ಡಿಸಿ ಮನ್ನಾ ಭೂಮಿಯ ಆಕ್ರಮಿತರ ತೆರವುಗೊಳಿಸಿ ಆಗ್ರಹ: ದಲಿತ ಮುಖಂಡರಿಂದ

ಶೇರ್ ಮಾಡಿ

ನೇಸರ ಸೆ.10: ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರು ಸಮರ್ಪಕ ಸೇವೆ ನೀಡುತ್ತಿಲ್ಲ, ಅವರನ್ನು ವರ್ಗಾವಣೆಗೊಳಿಸಿ ಎಂದು ಈ ಹಿಂದೆ ಪ್ರಸ್ತಾಪ ಮಾಡಿದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದಿನ ಸಭೆಯ ಒಳಗಡೆ ಅವರನ್ನು ವರ್ಗಾವಣೆಗೊಳಿಸದಿದ್ದರೆ ಸಭೆ ನಡೆಸಲು ಬಿಡದೆ ಪ್ರತಿಭಟನೆ ನಡೆಸುತ್ತೇವೆ ಎಂದು ದಲಿತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಕಡಬ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಕಡಬ ತಹಸೀಲ್ದಾರ್ ಅನಂತ ಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಠ ಜಾತಿ / ಪಂಗಡದವರ ಹಿತರಕ್ಷಣೆ ಮತ್ತು ಭದ್ರತಾ ಕುರಿತ ಸಭೆಯಲ್ಲಿ ದಲಿತ ಮುಖಂಡರು ಆರೋಗ್ಯ ಕೇಂದ್ರದ ಅವ್ಯವಸ್ಥೆಯ ಬಗ್ಗೆ ಅಕ್ರೋಶ ವ್ಯಕ್ತಪಡಿಸಿ ಆರೋಗ್ಯಾಧಿಕಾರಿಯವರ ವರ್ಗಾವಣೆಗೆ ಪಟ್ಟು ಹಿಡಿದರು.
ದಲಿತ ಮುಖಂಡರಾದ ಗುರುವಪ್ಪ ಕಲ್ಲುಗುಡ್ಡೆ, ಶಶಿಧರ ಬೊಟ್ಟಡ್ಕ, ಬಾಬು ಸವಣೂರು, ವಸಂತ ಕುಬಲಾಡಿ, ಚಂದ್ರಹಾಸ ಬಲ್ಯ, ಆನಂದ ಕೆ, ರಾಘವ ಕಳಾರ ಮತ್ತಿತರರು ಮಾತನಾಡಿ, ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿದರೂ ಜನರಿಗೆ ಯಾವುದೇ ಪ್ರಯೋಜನವಿಲ್ಲ. ಸಿಬ್ಬಂದಿ ನೀಡದೆ ಸರಕಾರ ಸತಾಯಿಸುತ್ತಿದೆ. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಇಲ್ಲಿ ಯಾರೂ ಇಲ್ಲ. ಇರುವ ಆರೋಗ್ಯಾಧಿಕಾರಿಯವರು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ. ಅವರನ್ನು ವರ್ಗಾವಣೆಗೊಳಿಸಿ ಇಲ್ಲಿಂದ ವರ್ಗಾವಣೆಗೊಳಿಸಿರುವ ವ್ಯದ್ಯಾಧಿಕಾರಿಯವರನ್ನು ವಾಪಸ್ ಇಲ್ಲಿಗೆ ನೇಮಿಸಬೇಕು ಎಂದು ಆಗ್ರಹಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರು ಮಾತನಾಡಿ ಆಸ್ಪತ್ರೆಯ ವೈದ್ಯರು ಸೇರಿದಂತೆ ಸಿಬ್ಬಂದಿ ನೇಮಕಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು. ಇದಕ್ಕೆ ದಲಿತ ಮುಖಂಡರು ಅಸಮಾಧಾನಗೊಂಡು ಪ್ರತಿ ಬಾರಿ ಇದೇ ಭರವಸೆ ದೊರೆಯುತ್ತಿದೆ, ಇದು ಬೇಕಾಗಿಲ್ಲ ಎಂದರು.

ಡಿಸಿ ಮನ್ನಾ ಭೂಮಿಯ ಆಕ್ರಮಿತರ ತೆರವುಗೊಳಿಸಿ
ಕಳೆದ ಸಭೆಯಲ್ಲಿ ಡಿಸಿ ಮನ್ನಾ ಭೂಮಿಯನ್ನು ಅಕ್ರಮಿಸಿಕೊಂಡಿರುವುದನ್ನು ತೆರವುಗೊಳಿಸುವುದಾಗಿ ನಿರ್ಣಯಿಸಲಾಗಿತ್ತು. ಆದರೆ ಈ ವರೆಗೆ ಕ್ರಮ ಕೈಗೊಂಡಿಲ್ಲ ಎಂದು ದಲಿತ ಮುಖಂಡರು ದೂರಿದರು. ರಸ್ತೆ, ಸರಕಾರಿ ಕಟ್ಟಡ ನಿರ್ಮಾಣಕ್ಕೆ ಡಿಸಿ ಮನ್ನಾ ಜಾಗವೇ ನಿಮಗೆ ಬೇಕು ಎಂದು ಹೇಳಿದ ಮುಖಂಡರು, ತಕ್ಷಣ ತೆರವು ಕಾರ್ಯ ನಡೆಯಬೇಕು, ದಲಿತರಿಗೆ ಅವುಗಳನ್ನು ಹಂಚಬೇಕು ಎಂದು ಅಗ್ರಹಿಸಿದರು.

ಇದಕ್ಕೆ ಉತ್ತರಿಸಿದ ತಹಸೀಲ್ದಾರ್, ಅಕ್ರಮ ಡಿಸಿ ಮನ್ನಾ ಭೂಮಿಯಲ್ಲಿ ಮಂಜೂರಾತಿಗೆ ಅಕ್ರಮ ಸಕ್ರಮದಡಿಯಲ್ಲಿ ಅರ್ಜಿ ಸಲ್ಲಿಸಿದರೆ ಮಂಜೂರಾತಿ ನೀಡಬಹುದು. 2015 ರಿಂದ ಡಿಸಿ ಮನ್ನಾ ಭೂಮಿಯ ಅತಿಕ್ರಮಣ ಆಗಿಲ್ಲ. ಅದಕ್ಕಿಂತ ಹಿಂದೆ ಆಗಿರುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ದಲಿತರ ಹೆಸರಲ್ಲಿ ಉಳ್ಳವರ ಮನೆಗೆ ಕಾಂಕ್ರೀಟ್ ಆರೋಪ
ಎಸ್‌ಸಿ, ಎಸ್‌ಟಿ ಕೋಟಾದಡಿ ದಲಿತ ಕಾಲೋನಿಗಳ ಹೆಸರಲ್ಲಿ ಶ್ರೀಮಂತರ ಮನೆಯ ರಸ್ತೆ ಕಾಂಕ್ರೀಟಿಕರಣ ಮಾಡಲಾಗಿದೆ. ಕ್ಷೇತ್ರದ ಶಾಸಕರು ದಲಿತ ಸಮುದಾಯದ ಅಹವಾಲುಗಳನ್ನು ಪರಿಗಣಿಸದೆ ಅವರಿಗೆ ಇಷ್ಟ ಬಂದಲ್ಲಿ ರಸ್ತೆ ಕಾಂಕ್ರೀಟಿಕರಣ ಮಾಡಲು ಎಸ್‌ಸಿ/ಎಸ್‌ಟಿ ನಿಗಮದ ಅನುದಾನ ಬಳಕೆ ಮಾಡುತ್ತಿದ್ದಾರೆ. ನೆಲ್ಯಾಡಿಯ ಪಟ್ಟೆ ಎಂಬಲ್ಲಿ ಯಾವುದೇ ದಲಿತ ಕುಟುಂಬಗಳು ಇಲ್ಲದಿದ್ದರೂ ಅಲ್ಲಿಗೆ ದಲಿತರ ಹೆಸರಿನಲ್ಲಿ ಕಾಂಕ್ರೀಟಿಕರಣ ಮಾಡಲಾಗಿದೆ ಎಂದು ದೂರಿದರು.

ಇದಕ್ಕೆ ಉತ್ತರಿಸಿದ ಇಂಜಿನಿಯರ್ ಕಾನಿಷ್ಕ, ದಲಿತ ಕಾಲೋನಿ ಸಂಪರ್ಕ ರಸ್ತೆಗೆ ಕಾಂಕ್ರೀಟಿಕರಣಗೊಳಿಸಲು ಅವಕಾಶವಿದೆ. ಹಾಗೇಯೇ ಆ ಭಾಗದ ಕಾಲೋನಿ ಜನರ ಅನುಮತಿ ಪಡೆದು ಅಗತ್ಯ ಇರುವ ಕಡೆ ಕಾಂಕ್ರೀಟಿಕರಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ರಸ್ತೆ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೊಂಬಾರು ಗ್ರಾಮದ ಬೊಟ್ಟಡ್ಕದಲ್ಲಿ 25ಕ್ಕಿಂತಲೂ ಹೆಚ್ಚು ದಲಿನ ಮನೆಗಳಿರುವ ಕಾಲೋನಿ ಇದೆ, ಅದಕ್ಕೆ ಈವರೆಗೆ ಶಾಸಕರು ಅನುದಾನ ನೀಡಿಲ್ಲ ಎಂದು ಶಶೀಧರ ಬೊಟ್ಟಡ್ಕ ಆರೋಪಿಸಿದರು.

ಅರಣ್ಯ ಉತ್ಪತ್ತಿಯ ಏಲಂ ಪಡೆಯಲು ಎಸ್‌ಸಿ, ಎಸ್‌ಟಿಯವರಿಗೆ ಅವಕಾಶವಿದ್ದರೂ ಬೇರೆಯವರು ಅದನ್ನು ಕಬಳಿಸುತ್ತಿದ್ದಾರೆ. ಇನ್ನು ಮುಂದೆ ಎಸ್‌ಸಿ, ಎಸ್‌ಟಿಯವರಿಗೇ ಅವಕಾಶ ನೀಡಬೇಕು. ಈಗ ಇರುವ ಅರಣ್ಯ ಸಮಿತಿಯನ್ನು ಬರ್ಕಾಸ್ತುಗೊಳಿಸಿ ನೂತನ ಸಮಿತಿಯಲ್ಲಿ ಎಸ್‌ಸಿ ಎಸ್ಟಿ ಸಮುದಾಯವದರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಗುರವಪ್ಪ ಕಲ್ಲುಗುಡ್ಡೆ ಅಗ್ರಹಿಸಿದರು.
ಸುಬ್ರಹ್ಮಣ್ಯದಲ್ಲಿ ದಲಿತ ಮುಖಂಡರ ವಿರುದ್ಧ ಸುಳ್ಳು ಪೋಕ್ಸೋ ಪ್ರಕರಣ ದಾಖಲಿಸಿಲಾಗಿದೆ ಎಂದು ರಾಘವ ಕಳಾರ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಕಡಬ ಠಾಣಾಧಿಕಾರಿ ಆಂಜನೇಯ ರೆಡ್ಡಿ ದೂರು ನೀಡಿದಾಗ ಪ್ರಕರಣ ದಾಖಲಿಸಲೇಬೇಕು, ಬಳಿಕ ತನಿಖೆ ನಡೆಸಿ ಪ್ರಕರಣದಲ್ಲಿ ಸತ್ಯಾಂಶವಿಲ್ಲದಿದ್ದರೆ ಬಿ ರಿಪೋರ್ಟ್ ಹಾಕಲಾಗುತ್ತದೆ. ಸುಳ್ಳು ಕೇಸ್ ನೀಡಿರುವುದು ಸಾಬೀತಾದರೆ ದೂರು ನೀಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದರು.

ಕಡಬದಲ್ಲಿ ತಾಲೂಕು ಅಂಬೇಡ್ಕರ್ ಭವನ ನಿರ್ಮಾಣವಾಗಬೇಕು, ಆಹಾರ ಪರಿವೀಕ್ಷಕರು ವಾರದಲ್ಲಿ ಎರಡು ದಿನ ಕಡಬದಲ್ಲಿ ಕರ್ತವ್ಯ ನಿರ್ವಹಿಸಬೇಕು, ಸುವಿಧದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ದೊರೆಯುವ ಸವಲತ್ತುಗಳಿಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ವಿಸ್ತರಿಸಬೇಕು ಮುಂತಾದ ಬೇಡಿಕೆಗಳನ್ನು ಸಲ್ಲಿಸಲಾಯಿತು. ತನಿಯ ಸಂಪಡ್ಕ, ಸುಂದರಿ ಕಲ್ಲುಗುಡ್ಡೆ, ಆನಂದ ಎಡಮಂಗಲ, ಮತ್ತಿತರ ದಲಿತ ಮುಖಂಡರು ಚರ್ಚೆಯಲ್ಲಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಕೀರ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಬಿ. ಕೃಷ್ಣ ಸ್ವಾಗತಿಸಿ, ವಂದಿಸಿದರು.

Leave a Reply

error: Content is protected !!