ಕಡಬ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ದಿ ಸಂಘದ ಸಮಾಲೋಚನಾ ಸಭೆ

ಶೇರ್ ಮಾಡಿ

ಕಡಬ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ದಿ ಸಂಘ ಆರ್.ಡಿ.ಪಿ.ಆರ್ ಕಡಬ ತಾಲೂಕು ಸಮಿತಿಯ 5ನೇ ಸಭೆ ಮತ್ತು ದಶಂಬರ್ ತಿಂಗಳಲ್ಲಿ ನಡೆಯುವ ಗ್ರಾಮ ಪಂಚಾಯತ್ ನೌಕರರ ಸಿ ಮತ್ತು ಡಿ ದರ್ಜೆ ಸ್ಥಾನಮಾನದ ಬಗ್ಗೆ ಬೃಹತ್ ಹೋರಾಟದ ಬಗ್ಗೆ ತಾಲೂಕು ಮಟ್ಟದ ಪೂರ್ವ ತಯಾರಿ ಸಭೆಯು ನ.12ರಂದು ಕಡಬ ತಾಲೂಕು ಸಮಿತಿಯ ಅಧ್ಯಕ್ಷರಾದ ಪುಷ್ಪಲತಾ ಗೋಳಿತೊಟ್ಟು ಇವರ ಅಧ್ಯಕ್ಷತೆಯಲ್ಲಿ ಅಲಂಕಾರು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಜರುಗಿತು.
ಸಭೆಯಲ್ಲಿ ದ.ಕ. ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರು ದಯಾನಂದ ಪೆರುವಾಜೆ ಇವರು ಗ್ರಾಮ ಪಂಚಾಯತ್ ನೌಕರರ ಸಮಸ್ಯೆಗಳ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡಿದರು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಒಟ್ಟಾಗಿ ಒಗ್ಗಟ್ಟಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮತ್ತು ದಶಂಬರ್ 12ಕ್ಕೆ ನಡೆಯುವ ಬೃಹತ್ ಹೋರಾಟದಲ್ಲಿ ಎಲ್ಲಾ ಗ್ರಾಮ ಪಂಚಾಯತ್ ನ ಎಲ್ಲಾ ಸಿಬ್ಬಂದಿಗಳು ಬಾಗವಹಿಸಿ ಸಂಘಕ್ಕೆ ನಮ್ಮ ಬೆಂಬಲವನ್ನು ಸೂಚಿಸಿ ನಮ್ಮ ಬೇಡಿಕೆ ಇಡೇರುವಲ್ಲಿ ಸಹಕರಿಸೋಣ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಡಬ ತಾಲೂಕು ಹೋರಾಟ ಸಮಿತಿ ಅಧ್ಯಕ್ಷರು ಹರೀಶ್ ಪೆರಾಬೆ ಇವರು ಪ್ರಸ್ತಾವಿಕವಾಗಿ ಮಾತನಾಡಿ ಸಂಘದ ಬೆಳವಣಿಗೆ ಮತ್ತು ರಾಜ್ಯಾಧ್ಯಕ್ಷರು ಈಗಾಗಲೇ ನೀಡಿರುವ ನಿರ್ದೇಶನ, ಮತ್ತು ಗ್ರಾಮ ಪಂಚಾಯತ್ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮತ್ತು ಮುಂಬರುವ ದಶಂಬರ್ ತಿಂಗಳ 12ನೆ ತಾರೀಕಿನಂದು ನಡೆಯುವ ಹೋರಾಟಕ್ಕೆ ಎಲ್ಲರ ಬೆಂಬಲ ಮತ್ತು ಕಡಬ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ವಿವರಿಸಿದರು.
ದಶಂಬರ್ 12ರಂದು ನಡೆಯುವ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ದಿ ಸಂಘ ಆರ್.ಡಿ.ಪಿ.ಆರ್ ರಾಜ್ಯ ಸಮಿತಿ ಬೆಂಗಳೂರು ಇದರ ರಾಜ್ಯಾಧ್ಯಕ್ಷರು ಡಾ.ದೇವಿಪ್ರಸಾದ್ ಬೋಲ್ಮ ಇವರ ನೇತೃತ್ವದ ತಂಡದೊಂದಿಗೆ ಬೆಳಗಾವಿಯಲ್ಲಿ ಬೃಹತ್ ಹೋರಾಟಕ್ಕೆ ಕಡಬ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ನ ಎಲ್ಲಾ ನೌಕರರು ಭಾಗವಹಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷರು ನೇತ್ರಾವತಿ ಮರ್ಕಂಜ ಮತ್ತು ಕಾರ್ಯದರ್ಶಿ ಗಿರಿಧರ ಕಳಂಜ, ಸುಳ್ಯ ತಾಲೂಕು ಹೋರಾಟ ಸಮಿತಿ ಅಧ್ಯಕ್ಷರು ಪುಟ್ಟರಾಜು, ದ.ಕ.ಜಿಲ್ಲಾಸಮಿತಿ ಪಧಾಧಿಕಾರಿ ಮತ್ತು ಕಡಬ ತಾಲೂಕು ಹೋರಾಟ ಸಮಿತಿ (ಮಹಿಳಾ) ಇದರ ಅಧ್ಯಕ್ಷೆ ಮಮತಾ ಬೆಳಂದೂರು ಇವರುಗಳು ಮಾತನಾಡಿ ಸಂಘದ ಆಗುಹೋಗುಗಳ ಬಗ್ಗೆ ವಿವರಿಸಿದರು.
ಸದ್ರಿ ಸಭೆಯಲ್ಲಿ ಕಡಬ ತಾಲೂಕಿನ 21 ಗ್ರಾಮ ಪಂಚಾಯತನ್ನು 4 ವಲಯಗಳನ್ನಾಗಿ ಮಾಡಿ ವಲಯ ಸಮಿತಿಯನ್ನು ರಚಿಸಲಾಯಿತು. ಕಡಬ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಸಿಬ್ಬಂದಿಗಳಲ್ಲಿ ಶೇ 95 ಈಗಾಗಲೇ ಸಂಘದ ಸದಸ್ಯತ್ವ ನೋಂದಾವಣೆಯಾಗಿದ್ದು, ಶೇ.5ರಷ್ಟು ಮಾತ್ರ ಬಾಕಿ ಇದ್ದು ಈ ತಿಂಗಳ ಅಂತ್ಯಕ್ಕೆ ಶೇ.100 ಸಾದಿಸಿ ಸಂಘಕ್ಕೆ ಸಂಪೂರ್ಣ ಸದಸ್ಯತ್ವವನ್ನು ಮಾಡಿಸುವುದಾಗಿ ನಿರ್ಣಯಿಸಲಾಯಿತು.
ಸದ್ರಿ ಸಭೆಯಲ್ಲಿ ಅಂತರ್ ಜಿಲ್ಲೆಯಲ್ಲಿ ಸಭೆಯಲ್ಲಿದ್ದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ದಿ ಸಂಘ ಆರ್.ಡಿ.ಪಿ.ಆರ್ ರಾಜ್ಯ ಸಮಿತಿಯ ಅಧ್ಯಕ್ಷರಾದ ಡಾ ದೇವಿಪ್ರಸಾದ್ ಬೋಲ್ಮ ಇವರು ದೂರವಾಣಿ ಮುಖಾಂತರ ಸಭೆಯನ್ನುದ್ದೇಶಿಸಿ ಮಾತನಾಡಿ ಗ್ರಾಮ ಪಂಚಾಯತ್ ನೌಕರರ ಬೇಡಿಕೆ ಈಡೇರುವಲ್ಲಿ ಎಲ್ಲರು ಒಗ್ಗಟ್ಟಾಗಿ ಶ್ರಮಿಸೋಣ ಯಶಸ್ವಿಯನ್ನು ಖಂಡಿತಾ ಕಾಣುತ್ತೇವೆ ಎಂಬುದಾಗಿ ತಮ್ಮ ಹಿತನುಡಿಗಳನ್ನು ತಿಳಿಸಿದರು.
ಸದ್ರಿ ಸಭೆಯಲ್ಲಿ ಕಡಬ ತಾಲೂಕು ಸಮಿತಿ ಅಧ್ಯಕ್ಷೆ ಪುಷ್ಪಲತಾ ಇವರು ಸಭೆಯನ್ನುದ್ದೇಶಿಸಿ ಮಾತನಾಡಿ ನಮ್ಮ ಬೇಡಿಕೆಗಳ ಬಹಳಷ್ಟು ಮನವಿಗಳನ್ನು ನೀಡಿದ್ದರೂ ನಮ್ಮ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ಈಗಾಗಲೆ ನಿಗದಿಯಾಗಿರುವ ದಿನಾಂಕಕ್ಕೆ ಬೃಹತ್ ಹೋರಾಟಕ್ಕೆ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿ ನಮ್ಮೆಲ್ಲರ ಬೆಂಬಲವನ್ನು ನೀಡೋಣ. ಮತ್ತು ನಮ್ಮ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವಲ್ಲಿ ತಾಲೂಕು ಸಮಿತಿಯು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ. ತಾಲೂಕು ಸಮಿತಿಯ ಇಂದಿನ ಸಭೆಯ ಎಲ್ಲಾ ತೀರ್ಮಾನಗಳಿಗೆ ಎಲ್ಲರ ಸಹಕರಾವನ್ನು ಕೋರಿದರು.
ಸದ್ರಿ ಸಭೆಯಲ್ಲಿ ತಾಲೂಕು ಸಮಿತಿಯ ಪದಾಧಿಕಾರಿಗಳು ತಾಲೂಕು ಹೋರಾಟ ಸಮಿತಿಯ ಪದಾಧಿಕಾರಿಗಳು ಮತ್ತು ಕಡಬ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ನ ಸಿಬ್ಬಂದಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕೊಂಬಾರು ಗ್ರಾಮ ಪಂಚಾಯತ್ ಸಿಬ್ಬಂದಿ ಲೋಕನಾಥ್ ಇವರು ಕಾರ್ಯಕ್ರಮವನ್ನು ನಿರೂಪಿಸಿ ತಾಲೂಕು, ಸಮಿತಿ ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಇವರು ವರದಿ ವಾಚಿಸಿದರು.

Leave a Reply

error: Content is protected !!