ಜಿಲ್ಲಾ ಯುವಜನೋತ್ಸವಕ್ಕೆ ಅದ್ದೂರಿ ಚಾಲನೆ : ಸವಣೂರು

ಶೇರ್ ಮಾಡಿ

ನೇಸರ ಡಿ4: ಯುವಜನೋತ್ಸವವು ಜನಪದೀಯ ಸಾಂಸ್ಕೃತಿಕ ಲೋಕದ ಅನಾವರಣದ ಜತೆಗೆ ಸುಪ್ತವಾದ ಪ್ರತಿಭೆಗೆ ಉತ್ತಮ ವೇದಿಕೆಯಾಗಿದೆ. ಪ್ರತಿಭೆಗಳನ್ನು ಗುರುತಿಸಲು ವೇದಿಕೆ ಅವಶ್ಯಕ. ಯುವಜನೋತ್ಸವ ಕಾರ್ಯಕ್ರಮದ ಮೂಲಕ ಪ್ರತಿಭೆಗಳನ್ನು ಬೆಳಕಿಗೆ ತರುವ ಕಾರ್ಯ ಆಗುತ್ತಿರುವುದು ಶ್ಲಾಘನೀಯ ಎಂದು ಪುತ್ತೂರು ಸಹಾಯಕ ಆಯುಕ್ತರಾದ ಡಾ| ಯತೀಶ್ ಉಳ್ಳಾಲ್ ಹೇಳಿದರು. ಅವರು ಜಿಲ್ಲಾಡಳಿತ ದ.ಕ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ದ.ಕ ಜಿಲ್ಲಾ ಯುವಜನ ಒಕ್ಕೂಟ, ತಾಲೂಕು ಯುವಜನ ಒಕ್ಕೂಟ ಕಡಬ, ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜು ಸವಣೂರು ಇವರ ಸಹಯೋಗದೊಂದಿಗೆ ಡಿ 4ರಂದು ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಕೆ.ಸೀತಾರಾಮ.ರೈ ವಹಿಸಿ ಮಾತನಾಡಿ, ಪ್ರತಿಭೆ ಯುವಜನರ ಸೊತ್ತು. ಸಿಕ್ಕಿದ ಅವಕಾಶಗಳನ್ನು ಬಳಸಿಕೊಳ್ಳುವಂತಹ ವ್ಯವಸ್ಥೆ ಯುವಜನತೆ ಮಾಡಬೇಕು. ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸುವುದರ ಮೂಲಕ ಇವತ್ತು ಗ್ರಾಮೀಣ ಪ್ರದೇಶದಲ್ಲಿಯೂ ನಮ್ಮ ಸಾಂಪ್ರಾದಯಕ ಕಲೆಗಳು ಉಳಿಯಲು ಸಾಧ್ಯವಾಗಿದೆ. ವಿದೇಶಿಯರೇ ಭಾರತ ದೇಶದ ಸಂಸ್ಕೃತಿಗೆ ಆಕರ್ಷಿತರಾಗುತ್ತಿದ್ದಾರೆ ಎಂದಾದರೆ ನಮ್ಮ ದೇಶದ ಸಂಸ್ಕೃತಿ, ಸಮಾಜದ ಬಗ್ಗೆ ಜನಗಳಿಗೆ ಗೌರವ ಎಷ್ಠಿದೆ ಎಂಬುದನ್ನು ಯುವಜನತೆ ಅರ್ಥಮಾಡಿಕೊಳ್ಳಬೇಕಾಗುತ್ತದೆ ಎಂದವರು ಯುವ ಶಕ್ತಿಯೇ ದೇಶದ ಸಂಪತ್ತು.ಯುವ ಶಕ್ತಿಯ ಸದ್ಬಳಕೆವಾದಾಗ ನಮ್ಮ ದೇಶದ ಸಂಸ್ಕೃತಿಯ ಜೊತೆಗೆ ಸಂಪತ್ತನ್ನು ಉಳಿಸಲು ಸಾಧ್ಯ ಎಂದವರು.
ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ಬಹುಮುಖ ಪ್ರತಿಭೆಗೆ ಯುವಜನೋತ್ಸವ, ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿವುದರ ಮೂಲಕ ನಾಯಕತ್ವ ಬೆಳವಣಿಗೆ ಸಾಧ್ಯ. ಗ್ರಾಮೀಣ ಪ್ರದೇಶದ ಯುವಜನತೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸುವಂತಾಗಬೇಕು ಎಂದರು.

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್. ಸಿ ಮಾತನಾಡಿ, ಪ್ರತಿಭೆ ಅನಾವರಣಕ್ಕೆ ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದೆ. ಸೋಲು ಗೆಲುವಿನ ಸೋಪಾನ. ಸಣ್ಣ ಪ್ರಮಾಣದ ಸೋಲು ದೊಡ್ಡ ಪ್ರಮಾಣದ ಗೆಲುವಿಗೆ ಕಾರಣವಾಗುತ್ತದೆ. ಸೋಲು ನಮ್ಮ ಗೆಲುವಿನ ಹೆಜ್ಜೆಯಾಗಬೇಕು ಎಂದರು.


ಝಿ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಅಖಿಲಾ ಪಜಿಮಣ್ಣು, ಮಂಗಳೂರು ಯುವ ಸ್ಪಂದನ ಕೇಂದ್ರದ ಯುವ ಸಮಾಲೋಚನಾಧಿಕಾರಿ ಆದರ್ಶ್ ಶೆಟ್ಟಿ ಮತ್ತು ಸಂಪ್ಯ ಪೋಲಿಸ್ ಠಾಣೆಯ ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತ ಪ್ರವೀಣ್ ರೈ ಇವರನ್ನು ಸನ್ಮಾನಿಸಲಾಯಿತು.

ರಾಷ್ಟ್ರೀಯ ಕಬಡ್ಡಿ ತರಬೇತುದಾರ,ನಿವೃತ್ತ ಸೈನಿಕ ಮಾಧವ ಬಿ.ಕೆ, ಪುತ್ತೂರು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್, ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ,ಸವಣೂರು ವಿದ್ಯಾರಶ್ಮಿ ಸಂಸ್ಥೆಯ ಆಡಳಿತಾಧಿಕಾರಿ ಆಶ್ವಿನಿ.ಎಲ್ ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ರಾಜಲಕ್ಷ್ಮೀ .ಎಸ್.ರೈ, ಸವಣೂರು ಯುವಕ ಮಂಡಲದ ಅಧ್ಯಕ್ಷ ಪ್ರಕಾಶ್ ಮಾಲೆತ್ತಾರು ಉಪಸ್ಥಿತರಿದ್ದರು. ಶೇಷಗಿರಿ ಎನ್, ತಾರಾನಾಥ, ಜಿತಾಕ್ಷ, ಬಾಲಚಂದ್ರ ಕೆರೆಕೋಡಿ, ಕಾರ್ತಿಕ್ ರೈ, ವೆಂಕಟ್ರಮಣ ನಾಕ್, ಹರ್ಷಿತ್, ಸುಮಾ.ಎಸ್ ಅತಿಥಿಗಳಿಗೆ ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು. ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾದ್ಯಾಪಕಿ ಪ್ರತಿಭಾ ಸನ್ಮಾನಿತರ ಪರಿಚಯ ವಾಚಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ ಸ್ವಾಗತಿಸಿದರು. ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್.ರೈ ಸೂಡಿಮುಳ್ಳು ವಂದಿಸಿ, ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ರಾಕೇಶ್.ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!