ಅಂಗಾಂಗ ದಾನ ಮಾಡಿ ಸಮಾಜಕ್ಕೆ ಮಾದರಿಯಾದ ಯುವಕನ ಕುಟುಂಬಕ್ಕೆ ಸಿಎಂ ನಿಧಿಯಿಂದ 5 ಲಕ್ಷ ರೂ. ನೆರವು

ಶೇರ್ ಮಾಡಿ

ಮಂಗಳೂರು: ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಆರು ಜನರಿಗೆ ಹೊಸ ಬಾಳು ನೀಡಲು ನಿರ್ಧರಿಸಿದ ಕುಟುಂಬಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ನಿಧಿಯಿಂದ ಐದು ಲಕ್ಷ ರೂ. ನೆರವು ನೀಡಲಾಗುತ್ತಿದೆ.

ಅಂಗಾಂಗ ದಾನಿ ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಯಶರಾಜ್ (16) ಅವರು 2022 ರ ಸೆಪ್ಟೆಂಬರ್ 7 ರಂದು ಕಾಲೇಜಿಗೆ ತೆರಳುತ್ತಿದ್ದಾಗ ಆದಂಕುದ್ರು ಬಳಿ ಸಿಟಿ ಬಸ್‌ನಿಂದ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ತತ್ ಕ್ಷಣವೇ ಇಂಡಿಯಾನಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅಲ್ಲಿ ವೈದ್ಯರು ಸೆಪ್ಟೆಂಬರ್ 13 ರಂದು ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದ್ದರು.
ಯಶರಾಜ್ ಅವರ ಪೋಷಕರು ಅವರ ಅಂಗಾಂಗಗಳನ್ನು ದಾನ ಮಾಡುವ ಉದಾತ್ತ ನಿರ್ಧಾರವನ್ನು ತೆಗೆದುಕೊಂಡು ಸಮಾಜಕ್ಕೆ ಮಾದರಿಯಾಗಿದ್ದರು. ಕುಟುಂಬಸ್ಥರನ್ನು ಭೇಟಿ ಮಾಡಿದ ಶಾಸಕ ಯು.ಟಿ. ಖಾದರ್ ಅವರ ನಿರ್ಧಾರವನ್ನು ಶ್ಲಾಘಿಸಿ ಸಿಎಂ ವಿಶೇಷ ಅನುದಾನದಿಂದ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಸಾರ್ವಜನಿಕರಲ್ಲಿ ಅಂಗಾಂಗ ದಾನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದ್ದರು.
ಇತ್ತೀಚೆಗಷ್ಟೇ ಕುತ್ತಾರ್‌ನಲ್ಲಿ ಅಪಘಾತದಲ್ಲಿ ನಿಧನ ಹೊಂದಿದ ಬಳಿಕ ಅಂಗಾಂಗ ದಾನ ಮಾಡಿರುವ ಭೂಷಣ್‌ ರೈ ಅವರ ಕುಟುಂಬಕ್ಕೆ ಸಿಎಂ ನಿಧಿಯಿಂದ ಅನುದಾನ ನೀಡುವಂತೆ ಮನವಿ ಮಾಡಿರುವುದಾಗಿ ಶಾಸಕ ಖಾದರ್‌ ತಿಳಿಸಿದ್ದಾರೆ. ರೈ ಕುಟುಂಬಕ್ಕೆ ಪರಿಹಾರ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ.

Leave a Reply

error: Content is protected !!