ಎಳನೀರು ಪ್ರದೇಶವನ್ನು ಕಳಸ ಮೆಸ್ಕಾಂ ವ್ಯಾಪ್ತಿಗೆ ಸೇರಿಸಲು ಮನವಿ

ಶೇರ್ ಮಾಡಿ

ನೇಸರ ಸೆ.18: ಎಳನೀರು ಪ್ರದೇಶದ ವಿದ್ಯುತ್ ಸಂಪರ್ಕ ಉಜಿರೆ ಉಪ ವಿಭಾಗದ ಮುಂಡಾಜೆ ಶಾಖಾ ಕೇಂದ್ರದ ವ್ಯಾಪ್ತಿಗೆ ಒಳಪಟ್ಟಿದೆ. ಎಳನೀರು ಪ್ರದೇಶದಲ್ಲಿ ಯಾವುದೇ ತರಹದ ವಿದ್ಯುತ್ ಸಮಸ್ಯೆ ಉಂಟಾದರೆ ಕಡಿರುದ್ಯಾವರ ವ್ಯಾಪ್ತಿಯ ಪವರ್ ಮ್ಯಾನ್ ಹಾಗೂ ಅಧಿಕಾರಿಗಳು ಹೋಗಿ ಬರಲು 260 ಕಿಮೀ. ಪ್ರಯಾಣಿಸಬೇಕು. ಈ ಸಮಯ ಇಲ್ಲಿನ ಪ್ರದೇಶಗಳಲ್ಲಿ ಸಮಸ್ಯೆಗಳು ಉಂಟಾದರೆ ನಿರ್ವಹಿಸಲು ಮೆಸ್ಕಾಂ ಸಿಬ್ಬಂದಿಗಳು ಲಭಿಸುವುದಿಲ್ಲ. ಈ ಕಾರಣದಿಂದ ಎಳನೀರು ಪ್ರದೇಶದ ವಿದ್ಯುತ್ ಸಂಪರ್ಕವನ್ನು ಸಮೀಪದ ಕಳಸ ವ್ಯಾಪ್ತಿಗೆ ಒಳಪಡಿಸುವಂತೆ ಬೆಳ್ತಂಗಡಿ ತಾಲೂಕು ವಿದ್ಯುತ್ ಬಳಕೆದಾರ ಕೃಷಿಕರ ವೇದಿಕೆ ವತಿಯಿಂದ ಗ್ರಾಮಸ್ಥ ಗಜಂತೋಡಿ ಸುದರ್ಶನರಾವ್ ಮನವಿ ಸಲ್ಲಿಸಿದರು.
ಕಡಿರುದ್ಯಾವರ ಗ್ರಾಮ ಪಂಚಾಯಿತಿಯಲ್ಲಿ ನಡೆದ ವಿದ್ಯುತ್ ಅದಾಲತ್ ನಲ್ಲಿ ಈ ವಿಚಾರವಾಗಿ ಚರ್ಚೆ ನಡೆಯಿತು. ಉಜಿರೆ ಉಪ ವಿಭಾಗದ ಎಇಇ ಕ್ಲೆಮೆಂಟ್ ಬೆಂಜಮೀನ್ ಬ್ರ್ಯಾಗ್ಸ್ ಉತ್ತರಿಸಿ ಬೆಳಕು ಯೋಜನೆಯಲ್ಲಿ ಮುಂಡಾಜೆ ಶಾಖಾ ಕೇಂದ್ರದ ವ್ಯಾಪ್ತಿಯಿಂದ ಎಳನೀರು, ಬಂಗಾರಪಲ್ಕೆ ಪ್ರದೇಶದಲ್ಲಿ ಕಾಮಗಾರಿ ನಡೆಯಲಿದೆ. ಇದು ಪೂರ್ಣಗೊಂಡ ಬಳಿಕ ಈ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ದಿಡುಪೆ-ಮುಂಡಾಜೆ ರಸ್ತೆಯ ಕಡಿರುದ್ಯಾವರ ಗ್ರಾಮ ಪ್ರದೇಶದ ಕೆಲವು ವಿದ್ಯುತ್ ಕಂಬಗಳು ತೀರಾ ರಸ್ತೆ ಬದಿ ಇವೆ. ಇದರಿಂದ ಬಸ್ ಸಂಚಾರಕ್ಕೆ ಸಮಸ್ಯೆ ಹಾಗೂ ಪ್ರಯಾಣಿಕ ವಿದ್ಯಾರ್ಥಿಗಳಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ.ಇಲಾಖೆ ತಕ್ಷಣ ಕಂಬಗಳ ಸ್ಥಳಾಂತರ ಮಾಡಬೇಕು ಎಂದು ಇಲ್ಲಿನ ಗ್ರಾಹಕರು ಅದಾಲತ್ ನ ಗಮನಕ್ಕೆ ತಂದರು.
ಕೌಡಂಗೆ ಪರಿಸರದಲ್ಲಿ ವಿದ್ಯುತ್ ಎಚ್ ಟಿ ಲೈನ್ ಬಾಬು ಗೌಡ ಎಂಬವರ ಪಟ್ಟ ಜಾಗದಲ್ಲಿ ಹಾದು ಹೋಗಿದ್ದು ಕೃಷಿ ಚಟುವಟಿಕೆಗಳಿಗೆ ತೊಂದರೆ ಉಂಟಾಗಿದೆ. ಈ ಲೈನ್ ನ್ನು ಸ್ಥಳಾಂತರಿಸುವಂತೆ ತಿಳಿಸಲಾಯಿತು. ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿ ತಿಳಿಸಿದರು.

ಕಕ್ಕಿಂಜೆ ವಿದ್ಯುತ್ ಉಪ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದ್ದು ಮುಂದಿನ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ಪರಿವರ್ತಕಗಳ ಸುತ್ತಲೂ ಬೇಸಿಗೆಯಲ್ಲಿ ಸ್ವಚ್ಛತೆಯನ್ನು ನಡೆಸಿ ಬೆಂಕಿ ಅನಾಹುತ ಉಂಟಾಗದಂತೆ ಮುಂಜಾಗ್ರತೆ ವಹಿಸುವ ಕುರಿತು, ಹಳೆ ತಂತಿ ಬದಲಾವಣೆ, ವೋಲ್ಟೇಜ್ ಸಮಸ್ಯೆ, ಅನಿಯಮಿತ ವಿದ್ಯುತ್ ನಿಲುಗಡೆ ಇತ್ಯಾದಿ ವಿಚಾರಗಳ ಕುರಿತು ಬಳಕೆದಾರರು ಚರ್ಚಿಸಿದರು.
ಬಳಕೆದಾರರ ಪರವಾಗಿ ಸುರೇಶ್ ಕೌಡಂಗೆ, ಉಮೇಶ್ ಗೌಡ, ಲಿಜೋ, ರಾಘವೇಂದ್ರ ಪಟವರ್ಧನ್, ನೋಣಯ್ಯ ಗೌಡ, ಸಂಜೀವ ಗೌಡ ಮೊದಲಾದವರು ಸಮಸ್ಯೆಗಳನ್ನು ತಿಳಿಸಿದರು.
ಕಡಿರುದ್ಯಾವರ ಗ್ರಾಪಂ ಅಧ್ಯಕ್ಷ ಅಶೋಕ ಕುಮಾರ್, ಉಪಾಧ್ಯಕ್ಷ ಬೇಬಿ, ಪಿಡಿಒ ಜಯಕೀರ್ತಿ, ಮೆಸ್ಕಾಂ ಜೆಇ ಕೃಷ್ಣೇಗೌಡ, ಎಇ ಸುಹಾಸ್ ಕುಮಾರ್ ಪವರ್ ಮ್ಯಾನ್ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

error: Content is protected !!