅಧಿಕ ಕಾಲ ಸಾರ್ವಜನಿಕ ಸ್ಥಳದಲ್ಲಿ ಅನಾಥವಾಗಿ ನಿಂತಿರುವ ಈ ಸ್ಕೂಟರ್ ಇದೀಗ ನೆಲ್ಯಾಡಿ ಭಾಗದ ಜನರ ಚರ್ಚೆಯ ವಿಷಯವಾಗಿದ್ದು, ಪ್ರಕರಣದ ಹಿಂದಿನ ನಿಜಾಂಶ ಏನು ಎಂಬುದರ ಬಗ್ಗೆ ಕುತೂಹಲ ಹೆಚ್ಚಾಗಿದೆ.

 

Leave a Reply

error: Content is protected !!