ತ್ಯಾಗ ಮನೋಭಾವದ ಕೆಲಸಗಳಿಂದ ಆತ್ಮ ತೃಪ್ತಿ – ಶಾಸಕ ಹರೀಶ್ ಪೂಂಜ

ಶೇರ್ ಮಾಡಿ

ನೇಸರ ಸೆ.11: ತ್ಯಾಗ, ಸಮರ್ಪಣಾ ಮನೋಭಾವಗಳಿಂದ ಮಾಡುವ ಕೆಲಸಗಳು ಆತ್ಮ ತೃಪ್ತಿಯನ್ನು ನೀಡುತ್ತವೆ. ದೇಗುಲಗಳ ಅಭಿವೃದ್ಧಿ ಕಾರ್ಯದಲ್ಲಿ ಗ್ರಾಮಸ್ಥರು ನೀಡುವ ಸೇವೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಶನಿವಾರ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಸಂಗಮ ಕ್ಷೇತ್ರ ಪಜಿರಡ್ಕ ಶ್ರೀಸದಾಶಿವೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ಜರಗಿದ ತಂತ್ರಿಗಳ ವಸತಿ ನಿಲಯದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಪಜಿರಡ್ಕ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಗ್ರಾಮಸ್ಥರಿಗೆ ಸಂಪರ್ಕವನ್ನು ಹತ್ತಿರಗೊಳಿಸಿದೆ. ಈ ಭಾಗಕ್ಕೆ ಅಗತ್ಯ ಇರುವ ರಸ್ತೆಗೆ ಅನುದಾನವನ್ನು ಬಿಡುಗಡೆಗೊಳಿಸಲಾಗುವುದು. ಇಲ್ಲಿನ ಸಭಾಭವನ ರಚನೆಯ ಅನುದಾನದ ಬಗ್ಗೆ ಸಚಿವರಲ್ಲಿ ಮಾತುಕತೆ ನಡೆಸುವುದಾಗಿ ತಿಳಿಸಿದರು.ಎಂಎಲ್ ಸಿ ಪ್ರತಾಪ ಸಿಂಹ ನಾಯಕ್ ಮಾತನಾಡಿದರು.

ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ತುಕಾರಾಮ ಸಾಲಿಯನ್, ಕಾರ್ಯದರ್ಶಿ ಮಂಜುನಾಥ ಶೆಟ್ಟಿ, ಖಜಾಂಜಿ ಪಾಂಡುರಂಗ ಕಾಕತ್ಕರ್ ಕಲ್ಮಂಜ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ ನಿಡಿಗಲ್, ಉಪಾಧ್ಯಕ್ಷ ವಿಮಲಾ, ಸಂತೋಷ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್ ವಂದಿಸಿದರು.

Leave a Reply

error: Content is protected !!