ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಮಾನನಷ್ಟ ಮೊಕದ್ದಮೆ: ಯುವ ಕಾಂಗ್ರೆಸ್‌ ಮುಖಂಡ ಅಭಿಲಾಷ್

ಶೇರ್ ಮಾಡಿ

ನೇಸರ ಜು.19: ಕಡಬ ಬೆಳಕು ಯೋಜನೆಯಲ್ಲಿ ಅವ್ಯವಹಾರದ ಆರೋಪ ಹೊರಿಸಿ ನನ್ನ ಹೆಸರಿಗೆ ಮಸಿ ಬಳಿದು ತೇಜೋವಧೆ ಮಾಡಿರುವ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಇತರರ ವಿರುದ್ಧ ಮಾನನಷ್ಟ ಹೂಡಲಾಗುವುದು ಎಂದು ಕಡಬ ಬ್ಲಾಕ್ ಕಾಂಗ್ರೆಸ್‌ ಯುವ ಘಟಕದ ಅಧ್ಯಕ್ಷ ಉದ್ಯಮಿ ಅಭಿಲಾಷ್ ಪಿ.ಕೆ ಹೇಳಿದರು.

ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಸಾಮಾಜಮುಖಿ ಕೆಲಸ ಹಾಗು ರಾಜಕೀಯ ಏಳಿಗೆಯನ್ನು ಸಹಿಸದ ಬಿಜೆಪಿಗರು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ನನ್ನ ಘನತೆ ಗೌರವಕ್ಕೆ ಧಕ್ಕೆ ತಂದಿದ್ದಾರೆ. ನನ್ನ ಮೇಲೆ ಹೊರಿಸಿರುವ ಆರೋಪವನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.

ನಾನು ಎಲೆಕ್ಟ್ರಿಕಲ್ಸ್‌ ಗುತ್ತಿಗೆದಾರನಾಗಿದ್ದು, ಮೆಸ್ಕಾಂ ಇಲಾಖೆಯ ಎಲ್ಲಾ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುತ್ತಿದ್ದೇನೆ. ಜೊತೆಗೆ ಕಡಬ ಬ್ಲಾಕ್ ಯುವ ಕಾಂಗ್ರೆಸ್‌ ಅಧ್ಯಕ್ಷನಾಗಿ ಸಮಾಜ ಮುಖಿ ಕೆಲಸಗಳನ್ನು ನಿರ್ವಹಿಸುತ್ತಾ ಪ್ರತೀ ವರ್ಷ ಒಂದು ಮನೆಗೆ ಸಂಪೂರ್ಣ ಉಚಿತವಾಗಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸುತ್ತಾ, ಕೊರೊನಾ ಸಂದರ್ಭದಲ್ಲಿ ಅನೇಕ ಬಡ ಜನರಿಗೆ ಸ್ವಂತ ಖರ್ಚಿನಿಂದ ಆಹಾರ ಕಿಟ್ಟುಗಳನ್ನು ವಿತರಿಸಿ ಸಮಾಜದ ಬಡ ಜನರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಜ್ಯ ಸರಕಾರದ ಬೆಳಕು ಯೋಜನೆಯನ್ನು ಕಡಬ ಮೆಸ್ಕಾಂ ಉಪವಿಭಾಗದ ಐದು ಗ್ರಾಮಗಳಲ್ಲಿ ನಿರ್ವಹಿಸುತ್ತಿದ್ದು ಸುಮಾರು ಶೇ 80 ಫಲಾನುಭವಿಗಳಿಗೆ ಈಗಾಗಲೇ ವಿದ್ಯುತ್ ಕಾಮಗಾರಿಯನ್ನು ಯಾವುದೇ ಪ್ರತಿಪಲಾಪೇಕ್ಷೆ ಇಲ್ಲದ ಕಾಮಗಾರಿ ನಿರ್ವಹಿಸಿರುತ್ತೇನೆ.

ಆದರೆ, ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ ಇಮ್ಯಾನುವೆಲ್, ಸದಸ್ಯ ಚಂದ್ರಶೇಖರ್ ಹಳೆನೂಜಿ, ಪ್ರಮುಖರಾದ ಜಯಂತ ಬರೇಮೇಲು, ಅನಿಲ್ ಕೆರ್ನಡ್ಕ ಅವರುಗಳು ಸೇರಿ ನಾನು ಬೆಳಕು ಯೋಜನೆ ಫಲಾನುಭವಿಗಳಿಂದ ಬಲಾತ್ಕಾರವಾಗಿ ಹಣವನ್ನು ವಸೂಲಿ ಮಾಡಿರುವುದಾಗಿ ಆಧಾರ ರಹಿತ ಆರೋಪ ಮಾಡಿದ್ದಾರೆ. ಆ ಆರೋಪಗಳು ಶುದ್ಧ ಸುಳ್ಳು, ನಾನು ಬೆಳಕು ಯೋಜನೆ ಫಲಾನುಭವಿಗಳಿಂದ ನಯಾಪೈಸೆ ಪ್ರತಿಫಲ ಪಡೆದಿದ್ದರೆ ಆ ಸಾಕ್ಷಿಯನ್ನು ಸಾರ್ವಜನಿಕರ ಮುಂದಿಟ್ಟು ನನ್ನ ವಿರುದ್ಧ ಪ್ರಕರಣವನ್ನು ದಾಖಲಿಸಿ ಕಾನೂನು ರೀತಿಯ ಕ್ರಮಕೈಗೊಳ್ಳಿ ಎಂದು ಹೇಳಿದರು.

ನನ್ನ ಬಗ್ಗೆ ಯಾವುದೇ ದೂರುಗಳಿಲ್ಲದಿದ್ದರೂ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ರಾಜಕೀಯ ದ್ವೇಷದಿಂದ ನನ್ನ ಮೇಲೆ ಹಣ ಪಡೆದ ಆರೋಪ ಹೊರಿಸಿ ನಿರ್ಣಯನ್ನು ತೆಗೆದುಕೊಂಡಿದ್ದಾರೆ. ವ್ಯಕ್ತಿಯೊಬ್ಬರಿಂದ ಬಲತ್ಕಾರವಾಗಿ ದೂರು ಪಡೆದಿದ್ದಾರೆ ಎಂದು ಆರೋಪಿಸಿದರು.

ನಾನು ಪಂಚಾಯಿತಿ ರಸ್ತೆಯಾದ ಬದಿಬಾಗಿಲು-ಒರುಂಬಾಲು- ರಸ್ತೆಯ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರೊಂದಿಗೆ ಸೇರಿ ಧ್ವನಿ ಎತ್ತಿದಾಗ ನನ್ನ ಧ್ವನಿಯ ಹುಟ್ಟಡಗಿಸಲು ಕೆಟ್ಟ ರಾಜಕೀಯ ನೀತಿಯನ್ನು ಅನುಸರಿಸಿದ್ದಾರೆ. ಸುಳ್ಳು ಆರೋಪ ಹೊರಿಸಿ ಇಂಧನ ಸಚಿವರಿಗೆ ದೂರು ನೀಡಿದ್ದಾರೆ. ಇದು ಅವರ ಸರ್ವಾಧಿಕಾರಿ ಧೋರಣೆಯಾಗಿದೆ. ನಾನು ಯಾವುದೇ ಸಾಮಾಜಿಕ ಜಾಲಾತಾಣಗಳಲ್ಲಿ ಪಿ.ಡಿ.ಒ ಮತ್ತು ಅಧ್ಯಕ್ಷರ ಬಗ್ಗೆ ಜಾತಿನಿಂದನೆಯನ್ನು ಮಾಡಿರುವುದಿಲ್ಲ. ಇಲ್ಲಿ ಕಾರ್ಯದರ್ಶಿಯವರು ಪ್ರಭಾರ ಪಿಡಿಒ ಆಗಿರುತ್ತಾರೆ. ಅವರಿಗೆ ಕೆಲಸ ಗೊತ್ತಿಲ್ಲ. ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಅದನು ಪ್ರಶ್ನಿಸಿರುವುದಕ್ಕೆ ನನ್ನ ಮೇಲೆ ಜಾತಿ ನಿಂದನೆ ಆರೋಪ ಹೊರಿಸಿದ್ದಾರೆ, ಇದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದರು.

ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಸದಸ್ಯ ವಸಂತ ಕುಬಲಾಡಿ, ಕಡಬ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್ ನಾಯಕ್ ಮೇಲಿನ ಮನೆ, ಕಾಂಗ್ರೆಸ್ ಮುಖಂಡರಾದ ಶರೀಫ್ ಎ.ಎಸ್. ಜಗದೀಶ್ ರೈ ಮತ್ತಿತರರು ಉಪಸ್ಥಿತರಿದ್ದರು.

Leave a Reply

error: Content is protected !!