ಜೇಸಿಐ ಆಲಂಕಾರು ಘಟಕದ ಜೇಸಿಐ ಸಪ್ತಾಹದ ಸಮಾರೋಪ ಸಮಾರಂಭ, ಸಾಧಕರಿಗೆ ಸನ್ಮಾನ ಮತ್ತು ಕುಟುಂಬ ಸಮ್ಮಿಲನ

ಶೇರ್ ಮಾಡಿ

ನೇಸರ ಸೆ.17: ಜೇಸಿಐ ಆಲಂಕಾರು ಘಟಕದ ಜೆಸಿ ಸಪ್ತಾಹ ನಮಸ್ತೆ ಇದರ 7 ದಿನಗಳ ವಿವಿಧ ಕಾರ್ಯಕ್ರಮಗಳ ನಂತರ ಸಮಾರೋಪ ಸಮಾರಂಭ ಆಲಂಕಾರಿನಲ್ಲಿ ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜೇಸಿ ಆಲಂಕಾರಿನ ಅಧ್ಯಕ್ಷ ಅಜಿತ್ ಕುಮಾರ್ ರೈ ಅವರು ವಹಿಸಿದ್ದರೆ, ಮುಖ್ಯ ಅತಿಥಿಗಳಾಗಿ ಜೇಸಿ ಭಾರತದ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಪುರಂದರ ರೈ ಮಿತ್ರಂಪಾಡಿ, ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ದಾಮೋದರ ಗೌಡ ಕಕ್ವೆ ಮತ್ತು ಜೇಸಿ ಆಲಂಕಾರಿನ ಪೂರ್ವಾಧ್ಯಕ್ಷ ಪ್ರದೀಪ್ ರೈ ಮನವಳಿಕೆ ಅವರು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪುರಂದರ ರೈ ಅವರು ಮಾತನಾಡುತ್ತಾ, “ಜೆಸಿಐ ಎಂಬುದು ಒಂದು ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, ಯುವಜನರ ಸಬಲೀಕರಣದ ಮೂಲಕ ವಿಶ್ವ ಶಾಂತಿಯ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ. ಯುವ ಜನರಿಗೆ ವಿವಿಧ ಅವಕಾಶವನ್ನು ನೀಡಿ, ಅವರು ಅಭಿವೃದ್ಧಿ ಹೊಂದುವಂತೆ ಜೆಸಿಐ ಮಾಡುತ್ತದೆ. ಜೆಸಿಐ ಆಲಂಕಾರು ಕಳೆದ 12 ವರುಷಗಳಿಂದ ಇಂತಹ ಹಳ್ಳಿಯ ಪ್ರದೇಶದಲ್ಲಿ ಸಶಕ್ತ ಯುವಪಡೆಯನ್ನು ತಯಾರು ಮಾಡುವ ಲೋಕ ಹಿತದ ಕೆಲಸವನ್ನು ಅತ್ಯುತ್ತಮವಾಗಿ ಮಾಡುತ್ತಿದೆ. ಈ ಕಾರ್ಯ ಹೀಗೆ ಮುಂದುವರಿಯಲಿ. ಜೆಸಿಐ ಆಲಂಕಾರು ಇನ್ನಷ್ಟು ಉನ್ನತ ಸ್ಥಾನಕ್ಕೆ ಏರಲಿ” ಎಂದು ನುಡಿದರು.

ಇನ್ನೋರ್ವ ಮುಖ್ಯ ಅತಿಥಿ ಪ್ರದೀಪ್ ರೈ ಮನವಳಿಕೆ ಅವರು “ಯುವಜನರಲ್ಲಿ ಗುಣಾತ್ಮಕ ಬದಲಾವಣೆಯನ್ನು ತರುವುದು ಜೆಸಿಐನ ಮುಖ್ಯವಾದ ಮೌಲ್ಯಗಳಲ್ಲಿ ಒಂದು. ಯುವ ಜನರು ಸಮಾಜಮುಖಿಯಾಗಿ ಇರುವಂತೆ ಮಾಡಿ, ಸಮಾಜದ ಆಸ್ತಿಯಾಗುವಂತೆ ಜೆಸಿಐ ಮಾಡುತ್ತದೆ. ಇಂದು ಜೆಸಿಐ ನ ಸದಸ್ಯರು ಸಮಾಜದ ಅನೇಕ ಸಂಘಟನೆಗಳಲ್ಲಿ ಉನ್ನತ ಹುದ್ದೆಗಳನ್ನು ಏರಿ, ಜೆಸಿಐ ನಲ್ಲಿ ಕಲಿತ ವಿಷಯಗಳನ್ನು ತಮ್ಮ ವಿವಿಧ ಕ್ಷೇತ್ರಗಳಲ್ಲಿ ಮಾಡುತ್ತಿದ್ದಾರೆ. ವ್ಯಕ್ತಿತ್ವ ನಿರ್ಮಾಣದ ಈ ಮಹತ್ಕಾರ್ಯ ಹೀಗೆ ಮುಂದುವರೆಯಲಿ” ಎಂದು ನುಡಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ, ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ದೇವಸ್ಥಾನ ಆಲಂಕಾರು ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ದಾಮೋದರ ಗೌಡ ಕಕ್ವೆಯವರು ಮಾತನಾಡಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಕೃಷಿ ಕ್ಷೇತ್ರದಲ್ಲಿ ಸೀತಾರಾಮ ರೈ ಕೇವಳ, ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಶ್ವರ ಭಟ್ ಆಲಂಕಾರು ಹಾಗು ಉದ್ಯಮ ಕ್ಷೇತ್ರದಲ್ಲಿ ರಾಧಾಕೃಷ್ಣ ರೈ ಪರಾರಿ ಗುತ್ತು ಇವರನ್ನು ಸನ್ಮಾನಿಸಲಾಯಿತು.

ಜೇಸಿಐ ಯಿಂದ ಕೊಡಲ್ಪಡುವ ಪ್ರತಿಷ್ಠಿತ ಕಮಲ ಪತ್ರ ಪ್ರಶಸ್ತಿಯನ್ನು ಜೇಸಿ ಆಲಂಕಾರಿನ ಪೂರ್ವಾಧ್ಯಕ್ಷ ಹರಿಶ್ಚಂದ್ರ ಅವರಿಗೆ ನೀಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ಅಜಿತ್ ಕುಮಾರ್ ರೈ ಅವರು, ಜೆಸಿ ಆಲಂಕಾರು ಘಟಕವು ಸಪ್ತಾಹದ 7 ದಿನವೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರ ಪರಿಚಯ ಮಾಡಿ ಕೊಟ್ಟರು. ಸೆಪ್ಟೆಂಬರ್ 9 ರಂದು ಕೊಯಿಲದ ಎಂಡೋ ಪಾಲನಾ ಕೇಂದ್ರದಲ್ಲಿ ಉದ್ಘಾಟನೆ, ಎಂಡೋ ಪಾಲನಾ ಕೇಂದ್ರಕ್ಕೆ ಶಾಶ್ವತ ಕೊಡುಗೆ ಮತ್ತು 3 ಜನ ಮಹಿಳಾ ಸಾಧಕಿಯರಾದ -ವಸಂತಿ ಕನೆಮಾರು,ಮಮತಾ ಉಮೇಶ್ ಮತ್ತು ಶ್ರೀಮತಿ ಸುಧಾ ಅವರಿಗೆ ಸನ್ಮಾನ ನಡೆಯಿತು. 2 ನೇ ದಿನ ಜೇಸಿ ಆಲಂಕಾರು ಬಸ್ ನಿಲ್ದಾಣದಲ್ಲಿ ಮಧು ಮೇಹ ಮತ್ತು ರಕ್ತದೊತ್ತಡ ತಪಾಸಣಾ ಶಿಬಿರ, 3 ನೇ ದಿನ ಸದಸ್ಯರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು, 4ನೇ ದಿನ ಸರಕಾರಿ ಅರಣ್ಯ ಕುಂತೂರು ಪದವಿನಲ್ಲಿ ಜೇಸಿ ಅರಣ್ಯ ಉದ್ಘಾಟನೆ ಹಾಗು ಅಶ್ವಿತಾ ನಿಲಯ ಕುಂತೂರಿನಲ್ಲಿ ಮಳೆ ನೀರು ಕೊಯ್ಲು ಕಾರ್ಯಾಗಾರ , 5 ನೇ ದಿನ ಜೇಸಿ ಆಲಂಕಾರಿನ ಬಸ್ ನಿಲ್ದಾಣದಲ್ಲಿ ಪ್ರಾಮಾಣಿಕ ಮಳಿಗೆ ಉದ್ಘಾಟನೆ, 6ನೇ ದಿನ SMA ಬಗ್ಗೆ ಮಾಹಿತಿ ಕಾರ್ಯಾಗಾರ ಹಾಗೂ 7ನೇ ದಿನ ಬೆಳಿಗ್ಗೆ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಶಾಶ್ವತ ಕೊಡುಗೆ ಜೇಸಿ ಮಡಿಲು ಶಿಶು ಪಾಲನಾ ಕೊಠಡಿಯ ಹಸ್ತಾಂತರದ ನಂತರ ಇದೀಗ ವರ್ಣ ರಂಜಿತ ಸಪ್ತಾಹದ ಸಮಾರೋಪ ಸಮಾರಂಭ ನಡೆಯುತ್ತಿದೆ ಎಂದರು.

ಇದೆ ಸಂದರ್ಭದಲ್ಲಿ 2023ರ ಅದ್ಯಕ್ಷರ ಚುನಾವಣೆ ಪ್ರಕ್ರಿಯೆಯನ್ನು ನಿಕಟ ಪೂರ್ವಾಧ್ಯಕ್ಷ ಗಣೇಶ್ ಕಟ್ಟಪುಣಿ ನಡೆಸಿ ಕೊಟ್ಟರು. 2023 ರ ಅಧ್ಯಕ್ಷರಾಗಿ ಲಕ್ಷ್ಮಿನಾರಾಯಣ ಅವರು ಆಯ್ಕೆಯಾದರು.

ವೇದಿಕೆಯಲ್ಲಿ ಸಪ್ತಾಹದ ನಿರ್ದೇಶಕ ಪ್ರವೀಣ್ ಆಳ್ವ, ಲೇಡಿ ಜೆಸಿ ಅಧ್ಯಕ್ಷೆ ಮಮತಾ ಶೆಟ್ಟಿ ಅಂಬಾರಾಜೇ ಮೊದಲಾದವರು ಉಪಸ್ಥಿತರಿದ್ದರು.

ಗುರುಕಿರಣ್ ಶೆಟ್ಟಿ ಅವರು ವೇದಿಕೆಗೆ ಆಹ್ವಾನಿಸಿದರು, ಪ್ರತಿಮಾ ರೈ ಅವರು ಜೆಸಿ ವಾಣಿ ವಾಚಿಸಿದರು. ಅಧ್ಯಕ್ಷ ಅಜಿತ್ ಕುಮಾರ್ ರೈ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಚೇತನ್ ಮೊಗ್ರಾಲ್ ಸಪ್ತಾಹದ ವರದಿ ಮಂಡಿಸಿದರು. ಗುರುರಾಜ್ ರೈ, ಗುರುಪ್ರಸಾದ್ ರೈ ಮತ್ತು ಪುರಂದರ ಅವರು ಸನ್ಮಾನಿತರ ಪರಿಚಯ ಮಾಡಿದರು . ಸಪ್ತಾಹದ ನಿರ್ದೇಶಕ ಪ್ರದೀಪ್ ಬಾಕಿಲ ವಂದನಾರ್ಪಣೆ ಗೈದರು.

ಕಾರ್ಯಕರಮದಲ್ಲಿ ಜೆಸಿ ಆಲಂಕಾರಿನ ಸ್ಥಾಪಕಾಧ್ಯಕ್ಸ ಬಿ ಎಲ್ ಜನಾರ್ಧನ್, ಪೂರ್ವಧ್ಯಕ್ಷರಾದ ಹೇಮಲತಾ ಪ್ರದೀಪ್, ಜೇಸಿ ಆಲಂಕಾರಿನ ಸ್ಥಾಪಕ ಪ್ರಶಾಂತ್ ಕುಮಾರ್ ರೈ, ನಿವೃತ್ತ ಕ್ಯಾಂಪ್ಕೋ ಉದ್ಯೋಗಿ ಜನಾರ್ದನ್ ಕದ್ರಾ, ಸಿ ಎ ಬ್ಯಾಂಕ್ ಆಲಂಕಾರಿನ ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರಶಾಂತ್ ರೈ ಮನವಳಿಕೆ ಗುತ್ತು, ಶಾಂತಾರಾಮ ರೈ ಕುಂತೂರು ಗುತ್ತು, ಪ್ರೇಮ್ ಕುಮಾರ್, ವಿಠ್ಠಲ್ ರೈ ಮನವಳಿಕೆ ಗುತ್ತು, ಶಿಕ್ಷಕ ಜಯಪ್ರಕಾಶ್ ರೈ ಅರ್ಬಿ, ಉದ್ಯಮಿ ಪೀರ್ ಮೊಹಮ್ಮದ್ ಸಾಹೇಬ್, ಡಾ ಆಕಾಶ್, ಡಾ ಅಭಿಷೇಕ್ ಶೆಟ್ಟಿ, ಸುದ್ದಿ ಪತ್ರಿಕೆಯ ಸದಾಶಿವ ಮರಂಗ, ಕಮಲಾಕ್ಷ ಶೆಟ್ಟಿ ಅಂಬರ್ಜೆ ಕಾಂಚನಂ ಪೆರ್ಲ ಷಣ್ಮುಖ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷರಾದ ಅಜಿತ್ ಕುಮಾರ್ ಪಾಲೇರಿ, ಪೆರಾಬೆ ಗ್ರಾಮ ಪಂಚಾಯತ್ ಸದಸ್ಯರಾದ ಜನಾರ್ಧನ್ ಶೆಟ್ಟಿ ,ಮುರಳೀಧರ ರೈ ಮನವಳಿಕೆ ಗುತ್ತು, ಪ್ರದೀಪ್ ರೈ ಬಾಳಂಕೊಡಿ, ಮನವಳಿಕೆ,ಮತ್ತು ಜೇಸಿ ಆಲಂಕಾರಿನ ಸದಸ್ಯರು ಉಪಸ್ಥಿತರಿದ್ದರು.

Leave a Reply

error: Content is protected !!